- ಹಿಂದೆ ಕಾಂಗ್ರೆಸ್ನಲ್ಲಿದ್ದಾಗ ಸಿದ್ದರಾಮಯ್ಯ ಪರ ನಾನು ಕೆಲಸ ಮಾಡಿದ್ದೆ
- ಅಮಿತ್ ಶಾ ಸೂಚನೆಯಂತೆ ಚಾಮರಾಜನಗರದಲ್ಲಿ ಕೆಲಸ ಮಾಡುತ್ತಿದ್ದೇನೆ
ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಸರ್ವೋಚ್ಛ ನಾಯಕರು, ರಾಜ್ಯದ ದೊಡ್ಡ ಲೀಡರ್, ಅವರು ಎಲ್ಲಿ ನಿಲ್ಲಬೇಕು ಎಂಬುದು ಅವರ ಹೈಕಮಾಂಡ್ ನಿರ್ಧಾರ ಮಾಡುತ್ತದೆ. ಅದರ ಬಗ್ಗೆ ನಾನೇನೂ ಮಾತನಾಡುವುದಿಲ್ಲ ಎಂದು ವಸತಿ ಸಚಿವ ವಿ ಸೋಮಣ್ಣ ಹೇಳಿದರು.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸೋಮಣ್ಣ, “ನನ್ನ ಪಕ್ಷ ನನಗೆ ಹಲವು ಜವಾಬ್ದಾರಿಗಳನ್ನು ನೀಡಿದೆ. ಪಕ್ಷದ ಮುಖಂಡರಾದ ಅಮಿತ್ ಶಾ ಚಾಮರಾಜನಗರ ಜಿಲ್ಲೆಯಲ್ಲಿ ಕೆಲಸ ಮಾಡುವಂತೆ ಸೂಚನೆ ನೀಡಿದ್ದಾರೆ. ಅದರಂತೆ ಕಾರ್ಯನಿರ್ವಹಿಸುತ್ತಿರುವೆ” ಎಂದು ಹೇಳಿದರು.
ಇದೇ ವೇಳೆ ಸಿದ್ದರಾಮಯ್ಯ ಎದುರು ಸೋಮಣ್ಣ ಸ್ಪರ್ಧಿಸಲಿದ್ದಾರೆ ಎನ್ನುವ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ನಮ್ಮ ಪಕ್ಷದಲ್ಲಿ ಸಿದ್ದರಾಮಯ್ಯ ಎದುರು ಸ್ಪರ್ಧಿಸುವ ಸಮರ್ಥ ಅಭ್ಯರ್ಥಿಗಳಿದ್ದಾರೆ. ನಾನು ಬೇರೆಯವರ ರೀತಿ ಏನೇನೋ ಮಾತನಾಡಲ್ಲ, ಈಗಾಗಲೇ ನನಗೆ ನನ್ನ ಕ್ಷೇತ್ರ ಇದೆ. ಚಾಮರಾಜನಗರಕ್ಕೆ ಹೋಗಿ ಕೆಲಸ ಮಾಡುವಂತೆ ವರಿಷ್ಠರು ಸೂಚನೆ ಕೊಟ್ಟಿದ್ದಾರೆ. ಹೀಗಿರುವಾಗ ನಾನ್ಯಾಕೆ ವರುಣಾಗೆ ಹೋಗಿ ನಿಲ್ಲಲಿ, ಎಂದು ಪ್ರಶ್ನಿಸಿದರು.
ನನಗೆ ಪಕ್ಷ ಏನೇ ಕೆಲಸ ಕೊಟ್ಟರೂ ಮಾಡುತ್ತೇನೆ. ಹಿಂದೆ ಕಾಂಗ್ರೆಸ್ನಲ್ಲಿದ್ದಾಗ ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಉಪ ಚುನಾವಣೆಗೆ ನಿಂತಾಗ ನಾನು ಕೆಲಸ ಮಾಡಿದ್ದೆ. 42 ಬೂತ್ ಜವಾಬ್ದಾರಿ ತೆಗೆದುಕೊಂಡಿದ್ದೆ. ಚುನಾವಣೆಯಲ್ಲಿ ಶಕ್ತಿಗಿಂತ ಅದೃಷ್ಟ ಮುಖ್ಯ, ಅದಕ್ಕಿಂತ ಮುಖ್ಯವಾಗಿ ಸಿದ್ದರಾಮಯ್ಯ ರಾಜ್ಯದಲ್ಲಿ ಸರ್ವೋಚ್ಚ ನಾಯಕರು ಎಂದು ಸೋಮಣ್ಣ ತಿಳಿಸಿದರು.
ಇದೇ ವೇಳೆ ತಮ್ಮ ಸ್ಪರ್ಧಾ ಕ್ಷೇತ್ರದ ಗೊಂದಲದ ಬಗ್ಗೆ ಸ್ಪಷ್ಟನೆ ನೀಡಿದ ಸೋಮಣ್ಣ, ನಾನು ಹನೂರು ಕ್ಷೇತ್ರದಲ್ಲಿ ನಿಲ್ಲುತ್ತೇನೆ ಎಂದರೆ ಯಾರೂ ಬೇಡ ಎನ್ನಲ್ಲ. ಸದ್ಯ ನನಗೆ ಗೋವಿಂದರಾಜ ನಗರ ಕ್ಷೇತ್ರವಿದೆ ಎಂದರು.