- ಮತದಾರರ ತೀರ್ಪು ಸ್ವಾಗತಿಸಿದ ಬಿಜೆಪಿ
- ಕಾಂಗ್ರೆಸ್ಗೆ ಅಭಿನಂದನೆ ಸಲ್ಲಿಸಿದ ಕಟೀಲ್
ರಾಜ್ಯ ಬಿಜೆಪಿ ಸೋಲಿನ ಹೊಣೆಯನ್ನು ರಾಜ್ಯಾಧ್ಯಕ್ಷನಾಗಿ ತಾವೇ ಹೊತ್ತುಕೊಳ್ಳುವುದಾಗಿ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಕರ್ನಾಟಕ ಚುನಾವಣಾ ಫಲಿತಾಂಶ ಬಂದಿದೆ. ಜನರ ಆಯ್ಕೆಯನ್ನು ನಾವು ಗೌರವಿಸುತ್ತೇವೆ. ಹಾಗೆಯೇ ಆಯ್ಕೆಯಾಗಿರುವ ಬಿಜೆಪಿ ಅಭ್ಯರ್ಥಿಗಳಿಗೂ ಅಭಿನಂದನೆ ಸಲ್ಲಿಸ್ತೇನೆ ಎಂದು ಹೇಳಿದರು.
ಬಿಜೆಪಿ ಅಧ್ಯಕ್ಷನಾಗಿ ನಾನೂ ಕಾಂಗ್ರೆಸ್ ಪಕ್ಷವನ್ನೂ ಅಭಿನಂದಿಸುತ್ತೇನೆ. ರಾಜ್ಯ ಒಳ್ಳೆಯ ಕಾರ್ಯಗಳಿಗೆ ಸ್ವಾಗತ ಕೊಟ್ಟಿದ್ದೇವೆ. ವಿರೋಧಕ್ಕೆ ವಿರೋಧ ಮಾಡಿದ್ದೇವೆ. ಹಾಗೆ ನಮ್ಮ ಮತದಾರರಿಗೂ ಅಭಿನಂದನೆ ಸಲ್ಲಿಸ್ತೇನೆ ಎಂದವರು ಹೇಳಿದರು.
ನಮ್ಮ ಕಾರ್ಯಕರ್ತರು ಹಗಲು, ರಾತ್ರಿ ಕೆಲಸ ಮಾಡಿದ್ದಾರೆ. ನಮ್ಮ ಸರ್ಕಾರ ಉತ್ತಮ ಕೆಲಸ ಮಾಡಿದೆ. ಯಡಿಯೂರಪ್ಪ, ಬೊಮ್ಮಾಯಿ ಅವರು ಕೆಲಸ ಮಾಡಿದ್ದಾರೆ. ಬಿಜೆಪಿ ಸೋಲಿಗೆ ರಾಜ್ಯಾಧ್ಯಕ್ಷ ಆಗಿ ನಾನು ಹೊಣೆ ಹೊರುತ್ತೇನೆ. ಇಂದು ಬಂದಿರೋ ಫಲಿತಾಂಶ ನಾನು ಸ್ವಾಗತಿಸ್ತೇನೆ ಎಂದರು.
ಈ ಸುದ್ದಿ ಓದಿದ್ದೀರಾ? : ಕಾಂಗ್ರೆಸ್ಗೆ ಭರ್ಜರಿ ಮುನ್ನಡೆ; ಜೈಲಿನಲ್ಲಿದ್ದ ಕಹಿ ಘಟನೆ ನೆನೆದು ಕಣ್ಣೀರಿಟ್ಟ ಡಿಕೆಶಿ
ಇನ್ನು ಮೋದಿ ರ್ಯಾಲಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಕೆಲವೆಡೆ ಜನರು ಖುಷಿ ಆಗಿದ್ದಾರೆ ಇದಕ್ಕೆ ಸಂತಸವಿದೆ. ಹಾಗೆಯೇ ತುಂಬಾ ಕಡೆ ಗೆದ್ದಿದ್ದೇವೆ. ಸೋತಿರುವ ಕಡೆ ಯಾಕೆ ಸೋತಿದ್ದೇವೆ ಅಂತ ಪರಾಮರ್ಶೆ ಮಾಡುತ್ತೇವೆ. ಮುಂದಿನ ಲೋಕಸಭಾ ಚುನಾವಣೆಗೆ ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದು ಹೇಳಿದರು.
ಮತ್ತೊಂದೆಡೆ ಇದೇ ವಿಚಾರವಾಗಿ ಮಾತನಾಡಿದ ಸಿಎಂ ಬೊಮ್ಮಾಯಿ, ನಾವು ಕರ್ನಾಟಕದ ಜನತೆಯ ತೀರ್ಪನ್ನು ಗೌರವದಿಂದ ಸ್ವೀಕರಿಸುತ್ತೇವೆ. ನಾವು ನಮ್ಮ ತಪ್ಪುಗಳನ್ನು ವಿಶ್ಲೇಷಿಸಿ, ಸರಿಪಡಿಸಿಕೊಂಡು, ಪಕ್ಷವನ್ನು ಪುನಃ ಸಂಘಟಿಸಿ, ಸಂಸತ್ ಚುನಾವಣೆಯ ವೇಳೆಯಲ್ಲಿ ಮತ್ತೊಮ್ಮೆ ಪುನರಾಗಮಿಸುತ್ತೇವೆ ಎಂದಿದ್ದಾರೆ.