ಕೆಲವು ದಿನಗಳ ಹಿಂದೆ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಕೂಟವನ್ನು ನವೀನ್ ಪಟ್ನಾಯಕ್ ನೇತೃತ್ವದ ಬಿಜು ಜನತಾ ದಳ (ಬಿಜೆಡಿ) ಸೇರುವ ಸುದ್ದಿಯಾಗಿತ್ತು. ಆದರೆ ಈಗ ಬಿಜೆಡಿ ಜೊತೆ ಮೈತ್ರಿ ಮಾತುಕತೆಗೆ ಬಿಜೆಪಿ ಬ್ರೇಕ್ ಹಾಕಿದ್ದು, ಒಡಿಶಾದಲ್ಲಿ ಏಕಾಂಗಿಯನ್ನು ಕಣಕ್ಕಿಳಿಯುವ ಸುಳಿವನ್ನು ನೀಡಿದೆ.
ಲೋಕಸಭೆ ಚುನಾವಣೆ ಮತ್ತು ವಿಧಾನಸಭೆ ಚುನಾವಣೆಯಲ್ಲಿ ಉಭಯ ಪ್ರಕ್ಷಗಳು ಮೈತ್ರಿಯ ಮಾತುಕತೆಯನ್ನು ದೆಹಲಿಯಲ್ಲಿ ನಡೆಸಿದ್ದು, ಭುವನೇಶ್ವರ ಮತ್ತು ಪುರಿ ಕ್ಷೇತ್ರದಲ್ಲಿ ಸ್ಪರ್ಧೆಯ ವಿಚಾರದಲ್ಲಿ ಭಿನ್ನಾಭಿಪ್ರಾಯದಿಂದಾಗಿ ಈ ಮಾತುಕತೆ ವಿಫಲವಾಗಿದೆ.
ಮೈತ್ರಿ ಸಭೆಯ ಬಳಿಕ ಭುವನೇಶ್ವರಕ್ಕೆ ವಾಪಾಸ್ ಆದ ಬಿಜೆಪಿ ಒಡಿಶಾ ರಾಜ್ಯ ಅಧ್ಯಕ್ಷ ಮನಮೋಹನ ಸಮಲ್, “ಬಿಜೆಡಿ ಜೊತೆಗಿನ ಮೈತ್ರಿ ಮಾತುಕತೆಯು ಅಪೂರ್ಣವಾಗಿದೆ. ಲೋಕಸಭೆ ಚುನಾವಣೆಯಲ್ಲಿ 21 ಕ್ಷೇತ್ರಗಳಲ್ಲಿ, ವಿಧಾನಸಭೆ ಚುನಾವಣೆಯಲ್ಲಿ ಎಲ್ಲ 147 ಕ್ಷೇತ್ರದಲ್ಲಿ ಬಿಜೆಪಿ ಏಕಾಂಗಿಯಾಗಿ ಸ್ಪರ್ಧಿಸಲಿದೆ,” ಎಂದು ತಿಳಿಸಿದರು.
“ನಾವು ಮುಂದಿನ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಯ ತಯಾರಿಯ ಬಗ್ಗೆ ಕೇಂದ್ರ ನಾಯಕರೊಂದಿಗೆ ಮಾತನಾಡಲು ದೆಹಲಿಗೆ ಹೋಗಿದ್ದೆವು. ಈ ಸಭೆಯಲ್ಲಿ ಇತರೆ ಪಕ್ಷಗಳೊಂದಿಗೆ ಸೀಟು ಹಂಚಿಕೆ ಅಥವಾ ಮೈತ್ರಿ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ. ಬಿಜೆಪಿ ಎರಡೂ ಚುನಾವಣೆಯಲ್ಲಿ ತನ್ನ ಸ್ವಂತ ಬಲದಿಂದ ಸ್ಪರ್ಧಿಸಲಿದೆ,” ಎಂದು ಮನಮೋಹನ ಸಮಲ್ ಮಾಹಿತಿ ನೀಡಿದ್ದಾರೆ.
ಬುಧವಾರ, ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ರ ನಿವಾಸದಲ್ಲಿ ಬಿಜೆಡಿ ನಾಯಕರ ಸಭೆ ನಡೆದಿದ್ದು, ಈ ಸಂದರ್ಭದಲ್ಲೇ ಬಿಜೆಪಿಯ ರಾಜ್ಯ ಘಟಕದ ಮುಖ್ಯಸ್ಥ ಮನಮೋಹನ್ ಸಮಲ್ ಸೇರಿದಂತೆ ಬಿಜೆಪಿಯ ಮುಖಂಡರುಗಳು ನವದೆಹಲಿಯಲ್ಲಿ ಸಭೆ ನಡೆಸಿರುವುದು ಚರ್ಚೆಗೆ ಗ್ರಾಸವಾಗಿತ್ತು.
ಸುಮಾರು 15 ವರ್ಷಗಳ ಹಿಂದೆ ಎನ್ಡಿಎಯಿಂದ ದೂರ ಸರಿದಿದ್ದ ಬಿಜೆಡಿ ಮತ್ತೆ ಕೂಟವನ್ನು ಸೇರುವ ಸುಳಿವು ನೀಡಿತ್ತು. ಬಿಜೆಡಿ ಉಪಾಧ್ಯಕ್ಷ ಮತ್ತು ಶಾಸಕ ದೇಬಿ ಪ್ರಸಾದ್ ಮಿಶ್ರಾ, “ಒಡಿಶಾದ ಜನರ ಹಿತಾಸಕ್ತಿಗೆ ಎಂದಿಗೂ ಬಿಜು ಜನತಾ ದಳವು ಆದ್ಯತೆ ನೀಡುತ್ತದೆ. ಹೌದು, ಈ ವಿಷಯದ (ಮೈತ್ರಿ) ಬಗ್ಗೆ ಚರ್ಚೆ ನಡೆದಿದೆ,” ಎಂದು ತಿಳಿಸಿದ್ದರು.
ಇನ್ನೊಂದೆಡೆ ಬಿಜೆಪಿಯಲ್ಲಿ ಹಿರಿಯ ನಾಯಕ ಮತ್ತು ಸಂಸದ ಜುಯಲ್ ಓರಮ್, ದೆಹಲಿಯಲ್ಲಿ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ಬಳಿಕ ಬಿಜೆಡಿಯೊಂದಿಗೆ ಚುನಾವಣಾ ಪೂರ್ವ ಮೈತ್ರಿ ಬಗ್ಗೆ ಚರ್ಚೆ ನಡೆಸಲಾಗಿದೆ ಎಂದು ಖಚಿತಪಡಿಸಿದ್ದರು. ಆದರೆ ಅಂತಿಮ ನಿರ್ಧಾರ ಪಕ್ಷದ ಕೇಂದ್ರ ನಾಯಕತ್ವದ್ದು ಎಂದು ಹೇಳಿದ್ದರು.
ಸೀಟು ಹಂಚಿಕೆಯಲ್ಲಿ ಭಿನ್ನಾಭಿಪ್ರಾಯ
ಉಭಯ ಪಕ್ಷಗಳ ನಡುವೆ ಮೈತ್ರಿಗೆ ಒಮ್ಮತವಿದ್ದರೂ ಕೂಡಾ ಸೀಟು ಹಂಚಿಕೆ ವಿಚಾರದಲ್ಲಿ ಭಿನ್ನಾಭಿಪ್ರಾಯವಿದೆ ಎಂದು ವರದಿಯಾಗಿದೆ. ಬಿಜೆಡಿಯು ವಿಧಾನಸಭೆ ಚುನಾವಣೆಯಲ್ಲಿ 147 ಕ್ಷೇತ್ರಗಳ ಪೈಕಿ 100ರಲ್ಲಿ ಸ್ಪರ್ಧೆಗೆ ಇಳಿಯುವುದಾಗಿ ಹೇಳಿದ್ದು, ಇದಕ್ಕೆ ಬಿಜೆಪಿ ಸಮ್ಮತಿಸಿಲ್ಲ. ಇದರ ಬದಲಾಗಿ ಲೋಕಸಭೆ ಚುನಾವಣೆಯಲ್ಲಿ 21 ಕ್ಷೇತ್ರಗಳ ಪೈಕಿ 14 ಸೀಟುಗಳನ್ನು ನಮಗೆ ನೀಡಬೇಕೆಂದು ಬಿಜೆಪಿ ಹೇಳಿದ್ದು, ಇದಕ್ಕೆ ಬಿಜೆಡಿ ಒಪ್ಪಿಲ್ಲ ಎಂದು ವರದಿಯಾಗಿದೆ.
2019 ರ ಚುನಾವಣೆಯಲ್ಲಿ, ಬಿಜೆಡಿ ಮತ್ತು ಬಿಜೆಪಿ 21 ಸಂಸದೀಯ ಕ್ಷೇತ್ರದಲ್ಲಿ ಕ್ರಮವಾಗಿ 12 ಮತ್ತು 8 ಸ್ಥಾನಗಳನ್ನು ತನ್ನದಾಗಿಸಿಕೊಂಡಿದೆ. ಇನ್ನು 147 ವಿಧಾನಸಭಾ ಕ್ಷೇತ್ರದಲ್ಲಿ ಕ್ರಮವಾಗಿ 112 ಮತ್ತು 23 ಕ್ಷೇತ್ರವನ್ನು ಗೆದ್ದಿದೆ.