- ಸುರ್ಜೇವಾಲ ವಿರುದ್ದ ರಾಜ್ಯಪಾಲರಿಗೆ ದೂರು ನೀಡಲು ಮುಂದಾದ ಬಿಜೆಪಿ
- ಸಂಸದ ಪ್ರತಾಪ್ ಸಿಂಹ ಎಳಸು, ಆತನಿಗೆ ರಾಜಕೀಯ ಪಕ್ವತೆ ಇಲ್ಲ ಎಂದ ಸಿಎಂ
ಬಿಬಿಎಂಪಿ ಚುನಾವಣೆ ತಯಾರಿ ಹಿನ್ನೆಲೆಯಲ್ಲಿ ಖಾಸಗಿ ಹೋಟೆಲ್ನಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ನಡೆಸಿದ್ದ ಸಭೆ ಸರ್ಕಾರದ ಅಧಿಕೃತ ಸಭೆಯಲ್ಲ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸುರ್ಜೇವಾಲ ಪಕ್ಷದ ಶಾಸಕರೊಂದಿಗೆ ಖಾಸಗಿ ಹೋಟೆಲ್ ನಲ್ಲಿ ಸಭೆ ನಡೆಸುತ್ತಿದ್ದರು. ಅದು ಅಧಿಕಾರಿಗಳ ಸಭೆಯಲ್ಲ ಎಂದು ಸಿಎಂ ಹೇಳಿ, ಸಭೆ ಹಿನ್ನೆಲೆ ವಿವರಿಸಿದರು.
ಇತ್ತ ಸಭೆ ನಡೆಯುತ್ತಿದ್ದ ಸಂದರ್ಭದಲ್ಲೇ ಹೆಬ್ಬಾಳ ಸಂಚಾರದಟ್ಟಣೆ ಪರಿಶೀಲಿಸಲು ಡಿಸಿಎಂ ಶಿವಕುಮಾರ್ ಆ ಮಾರ್ಗ ತೆರಳುತ್ತಿದ್ದರು. ಅವರು ಸುರ್ಜೇವಾಲರನ್ನು ಭೇಟಿ ಮಾಡಲು ತೆರಳಿದಾಗ ಜೊತೆಯಲ್ಲಿದ್ದ ಅಧಿಕಾರಿಗಳು ಅವರೊಂದಿಗೆ ತೆರಳಿ ಸೌಜನ್ಯದ ಮಾತುಕತೆ ನಡೆಸಿದ್ದಾರೆ ಎಂದು ಹೇಳಿದರು.
ಸುರ್ಜೇವಾಲಗೆ ಅಧಿಕಾರಿಗಳ ಸಭೆ ಕರೆಯಲು ಆಗುತ್ತದೆಯೇ? ಅಥವಾ ಅವರೇಕೆ ಹಾಗೆ ಮಾಡುತ್ತಾರೆ ಎಂದ ಸಿದ್ದರಾಮಯ್ಯ ಕುಮಾರಸ್ವಾಮಿ ಸುಮ್ಮನೆ ಇಲ್ಲದ ಆರೋಪ ಮಾಡುತ್ತಾರೆ ಎಂದರು.
ಬಿಜೆಪಿಯವರು ಸಣ್ಣಸಣ್ಣ ವಿಚಾರವನ್ನು ದೊಡ್ಡದು ಮಾಡುತ್ತಾರೆ. ಈ ವಿಚಾರದಲ್ಲಿ ಅವರೇನೋ ರಾಜ್ಯಪಾಲರಿಗೆ ದೂರು ಕೊಡುತ್ತಾರಂತೆ, ಕೊಡಲಿ ಬಿಡಿ. ನಾವೂ ರಾಜ್ಯಪಾಲರಿಗೆ ವಿಚಾರದ ಸ್ಪಷ್ಟನೆ ನೀಡುತ್ತೇವೆ ಎಂದು ಹೇಳಿದರು.
ಪ್ರತಾಪ್ ಸಿಂಹ ಎಳಸು
ಹೊಂದಾಣಿಕೆ ರಾಜಕಾರಣದ ಆರೋಪ ಮಾಡಿರುವ ಮೈಸೂರು ಸಂಸದ ಪ್ರತಾಪ್ ಸಿಂಹ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಿಎಂ, ಆತ ಎಳಸು, ಆತನಿಗೆ ರಾಜಕೀಯದ ಪಕ್ವತೆ ಇಲ್ಲ. ಬಾಯಿಗೆ ಬಂದಂತೆ ಏನೇನೋ ಮಾತಾಡ್ತಾನೆ ಎಂದ ಸಿಎಂ ಆರೋಪ ಮಾಡುವ ಆತ ಮೊದಲು ನೇರವಾಗಿ ಹೊಂದಾಣಿಕೆ ಮಾಡಿಕೊಂಡವರ ಹೆಸರು ಹೇಳಲಿ. ಅದಕ್ಕೇಕೆ ಹಿಂಜರಿಕೆ ಎಂದರು.
ಈ ಸುದ್ದಿ ಓದಿದ್ದೀರಾ?:ಧಮ್ಮು, ತಾಕತ್ತು ಇದ್ದರೆ ಅಡ್ಜಸ್ಮೆಂಟ್ ಮಾಡಿಕೊಂಡವರ ಹೆಸರು ಹೇಳಿ: ಸಿ ಟಿ ರವಿಗೆ ಕಾಂಗ್ರೆಸ್ ಸವಾಲು
ಪ್ರತಾಪ್ ಸಿಂಹ ಹೇಳಿದ ತಕ್ಷಣ ಅವನು ಆಗ್ರಹಿಸುವ ವಿಚಾರಗಳ ತನಿಖೆ ಮಾಡಿಸಲು ಆಗುತ್ತದೆಯೇ? ನಾವು ಯಾವಾಗ ಯಾವುದರ ತನಿಖೆ ಮಾಡಿಸಬೇಕು, ಯಾರಿಂದ ತನಿಖೆ ಮಾಡಿಸಬೇಕು ಎನ್ನುವುದನ್ನು ತಿಳಿದುಕೊಂಡಿದ್ದೇವೆ ಎಂದು ಪ್ರತಾಪ್ ಸಿಂಹಗೆ ತಿರುಗೇಟು ನೀಡಿದರು.
ನಾನು ಅಧಿಕಾರದಲ್ಲಿರುವಾಗ ವಿಪಕ್ಷದವರ ಜತೆ ಮಾತಾಡುವುದಿಲ್ಲ. ಅವರ ಮನೆಗೂ ಹೋಗುವುದಿಲ್ಲ, ಅವರೇ ಏನಾದರೂ ಬಂದರೆ ಸೌಜನ್ಯಕ್ಕೆ ಮಾತನಾಡುತ್ತೇನೆಯೇ ಹೊರತು ರಾಜಕೀಯವನ್ನೆಂದೂ ಮಾತಾಡುವುದಿಲ್ಲ ಎಂದು ಸಿದ್ದರಾಮಯ್ಯ ಇದೇ ವೇಳೆ ಸ್ಪಷ್ಟಪಡಿಸಿದರು.
ರಾಜ್ಯಪಾಲರಿಗೆ ದೂರು
ಸರ್ಕಾರಿ ಅಧಿಕಾರಿಗಳೊಂದಿಗೆ ಖಾಸಗಿ ಹೋಟೆಲ್ನಲ್ಲಿ ಸುರ್ಜೇವಾಲ ನಡೆಸಿದ ಸಭೆ ಕಾನೂನಿನ ಉಲ್ಲಂಘನೆ ಪಕ್ಷದ ಪದಾಧಿಕಾರಿಯಾದವರು ಈ ರೀತಿ ಸಭೆ ನಡೆಸುವಂತಿಲ್ಲ. ಕಾಂಗ್ರೆಸ್ಸಿನ ಈ ನಡೆ ಖಂಡಿಸಿ ರಾಜ್ಯಪಾಲರಿಗೆ ಈ ಸಂಬಂಧ ದೂರು ದಾಖಲಿಸುತ್ತೇವೆ ಎಂದು ಬಿಜೆಪಿ ನಾಯಕರು ಹೇಳಿಕೊಂಡಿದ್ದರು.