- ‘ಈ ಪೊಲೀಸರು ಬಿಜೆಪಿ ಕಚೇರಿಯಿಂದ ಸಂಬಳ ಪಡೆಯುತ್ತಿದ್ದಾರಾ?’
- ‘ಕರ್ನಾಟಕದಲ್ಲಿ ಉತ್ತರ ಪ್ರದೇಶ ಮಾದರಿ ಜಾರಿ ಮಾಡಲಾಗುತ್ತಿದೆ‘
ಸ್ಯಾಂಕಿ ಮೇಲ್ಸೇತುವೆ ಯೋಜನೆ ವಿರೋಧಿಸಿದವರ ವಿರುದ್ಧ ಸರ್ಕಾರ ಎಫ್ಐಆರ್ ದಾಖಲಿಸಿದೆ ಎಂದು ಆರೋಪಿಸಿರುವ ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆ, “ಇದು ಯೋಗಿ ಉತ್ತರ ಪ್ರದೇಶವಲ್ಲ. ನ್ಯಾಯದ ಪರವಾಗಿ ಹೋರಾಡುವ ಕನ್ನಡಿಗರ ಕರ್ನಾಟಕ” ಎಂದು ಕಿಡಿ ಕಾರಿದ್ದಾರೆ.
ಮಲ್ಲೇಶ್ವರದಲ್ಲಿ ಭಾನುವಾರ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪ್ರಿಯಾಂಕ್ ಖರ್ಗೆ, ಸಚಿವ ಅಶ್ವತ್ಥನಾರಾಯಣ ಮತ್ತು ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
“ಬೊಮ್ಮಾಯಿ ಅವರು ಹೇಳುತ್ತಿರುವಂತೆ ಕರ್ನಾಟಕ ರಾಜ್ಯದಲ್ಲಿ ಉತ್ತರ ಪ್ರದೇಶ ಮಾದರಿ ಜಾರಿ ಮಾಡಲಾಗುತ್ತಿದೆ. ಅಲ್ಲಿಯಂತೆಯೇ ಯಾರೂ ಸರ್ಕಾರದ ವಿರುದ್ಧ ಮಾತನಾಡಬಾರದು, ಪ್ರಶ್ನೆ ಕೇಳಬಾರದು; ಪ್ರತಿಭಟನೆ ಮಾಡಬಾರದೆಂದು ದಬ್ಬಾಳಿಕೆ ಮಾಡಲಾಗುತ್ತಿದೆ” ಎಂದು ಹರಿಹಾಯ್ದಿದ್ದಾರೆ.
“ಸರ್ಕಾರದ ವಿರುದ್ಧ ಮಾತನಾಡಿದರೆ ಅವರ ಮೇಲೆ ಪೊಲೀಸ್ ಪ್ರಕರಣ ದಾಖಲಿಸಲಾಗುವುದು ಎನ್ನುವ ಸಂದೇಶವನ್ನು ಸರ್ಕಾರವು ಅಶ್ವತ್ಥನಾರಾಯಣ ಮೂಲಕ ನೀಡುತ್ತಿದೆ” ಎಂದು ಟೀಕಿಸಿದ್ದಾರೆ.
60-70 ಮಂದಿ ವಿರುದ್ಧ ಪ್ರಕರಣ
“ಸ್ಯಾಂಕಿ ಮೇಲ್ಸೇತುವೆ ಯೋಜನೆ ವಿರೋಧಿಸಿ ಪರಿಸರ ಉಳಿಸಲು ಹೋರಾಟ ಮಾಡಿದ ಮಲ್ಲೇಶ್ವರಂನ 60-70 ಜನರ ವಿರುದ್ಧ ಈಗ ಎಫ್ಐಆರ್ ದಾಖಲಾಗಿದೆ” ಎಂದು ತಿಳಿಸಿದ್ದಾರೆ.
“22 ಸಾವಿರ ಜನ ಸಹಿ ಹಾಕಿರುವ ಅರ್ಜಿಯನ್ನು ಸರ್ಕಾರಕ್ಕೆ ನೀಡಿ, ಸ್ಯಾಂಕಿ ಮೇಲ್ಸೇತುವೆ ರಸ್ತೆ ಅಗಲೀಕರಣ ಬೇಡ ಎಂದಿದ್ದಾರೆ. 2 ಸಾವಿರ ಶಾಲಾ ಮಕ್ಕಳು ಬೊಮ್ಮಾಯಿ ಅಂಕಲ್ಗೆ ಪತ್ರ ಬರೆದು ಮನವಿ ಸಲ್ಲಿಸಿದ್ದಾರೆ. ಆದರೂ ಮುಖ್ಯಮಂತ್ರಿಗಳು ಕಿವಿಗೊಟ್ಟಿಲ್ಲ” ಎಂದು ಪ್ರಿಯಾಂಕ್ ಖರ್ಗೆ ಕುಟುಕಿದ್ದಾರೆ.
ಈ ಸುದ್ದಿ ಓದಿದ್ದೀರಾ? ಚುನಾವಣೆ ವಿಶೇಷ | ಸಂಧ್ಯಾಕಾಲದಲ್ಲಿ ಸಂದಿಗ್ಧಕ್ಕೆ ಸಿಲುಕಿರುವ ಯಡಿಯೂರಪ್ಪ
“ಅಸ್ತಿತ್ವಕ್ಕೆ ತರಲು ಸಾಧ್ಯವಾಗದ ಯೋಜನೆಯನ್ನೂ ಅಶ್ವತ್ಥನಾರಾಯಣ ಸಾಧ್ಯ ಮಾಡುವ ಪ್ರಯತ್ನ ಮಾಡುತ್ತಾರೆ. ಉರಿಗೌಡ ನಂಜೇಗೌಡ ಅವರ ಕಥೆಯೇ ಇದಕ್ಕೆ ಉದಾಹರಣೆ” ಎಂದು ವಾಗ್ದಾಳಿ ನಡೆಸಿದ್ದಾರೆ.
“ಈ ಭಾಗದಲ್ಲಿ ಪರಿಸರ ಸಂರಕ್ಷಣೆಗಾಗಿ ಕೆರೆ ಸುತ್ತ ಫೆ. 19ರಂದು ಮಕ್ಕಳು, ವೃದ್ಧರು, ಪರಿಸರ ಬಗ್ಗೆ ಕಾಳಜಿ ಇರುವ ಜಾಗೃತ ನಾಗರಿಕರು ಹೋರಾಟ ಮಾಡಿದರೆ, ಅವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿದ್ದಾರೆ” ಎಂದು ಟೀಕಿಸಿದ್ದಾರೆ.
ಮಾಡಾಳ್ ವಿರುದ್ಧ ನಿಮ್ಮ ದರ್ಪ ತೋರಿಸಿ
“ಈ ಸರ್ಕಾರದ ಉದ್ದೇಶವೇನು? ಇವರು ಏನೇ ಮಾಡಿದರೂ ಜನರು ಕೇಳಬೇಕಾ? ಈ ಸರ್ಕಾರ ಅಮಾಯಕರ ಮೇಲೆ ದರ್ಪ ತೋರಿಸುತ್ತದೆಯೇ? ಇದೇ ದರ್ಪವನ್ನು ಲಂಚ ಪಡೆದು ಸಿಕ್ಕಿ ಬಿದ್ದಿರುವ ಮಾಡಾಳ್ ಅವರ ವಿರುದ್ಧ ಯಾಕೆ ತೋರುವುದಿಲ್ಲ” ಎಂದು ಪ್ರಿಯಾಂಕ್ ಖರ್ಗೆ ಖಾರವಾಗಿ ಪ್ರಶ್ನಿಸಿದ್ದಾರೆ.
“ಇದು ಯೋಗಿಯ ಉತ್ತರ ಪ್ರದೇಶವಲ್ಲ. ನ್ಯಾಯದ ಪರವಾಗಿ ಹೋರಾಡುವ ಕನ್ನಡಿಗರ ಕರ್ನಾಟಕ. ಸರ್ಕಾರ ಜನರನ್ನು ಹೆದರಿಸುವುದನ್ನು ನಿಲ್ಲಿಸಲಿ. ನಾವು ಯಾವುದೇ ತಪ್ಪು ಮಾಡುತ್ತಿಲ್ಲ. ತಪ್ಪು ಮಾಡಿದವರನ್ನು ರಕ್ಷಣೆ ಮಾಡಿ, ಜನರ ಪರವಾಗಿ ನಿಲ್ಲುವವರ ವಿರುದ್ಧ ನಿಲ್ಲುತ್ತೀರಾ” ಎಂದು ಪ್ರಶ್ನಿಸಿದ್ದಾರೆ.
“ಇದಕ್ಕೆ ಹೆದರಿ ನಾವು ಹಿಂದೆ ಸರಿಯುವುದಿಲ್ಲ. ನಾವು ಸದಾ ಬೆಂಗಳೂರು ಜನರ ಪರವಾಗಿ ನಿಲ್ಲುತ್ತೇವೆ” ಎಂದಿದ್ದಾರೆ.
“ಚುನಾವಣೆಗೆ ಒಂದು ತಿಂಗಳು ಉಳಿದಿದ್ದು, ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಈ ಭ್ರಷ್ಟ ಯೋಜನೆ ಹಾಗೂ ಸುಳ್ಳು ಕೇಸ್ ವಜಾ ಮಾಡುತ್ತೇವೆ. ಬಿಜೆಪಿ ಏಜೆಂಟರಂತೆ ಕೆಲಸ ಮಾಡುತ್ತಿರುವ ಪೊಲೀಸ್ ಹಾಗೂ ಇತರೆ ಅಧಿಕಾರಿಗಳ ವಿರುದ್ಧ ನಮ್ಮ ಸರ್ಕಾರ ಕಾನೂನು ರೀತಿಯ ಕ್ರಮ ಕೈಗೊಳ್ಳಲಿದೆ” ಎಂದು ಭರವಸೆ ನೀಡಿದ್ದಾರೆ.
“ಈ ಪೊಲೀಸರು ಸರ್ಕಾರದಿಂದ ಸಂಬಳ ಪಡೆಯುತ್ತಿದ್ದಾರಾ ಅಥವಾ ಬಿಜೆಪಿ ಕಚೇರಿಯಿಂದ ಸಂಬಳ ಪಡೆಯುತ್ತಿದ್ದಾರಾ?” ಎಂದು ಸರ್ಕಾರದ ಕ್ರಮವನ್ನು ಖಂಡಿಸಿದ್ದಾರೆ.