ಆರೆಸ್ಸೆಸ್ ತನ್ನ ಸಿದ್ಧಾಂತವನ್ನು ಜಾರಿಗೆ ತರಲು ಮೋದಿಯನ್ನು ಮುಂದಾಳನ್ನಾಗಿ ಮಾಡಿಕೊಂಡಿದೆ. ಈ ಮುಂದಾಳತ್ವದ ಮುಖ ನಿನ್ನೆ ಬೇರೊಬ್ಬರಾದ್ದಾಗಿತ್ತು. ನಾಳೆ ಮತ್ತೊಬ್ಬರದ್ದಾಗುತ್ತದೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಹೇಳಿದ್ದಾರೆ.
“ಈ ಬಾರಿಯ ಲೋಕಸಭಾ ಚುನಾವಣೆಯು ಪ್ರಜಾಪ್ರಭುತ್ವಕ್ಕಾಗಿನ ‘ಮಾಡು ಇಲ್ಲವೇ ಮಡಿ’ ಹೋರಾಟವಾಗಿದೆ. ಪ್ರಸ್ತುತ, ಎರಡನೇ ಹೋರಾಟದ ಮಧ್ಯೆ ನಾವಿದ್ದೇವೆ ಎಂಬಂತೆ ಭಾಸವಾಗುತ್ತಿದೆ. ಭಾರತದ ಆಶಯಗಳನ್ನು ರಕ್ಷಿಸುವುದು; ಪ್ರಜಾಪ್ರಭುತ್ವ, ಜಾತ್ಯತೀತತೆ ಮತ್ತು ನಮ್ಮ ಬಹುತ್ವ ಸಮಾಜ, ಫೆಡರಲಿಸಂನ ತತ್ವವನ್ನು ರಕ್ಷಿಸುವ ಹೋರಾಟವಾಗಿದೆ” ಎಂದು ಅವರು ಹೇಳಿದ್ದಾರೆ.
“ಬಿಜೆಪಿಗೆ ಮೋದಿ ಅವರು ಪ್ರಮುಖ ಅಸ್ತ್ರವಾಗಿದ್ದಾರೆ. ಅವರನ್ನು ‘ಜೀವನಕ್ಕಿಂತ ದೊಡ್ಡ ವ್ಯಕ್ತಿ’ ಎಂದು ಬಿಜೆಪಿ ಬಿಂಬಿಸುತ್ತಿದೆ. ಪ್ರತಿಪಕ್ಷಗಳು ‘ಬಲವಾದ ಒಗ್ಗಟ್ಟು’ ಹೊಂದಿವೆ. ಅಖಿಲೇಶ್ ಯಾದವ್, ಅರವಿಂದ್ ಕೇಜ್ರಿವಾಲ್, ಉದ್ಧವ್ ಠಾಕ್ರೆ, ಮಮತಾ ಬ್ಯಾನರ್ಜಿ ಮತ್ತು ತೇಜಸ್ವಿ ಯಾದವ್ ಅವರಂತಹ ನಾಯಕರು ನಮ್ಮೊಂದಿಗೆ ಇದ್ದಾರೆ. ಈ ಹೋರಾಟದಲ್ಲಿ ನಾವು ಒಗ್ಗಟ್ಟಾಗಿದ್ದೇವೆ. ಮುಂಬರುವ ಚುನಾವಣೆಯಲ್ಲಿ ರಾಹುಲ್ ಗಾಂಧಿಯಂತಹ ಕ್ರಿಯಾಶೀಲ ಯುವ ನಾಯಕ ಮೋದಿಯ ಚಿತ್ರಣ ಮತ್ತು ಆರ್ಎಸ್ಎಸ್ ನಿರೂಪಣೆಯನ್ನು ಕೆಡವಲು ಸಜ್ಜಾಗಿದ್ದಾರೆ” ಎಂದು ಇಂಡಿಯನ್ ಎಕ್ಸ್ಪ್ರೆಸ್ಗೆ ನೀಡಿದ ಸಂದರ್ಶನದಲ್ಲಿ ಸ್ಟಾಲಿನ್ ಹೇಳಿದ್ದಾರೆ.
“10 ವರ್ಷ ಆಡಳಿತ ನಡೆಸಿರುವ ಮೋದಿ ಸರ್ಕಾರವು ತಮ್ಮ ಸಾಧನೆಗಳನ್ನು ತೋರಿಸುವ ಬದಲು, ಹಿಂದಿನದ್ದನ್ನೇ ಕೆದಕುವ ಕೆಲಸದಲ್ಲಿ ನಿರತವಾಗಿದೆ. ನೆಹರೂ ಮತ್ತು ಇಂದಿರಾ ಗಾಂಧಿಯಂತಹ ದಿಗ್ಗಜರತ್ತ ಬೆರಳು ಮಾಡುತ್ತಿದೆ. ಈಗ ಬಿಜೆಪಿ ಮುಖ್ಯ ಅಜೆಂಡಾ ಪ್ರತಿಪಕ್ಷಗಳನ್ನು ಹಿಡಿತದಲ್ಲಿಟ್ಟುಕೊಳ್ಳುವುದು. ವಿಪಕ್ಷಗಳ ನಾಯಕರನ್ನು ತಮ್ಮ ಪಕ್ಷಕ್ಕೆ ಸೇರಿಸಿಕೊಳ್ಳುವುದು, ಇಲ್ಲವೇ ಬಂಧಿಸುವುದು” ಎಂದು ಆರೋಪಿಸಿದ್ದಾರೆ.
“ಬಿಜೆಪಿ ತನ್ನ ರಾಜಕೀಯಕ್ಕಾಗಿ ಕಚ್ಛತೀವು ವಿಚಾರವನ್ನು ಮತ್ತೆ ಕೆದಕುತ್ತಿದೆ. ಮೋದಿಯವರ ಮಾತುಗಳನ್ನು ಇನ್ನು ಮುಂದೆ ಜನರು ನಂಬುವುದಿಲ್ಲ ಎಂಬ ಭಯದಿಂದ ಅವರು ಇಂತಹ ವಿಚಾರಗಳನ್ನು ಕೆದಕುತ್ತಿದ್ದಾರೆ” ಎಂದು ಅವರು ಹೇಳಿದ್ದಾರೆ.
“ಡಿಎಂಕೆ ಯಾವಾಗಲು ಸಾಮಾಜಿಕ ನ್ಯಾಯದ ಸಿದ್ಧಾಂತಕ್ಕೆ ಬದ್ದವಾಗಿದೆ. ‘ಎಲ್ಲರಿಗೂ ಎಲ್ಲವೂ’ ಎಂಬ ತತ್ವದ ಮೇಲೆ ಪಕ್ಷ ನಿಂತಿದೆ. ಆದರೆ, ಬಿಜೆಪಿ ಧಾರ್ಮಿಕ ಭಾವನೆ ಮೇಲೆ ರಾಜಕೀಯ ಮಾಡುತ್ತಿದೆ. ದ್ವೇಷವನ್ನು ಭಿತ್ತುತ್ತಿದೆ. ಆರೆಸ್ಸೆಸ್ ಸಿದ್ಧಾಂತವನ್ನು ಜಾರಿಗೆ ತರಲು ಮೋದಿಯನ್ನು ಮುಂದಾಳನ್ನಾಗಿ ಮಾಡಿಕೊಂಡಿದೆ. ಈ ಮುಂದಾಳತ್ವದ ಮುಖ ನಿನ್ನೆ ಬೇರೊಬ್ಬರಾದ್ದಾಗಿತ್ತು. ನಾಳೆ ಮತ್ತೊಬ್ಬರದ್ದಾಗುತ್ತದೆ” ಎಂದು ಹೇಳಿದ್ದಾರೆ.