ರಾಜ್ಯ ವಿಧಾನ ಪರಿಷತ್ತಿನಲ್ಲಿ ಖಾಲಿ ಇರುವ ಮೂರು ಸ್ಥಾನಗಳಿಗೆ ಜೂನ್ 30ರಂದು ಉಪಚುನಾವಣೆ ನಡೆಯಲಿದೆ ಎಂದು ಚುನಾವಣಾ ಆಯೋಗ ಹೇಳಿದೆ. ಅದೇ ದಿನ ಫಲಿತಾಂಶ ಹೊರಬೀಳಲಿದೆ ಎಂದೂ ತಿಳಿಸಿದೆ.
ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿಸುವ ಉದ್ದೇಶದಿಂದ ಬಿಜೆಪಿಯ ಮೂವರು ವಿಧಾನ ಪರಿಷತ್ ಸದಸ್ಯರು (ಎಂಎಲ್ಸಿ) – ಲಕ್ಷ್ಮಣ್ ಸವದಿ, ಆರ್ ಶಂಕರ್ ಮತ್ತು ಬಾಬುರಾವ್ ಚಿಂಚನಸೂರು ರಾಜೀನಾಮೆ ನೀಡಿದ್ದರು. ಲಕ್ಷ್ಮಣ ಸವದಿ ಕಾಂಗ್ರೆಸ್ನಿಂದ ಸ್ಪರ್ಧಿಸಿ ಗೆದ್ದಿದ್ದಾರೆ. ಉಳಿದಿಬ್ಬರು ಸೋಲುಂಡಿದ್ದಾರೆ. ಈ ಮೂವರ ರಾಜೀನಾಮೆಯಿಂದ ತೆರವಾಗಿರುವ ಸ್ಥಾನಗಳಿಗೆ ಆಯೋಗವು ಉಪಚುನಾವಣೆ ಘೋಷಿಸಿದೆ.
ಜೂನ್ 13 ರಂದು ಅಧಿಸೂಚನೆ ಹೊರಡಿಸಲಾಗುವುದು. ನಾಮಪತ್ರ ಸಲ್ಲಿಕೆಗೆ ಜೂನ್ 20 ಕೊನೆಯ ದಿನಾಂಕವಾಗಿದೆ. ನಾಮಪತ್ರಗಳ ಪರಿಶೀಲನೆ ಜೂನ್ 21 ರಂದು ನಡೆಯಲಿದೆ. ಜೂನ್ 23 ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕವಾಗಿದೆ. ಜೂನ್ 30 ರಂದು ಬೆಳಿಗ್ಗೆ 9 ರಿಂದ ಸಂಜೆ 4 ರವರೆಗೆ ಮತದಾನ ನಡೆಯಲಿದೆ. ಅದೇ ದಿನ ಸಂಜೆ 5 ಗಂಟೆಗೆ ಮತ ಎಣಿಕೆ ನಡೆಯಲಿದೆ ಎಂದು ಚುನಾವಣಾ ಆಯೋಗ ಪ್ರಕಟಣೆಯಲ್ಲಿ ತಿಳಿಸಿದೆ.
ಈ ಮೂರೂ ಸ್ಥಾನಗಳಿಗೆ ಎಂಎಲ್ಸಿಗಳನ್ನು ಶಾಸಕರು ಆಯ್ಕೆ ಮಾಡುತ್ತಾರೆ. ವಿಧಾನಸಭೆಯಲ್ಲಿ ಬಹುಮತ ಹೊಂದಿರುವ ಕಾಂಗ್ರೆಸ್ ಮೂರು ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿದೆ.
ಈ ಸುದ್ದಿ ಓದಿದ್ದೀರಾ?: ಶಾಲಾ ಪಠ್ಯ ಪರಿಷ್ಕರಣೆ | ಬರಗೂರು ನೇತೃತ್ವದಲ್ಲಿ ತಾತ್ಕಾಲಿಕ ಸಮಿತಿ ರಚನೆ ಮಾಡಿದ ಸರ್ಕಾರ
ವಿಧಾನ ಪರಿಷತ್ನ ಒಟ್ಟು 75 ಸ್ಥಾನಗಳ ಪೈಕಿ, ಪ್ರಸ್ತುತ ಬಿಜೆಪಿ 34, ಕಾಂಗ್ರೆಸ್ 24, ಜೆಡಿಎಸ್ 08, ಒಬ್ಬ ಪಕ್ಷೇತರರು ಹಾಗೂ ಒಬ್ಬರು ಅಧ್ಯಕ್ಷರಿದ್ದಾರೆ. ಇನ್ನೂ ಏಳು ಸ್ಥಾನಗಳು ಖಾಲಿ ಇವೆ. ಈ ಪೈಕಿ, ಮೂರು ಸ್ಥಾನಗಳಿಗೆ ಉಪಚುನಾವಣೆ ನಡೆಯಲಿದೆ. ಮೂರೂ ಸ್ಥಾನಗಳನ್ನು ಗೆಲ್ಲುವ ಮೂಲಕ ಕಾಂಗ್ರೆಸ್ ತನ್ನ ಸಂಖ್ಯೆಯನ್ನು 27ಕ್ಕೆ ಹೆಚ್ಚಿಸಿಕೊಳ್ಳುವ ಸಾಧ್ಯತೆ ಇದೆ.
ಎಂಎಲ್ಎಯೂ ಅಲ್ಲದೆ, ಎಂಎಲ್ಸಿಯೂ ಅಲ್ಲದೆ ಸಿದ್ದರಾಮಯ್ಯ ನೇತೃತ್ವದ ಸಂಪುಟದಲ್ಲಿ ಮಂತ್ರಿಗಿರಿ ಪಡೆದಿರುವ ಎಐಸಿಸಿ ಕಾರ್ಯದರ್ಶಿ ಎನ್.ಎಸ್ ಬೋಸರಾಜು ಅವರು ಈ ಉಪಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಎಂದು ತಿಳಿದುಬಂದಿದೆ.
ಈ ಸುದ್ದಿ ಓದಿದ್ದೀರಾ?: ಬಿಜೆಪಿ-ಆರ್ಎಸ್ಎಸ್ ಹುಟ್ಟಿನಿಂದಲೇ ಮೀಸಲಾತಿ, ಸಾಮಾಜಿಕ ನ್ಯಾಯದ ವಿರೋಧಿಗಳು: ಸಿದ್ದರಾಮಯ್ಯ