- ಪರಿಸರ ದಿನದಂದು ಮಹತ್ವದ ಕಾರ್ಯಕ್ಕೆ ಚಾಲನೆ ನೀಡಿದ ಗ್ರಾಮೀಣಾಭಿವೃದ್ದಿ ಪಂಚಾಯತ್ ರಾಜ್ ಇಲಾಖೆ
- ನಾಡಿನ ಪ್ರತಿ ಹಳ್ಳಿಯಲ್ಲಿ ಸುಸ್ಥಿರ ಘನತ್ಯಾಜ್ಯ ನಿರ್ವಹಣಾ ವ್ಯವಸ್ಥೆ ಸ್ಥಾಪಿಸಲು ಮುಂದಾದ ಪ್ರಿಯಾಂಕ್ಖರ್ಗೆ
ವಿಶ್ವ ಪರಿಸರ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಮೂರು ಪ್ರಮುಖ ಕಾರ್ಯಕ್ರಮಗಳನ್ನು ಜಾರಿ ಮಾಡಲು ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಮುಂದಾಗಿದ್ದಾರೆ.
‘ವಿಶ್ವ ಪರಿಸರ ದಿನದ’ ಘೋಷವಾಕ್ಯ “ಪ್ಲಾಸ್ಟಿಕ್ ಮಾಲಿನ್ಯ ಸೋಲಿಸಿ” ಎನ್ನುವುದಕ್ಕೆ ಅನುಗುಣವಾಗಿ, ಆಡಿಪಿಆರ್ ಇಲಾಖೆ ನಾಡಿನ ಪ್ರತೀ ಹಳ್ಳಿಯಲ್ಲಿ ಸುಸ್ಥಿರ ಘನತ್ಯಾಜ್ಯ ನಿರ್ವಹಣಾ ವ್ಯವಸ್ಥೆ ಸ್ಥಾಪಿಸಲು ಯೋಜನೆ ರೂಪಿಸಿಕೊಂಡಿದೆ.
ಕ್ರಮ 1 : ಬಹುಪಾಲು ಪ್ಲಾಸ್ಟಿಕ್ ಒಳಗೊಂಡ ಘನ ತ್ಯಾಜ್ಯ ವಿಲೇವಾರಿಯನ್ನು ಹಳ್ಳಿ ಮಟ್ಟದಿಂದಲೇ ಆರಂಭಿಸಲು ಪ್ರತಿ ಗ್ರಾಮ ಪಂಚಾಯತಿ ಮಟ್ಟದ ಒಕ್ಕೂಟ (GPLF) ಗಳೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲು ರಾಜ್ಯದ 5,951 ಗ್ರಾಮ ಪಂಚಾಯತಿಗಳಿಗೆ ಸೂಚಿಸಲಾಗಿದೆ. ಈ ಮೂಲಕ ರಾಜ್ಯದೆಲ್ಲೆಡೆ ಗ್ರಾಮೀಣ ಮಟ್ಟದಲ್ಲಿ ಪ್ಲಾಸ್ಟಿಕ್ ಬಳಕೆ ಮುಕ್ತಗೊಳಿಸಲು ಇಲಾಖೆ ನಿರ್ಧರಿಸಿದೆ. ಈ ಕ್ರಮವು ಸ್ಥಳೀಯವಾಗಿ ಮಹಿಳಾ ಉದ್ಯೋಗ ಹೆಚ್ಚಿಸಲಿದೆ.
ಕ್ರಮ 2 : ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಡಿಯಲ್ಲಿ ಈ ಸಾಲಿನಲ್ಲಿ ಪ್ರತಿದಿನ ಹತ್ತು ಟನ್ ಗಿಂತಲೂ ಹೆಚ್ಚು ಘನತ್ಯಾಜ್ಯ ವಿಲೇವಾರಿ ಮಾಡಬಲ್ಲ ಎಂಆರ್ಎಫ್(ಮೆಟೀರಿಯಲ್ ರಿಕವರಿ ಫೆಸಿಲಿಟಿ))ಗಳ ಸಂಖ್ಯೆಯನ್ನು ಪ್ರಸ್ತುತ 11ರಿಂದ ಜಿಲ್ಲೆಗೆ ಒಂದರಂತೆ 30ಕ್ಕೆ ಏರಿಕೆ ಮಾಡಲಿದೆ.
ಕ್ರಮ 3 : ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಪ್ಲಾಸ್ಟಿಕ್ ಬಳಕೆ ಮುಕ್ತಗೊಳಿಸುವ ಸಲುವಾಗಿ ‘ಹಸಿರು’ ಶಿಷ್ಟಾಚಾರ ಕಾರ್ಯಕ್ರಮವನ್ನು ಪ್ರಾರಂಭಿಕ ಹಂತದಲ್ಲಿ ರಾಜ್ಯ ಮಟ್ಟದಲ್ಲಿ ಪಂಚಾಯತ್ ರಾಜ್ ಇಲಾಖೆ ವ್ಯಾಪ್ತಿಯಲ್ಲಿ ಬರುವ, ಪಂಚಾಯತ್ ರಾಜ್ ಸಚಿವಾಲಯ, ಕರ್ನಾಟಕ ಪಂಚಾಯತ್ ರಾಜ್ ಆಯುಕ್ತಾಲಯ, ಇ-ಆಡಳಿತ ಕಚೇರಿ, ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆ ಮೈಸೂರು, ಹಾಗೂ ಎಲ್ಲಾ ಜಿಲ್ಲಾ ಪಂಚಾಯತಿ ಕಚೇರಿಗಳಲ್ಲಿ ಇಂದಿನಿಂದಲೇ ಅನುಷ್ಠಾನಗೊಳಿಸಲಾಗುತ್ತಿದೆ.
ಈ ಸುದ್ದಿ ಓದಿದ್ದೀರಾ?:ನೂತನ ದಾಖಲೆ ಹೊಸ್ತಿಲಿನಲ್ಲಿ ಸಿಎಂ ಸಿದ್ದರಾಮಯ್ಯ; ಜುಲೈ 3ರಿಂದ ಬಜೆಟ್ ಅಧಿವೇಶನ
ಈ ಎಲ್ಲಾ ಕಾರ್ಯಕ್ರಮಗಳ ಮೂಲಕ ಗ್ರಾಮೀಣ ಭಾಗದಲ್ಲಿ ಪ್ಲಾಸ್ಟಿಕ್ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಿ ಪ್ಲಾಸ್ಟಿಕ್ ಬಳಕೆ ಮುಕ್ತಗೊಳಿಸುವುದು, ಎಂಆರ್ಎಫ್ಗಳ ಮೂಲಕ ಪ್ಲಾಸ್ಟಿಕ್ ತ್ಯಾಜ್ಯ ವಿಲೇವಾರಿಯಿಂದ ಪಂಚಾಯತಿಗಳಿಗೆ ಆದಾಯ ಮೂಲ ಸೃಷ್ಟಿಸಿ – ಪರಿಸರ ಸಂರಕ್ಷಣೆಗೆ ಆರ್ಥಿಕ ಪ್ರೋತ್ಸಾಹ ಒದಗಿಸುವುದು ಹಾಗೂ ಪರಿಸರದ ಕುರಿತು ಕಾಳಜಿ ಹಾಗೂ ನಿಸರ್ಗ ಕೇಂದ್ರಿತ ಕ್ರಮಗಳನ್ನು ಕೈಗೊಳ್ಳಲು ಇಲಾಖೆ ಮುಂದಾಗಿದೆ.