- ಜುಲೈ 3ರಿಂದ ಕಾಂಗ್ರೆಸ್ ಸರ್ಕಾರದ ಬಜೆಟ್ ಅಧಿವೇಶನ
- ಮೊದಲ ದಿನ ಜಂಟಿ ಸದನ ಉದ್ದೇಶಿಸಿ ರಾಜ್ಯಪಾಲರ ಭಾಷಣ
ನೂತನ ಕಾಂಗ್ರೆಸ್ ಸರ್ಕಾರದ ಬಜೆಟ್ ಅಧಿವೇಶನಕ್ಕೆ ದಿನಾಂಕ ನಿಗದಿಯಾಗಿದೆ. ಜುಲೈ 3ರಿಂದ ಆರಂಭವಾಗಲಿರುವ ವಿಧಾನಮಂಡಲ ಅಧಿವೇಶನದ ಐದನೇ ದಿನ, ಅಂದರೆ ಜುಲೈ 7ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್ ಮಂಡನೆ ಮಾಡಲಿದ್ದಾರೆ.
ಈ ಬಜೆಟ್ ಮಂಡನೆ ಮೂಲಕ ಸಿಎಂ ಸಿದ್ದರಾಮಯ್ಯ ರಾಜ್ಯದ ಪರ ಅತೀ ಹೆಚ್ಚು ಬಜೆಟ್ ಮಂಡಿಸಿದ ಹಣಕಾಸು ಸಚಿವರಾಗಲಿದ್ದಾರೆ.
ಇಂದು ದಾವಣಗೆರೆಯಲ್ಲಿ ಮಾಧ್ಯಮಗಳಿಗೆ ಈ ವಿಚಾರ ತಿಳಿಸಿದ ಸಿಎಂ ಸಿದ್ದರಾಮಯ್ಯ ಜುಲೈ3ರಿಂದ ಸದನ ಆರಂಭವಾಗಲಿದೆ. ಮೊದಲ ದಿನ ಜಂಟಿ ಸದನ ಉದ್ದೇಶಿಸಿ ರಾಜ್ಯಪಾಲರು ಭಾಷಣ ಮಾಡಲಿದ್ದಾರೆ. ಮೂರು ದಿನಗಳ ಕಾಲ ಇದರ ಮೇಲೆ ಚರ್ಚೆ ನಡೆಯಲಿದೆ. ಇದಾದ ಬಳಿಕ ನಾನು ಬಜೆಟ್ ಮಂಡನೆ ಮಾಡಲಿದ್ದೇನೆ ಎಂದು ಹೇಳಿದರು.
ರಾಜ್ಯವನ್ನು ಅಭಿವೃದ್ದಿ ಹಳಿಗೆ ತೆಗೆದುಕೊಂಡು ಹೋಗುವ ಹಾಗೂ ಜನಪ್ರಗತಿಶೀಲ ಬಜೆಟ್ ಮಂಡನೆ ಮಾಡುವ ಉದ್ದೇಶವನ್ನು ನಮ್ಮ ಸರ್ಕಾರ ಹೊಂದಿದೆ ಎಂದು ಅವರು ತಿಳಿಸಿದರು.
ಈ ಸುದ್ದಿ ಓದಿದ್ದೀರಾ?:ಬಿಜೆಪಿ ವಿದ್ಯುತ್ ದುರುಪಯೋಗ ಮಾಡುವಂತೆ ಕುಮ್ಮಕ್ಕು ಕೊಡುತ್ತಿದೆ, ಜನತೆ ಇದಕ್ಕೆ ಸೊಪ್ಪು ಹಾಕುವುದಿಲ್ಲವೆಂಬ ಭರವಸೆ ಇದೆ : ಸಿಎಂ
ಇದೇ ವೇಳೆ ಪಶು ಸಂಗೋಪನಾ ಸಚಿವ ವೆಂಕಟೇಶ್ ನೀಡಿದ್ದ ಗೋ ವಧೆ ವಿಚಾರದ ಹೇಳಿಕೆಗೆ ಸ್ಪಷ್ಟನೆ ನೀಡಿದ ಸಿದ್ದರಾಮಯ್ಯ, ನಮಗೂ ದನಕರುಗಳ ಮೇಲೆ ಗೌರವವಿದೆ. ಆದರೆ ಹನ್ನೆರಡು ವರ್ಷ ಮೀರಿದ ರಾಸುಗಳನ್ನು ವಧೆ ಮಾಡಲು ಅವಕಾಶವನ್ನು ಕಾನೂನು ಕಲ್ಪಿಸಿದೆ.
1964ರ ಕಾಯ್ದೆ ಉಲ್ಲೇಖ ಮಾಡದೆ ವೆಂಕಟೇಶ್ ಹಾಗೆಯೇ ಮಾಹಿತಿ ಕೊಟ್ಟಿದ್ದಾರೆ. ಕ್ಯಾಬಿನೆಟ್ ಸಭೆಯಲ್ಲಿ ಚರ್ಚಿಸಿ ಗೋ ವಧೆ ಕಾನೂನು ಹಿಂಪಡೆಯುವುದರ ಬಗ್ಗೆ ಚರ್ಚಿಸುವುದಾಗಿ ಅವರು ಸ್ಪಷ್ಟೀಕರಣ ನೀಡಿದರು.