ಬಿಜೆಪಿ ಸಂಸದ ಮತ್ತು ಭಾರತೀಯ ಕುಸ್ತಿ ಫೆಡರೇಶನ್ನ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಸಿಂಗ್ ಬಂಧನಕ್ಕೆ ಒತ್ತಾಯಿಸಿ ಕುಸ್ತಿಪಟಗಳು ನಡೆಸುತ್ತಿರುವ ಪ್ರತಿಭಟನೆಯನ್ನು ದುರ್ಬಲಗೊಳಿಸಲು ಬಿಜೆಪಿ ನಾಯಕಿ ಬಬಿತಾ ಫೋಗಟ್ ಪ್ರಯತ್ನಿಸಿದ್ದರು ಎಂದು ಒಲಿಂಪಿಕ್ ಪದಕ ವಿಜೇತೆ ಸಾಕ್ಷಿ ಮಲಿಕ್ ಆರೋಪಿಸಿದ್ದಾರೆ.
‘ಮಾಜಿ ಕಾಮನ್ವೆಲ್ತ್ ಗೇಮ್ಸ್ ಚಿನ್ನದ ಪದಕ ವಿಜೇತೆ ಬಬಿತಾ ಫೋಗಟ್ ಮತ್ತು ಬಿಜೆಪಿ ನಾಯಕ ತೀರತ್ ರಾಣಾ ಅವರು ಕುಸ್ತಿಪಟುಗಳನ್ನು ಸ್ವಾರ್ಥಕ್ಕಾಗಿ ಬಳಸಿಕೊಳ್ಳಲು ಯತ್ನಿಸಿದ್ದರು. ಆದರೆ ಕುಸ್ತಿಪಟುಗಳ ಪ್ರತಿಭಟನೆ ಆರಂಭವಾಗುತ್ತಿದ್ದಂತೆಯೇ ಅವರು ನಮ್ಮ ಬೆಂಬಲಕ್ಕೆ ನಿಲ್ಲದೆ ಸರ್ಕಾರದ ಜೊತೆ ನಿಂತರುʼ ಎಂದು ಸಾಕ್ಷಿ ಟ್ವೀಟ್ ಮಾಡಿದ್ದಾರೆ.
ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ ಕಿರುಕುಳ, ಹಲ್ಲೆ ಆರೋಪದ ಮೇಲೆ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ದೆಹಲಿ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿದ ಎರಡು ದಿನಗಳ ಬಳಿಕ, ಭಾನುವಾರ 11 ನಿಮಿಷಗಳ ವಿಡಿಯೋವೊಂದನ್ನು ಸಾಕ್ಷಿ ಮತ್ತು ಅವರ ಪತಿ ಸತ್ಯವರ್ತ್ ಕಡಿಯನ್ ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದರು.
ʻಜಂತರ್ ಮಂತರ್ನಲ್ಲಿ ಪ್ರತಿಭಟನೆ ನಡೆಸಲು ಅನುಮತಿ ನೀಡಿದ್ದ ಬಬಿತಾ ಮತ್ತು ಬಿಜೆಪಿ ನಾಯಕ ತೀರತ್ ರಾಣಾ ಅವರು, ಆ ನಂತರ ಪ್ರತಿಭಟನೆಯ ವೇದಿಕೆಯನ್ನು ರಾಜಕೀಯ ಉದ್ದೇಶಗಳಿಗಾಗಿ ಪಕ್ಷಗಳು ಬಳಸಬಾರದು ಎಂದು ಸಲಹೆ ನೀಡಿದ್ದರು. ನಮ್ಮ ಪ್ರತಿಭಟನೆಯು ಡಬ್ಲ್ಯುಎಫ್ಐ ಮುಖ್ಯಸ್ಥನ ಬಂಧನಕ್ಕೆ ಹೊರತು, ಸರ್ಕಾರದ ವಿರುದ್ಧ ಅಲ್ಲ ಎಂದು ಸ್ಪಷ್ಟಪಡಿಸಿದ್ದರೂ ನಮ್ಮ ಪ್ರತಿಭಟನೆಯನ್ನು ರಾಜಕೀಯ ಪ್ರೇರಿತ ಎಂದು ಬಿಂಬಿಸುವ ಪ್ರಯತ್ನವಾಗುತ್ತಿದೆ. ಆದರೆ ನಮ್ಮ ಪ್ರತಿಭಟನೆಗೆ ಮುಖ್ಯವಾಗಿ ಅನುಮತಿ ದೊರಕಿಸಿಕೊಟ್ಟಿದ್ದು ಇಬ್ಬರು ಬಿಜೆಪಿ ನಾಯಕರು ಎಂಬುದನ್ನು ಎಲ್ಲರೂ ತಿಳಿದುಕೊಳ್ಳಬೇಕಿದೆ” ಎಂದು ಸಾಕ್ಷಿ ದಂಪತಿ ಹೇಳಿದ್ದರು.
ಈ ಸುದ್ದಿ ಓದಿದ್ದೀರಾ?: ವೀಲ್ ಚೇರ್ ಅಭಾವ; ಆಸ್ಪತ್ರೆಯ 3ನೇ ಮಹಡಿಗೆ ಮಗನನ್ನು ಸ್ಕೂಟರ್ನಲ್ಲೇ ಕರೆದೊಯ್ದ ತಂದೆ!
ಸಾಕ್ಷಿ ಮಲಿಕ್, ವಿನೇಶ್ ಫೋಗಟ್ ಮತ್ತು ಬಜರಂಗ್ ಪುನಿಯಾ ಸೇರಿದಂತೆ ದೇಶದ ಖ್ಯಾತನಾಮ ಕುಸ್ತಿಪಟುಗಳು ನಿರ್ಗಮಿತ ಡಬ್ಲ್ಯುಎಫ್ಐ ಮುಖ್ಯಸ್ಥ ಮತ್ತು ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದು, ಸಿಂಗ್ ಬಂಧನಕ್ಕೆ ಒತ್ತಾಯಿಸಿ ಏಪ್ರಿಲ್ನಿಂದ ಪ್ರತಿಭಟನೆ ನಡೆಸುತ್ತಿದ್ದಾರೆ.
ಸಾಕ್ಷಿ ಮಲಿಕ್ ಕಾಂಗ್ರೆಸ್ನ ಕೈಗೊಂಬೆ: ಬಬಿತಾ ಫೋಗಟ್ ವಾಗ್ದಾಳಿ
ಸಾಕ್ಷಿ ಮಲಿಕ್ ಮತ್ತು ಪತಿ ಸತ್ಯವರ್ತ್ ಕಡಿಯನ್ ಆರೋಪಕ್ಕೆ ಮಾಜಿ ಕಾಮನ್ವೆಲ್ತ್ ಗೇಮ್ಸ್ ಚಿನ್ನದ ಪದಕ ವಿಜೇತೆ ಮತ್ತು ಹಾಲಿ ಬಿಜೆಪಿ ನಾಯಕಿ ಬಬಿತಾ ಫೋಗಟ್ ಖಾರವಾಗಿಯೇ ಪ್ರತಿಕ್ರಿಯಿಸಿದ್ದು, ಅವರನ್ನು ʻಕಾಂಗ್ರೆಸ್ನ ಕೈಗೊಂಬೆʼ ಎಂದು ಕರೆದಿದ್ದಾರೆ.
ʻನಿನ್ನೆ ನನ್ನ ತಂಗಿ ಮತ್ತು ಅವರ ಪತಿಯ ವಿಡಿಯೋವನ್ನು ನೋಡಿದಾಗ ತುಂಬಾ ಬೇಸರವಾಯಿತು ಮತ್ತು ನಗು ಬಂತು. ಕಿರಿಯ ಸಹೋದರಿ ತೋರಿಸಿರುವ ಅನುಮತಿ ಪತ್ರದಲ್ಲಿ ನನ್ನ ಸಹಿ ಅಥವಾ ನನ್ನ ಒಪ್ಪಿಗೆ ಇಲ್ಲ ಎಂದು ಸ್ಪಷ್ಟಪಡಿಸಲು ಬಯಸುತ್ತೇನೆ. ಇದಕ್ಕೆ ಯಾವುದೇ ಪುರಾವೆಗಳಿಲ್ಲ. ಅವರ ಹೇಳಿಕೆಗೂ ನನಗೂ ಯಾವುದೇ ಸಂಬಂಧವಿಲ್ಲ. ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲಿ ನಂಬಿಕೆ ಇದೆ, ಸತ್ಯ ಖಂಡಿತಾ ಹೊರಬರುತ್ತದೆ ಎಂದು ಮೊದಲ ದಿನದಿಂದ ಹೇಳುತ್ತಿದ್ದೇನೆ” ಎಂದು ಅವರು ಟ್ವೀಟ್ ಮಾಡಿದ್ದಾರೆ.