ಕಳೆದ ವಾರ ಮುಕ್ತಾಯಕಂಡ ಐಪಿಎಲ್ನಲ್ಲಿ, ಸತತ ಐದು ಸಿಕ್ಸರ್ ಚಚ್ಚಿಸಿಕೊಂಡು ಸುದ್ದಿಯಾಗಿದ್ದ ಗುಜರಾತ್ ಟೈಟನ್ಸ್ ತಂಡದ ಬೌಲರ್ ಯಶ್ ದಯಾಳ್, ಇದೀಗ ವಿವಾದವೊಂದನ್ನು ಮೈಮೇಲೆ ಎಳೆದುಕೊಂಡಿದ್ದಾರೆ.
ದೆಹಲಿಯಲ್ಲಿ ಇತ್ತೀಚಿಗೆ ಸಾಕ್ಷಿ ಎಂಬ ಬಾಲಕಿಯನ್ನು 20 ವರ್ಷದ ಸಾಹಿಲ್ ಖಾನ್ ಎಂಬಾತ 21 ಬಾರಿ ಚಾಕುವಿನಿಂದ ಚುಚ್ಚಿ ನಂತರ ಕಲ್ಲಿನಿಂದ ತಲೆಯನ್ನು ಜಜ್ಜಿ ಅತ್ಯಂತ ಭೀಕರವಾಗಿ ಕೊಲೆ ಮಾಡಿದ್ದ. ಸಾಹಿಲ್ ಖಾನ್ ಹೋಲಿಕೆಯ ಪೋಸ್ಟರ್ವೊಂದರನ್ನು ಯಶ್ ದಯಾಳ್ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿದ್ದರು. ಇದು ವಿವಾದವಾಗುತ್ತಲೇ ಆ ಪೋಸ್ಟ್ ಅನ್ನು ಡಿಲೀಟ್ ಮಾಡಿ, ಕ್ಷಮೆ ಯಾಚಿಸಿದ್ದಾರೆ.
ಯಶ್ ದಯಾಳ್ ಶೇರ್ ಮಾಡಿದ್ದ ಪೋಸ್ಟರ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಟ್ವಿಟರ್ ನಲ್ಲಿ ಹಲವರು, ಬಿಸಿಸಿಐ ಮತ್ತು ಗುಜರಾತ್ ಟೈಟಾನ್ಸ್ ಖಾತೆಗೆ ಟ್ಯಾಗ್ ಮಾಡಿ ಈತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದರು. ಇನ್ನು ಹಲವು ನೆಟ್ಟಿಗರು ಯಶ್ ದಯಾಳ್ ಅವರ ಮನಸ್ಥಿತಿಯನ್ನು ಟೀಕಿಸಿದ್ದರು.
ಮುಸ್ಲಿಮರ ಕುರಿತು ಅಪನಂಬಿಕೆ ಹೊಂದಿರುವ ನೀನು, ಸಹ ಆಟಗಾರರಾದ ಮುಹಮ್ಮದ್ ಶಮಿ, ರಶೀದ್ ಖಾನ್, ನೂರ್ ಅಹ್ಮದ್ ಜೊತೆ ಎರಡು ತಿಂಗಳು ಜೊತೆಯಾಗಿ ಕಳೆದಿದ್ದರೂ ಹೇಗೆ ಎಂದು ಹಲವರು ಪ್ರಶ್ನಿಸಿದ್ದಾರೆ.
ತನ್ನ ಪೋಸ್ಟ್ ವಿವಾದವಾಗುತ್ತಲೇ ಎಚ್ಚೆತ್ತ ಯುವ ಬೌಲರ್, ತನ್ನ ಇನ್ಸ್ಟಗ್ರಾಮ್ ಸ್ಟೋರಿಯನ್ನು ಡಿಲೀಟ್ ಮಾಡಿದ್ದಾನೆ.ಬಳಿಕ ಹಿಂದೆ ಪೋಸ್ಟ್ ಮಾಡಿದ್ದ ಸ್ಟೇಟಸ್ಗಾಗಿ ಕ್ಷಮೆ ಯಾಚಿಸಿದ್ದಾರೆ ʻಸ್ನೇಹಿತರೇ, ನಾನು ತಪ್ಪಾಗಿ ಈ ಹಿಂದಿನ ಪೋಸ್ಟ್ ಅನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದೆ. ಇದ್ಕಕಾಗಿ ನಿಮ್ಮಲ್ಲಿ ಕ್ಷಮೆ ಕೋರುತ್ತಿದ್ದೇನೆ. ದಯವಿಟ್ಟು ದ್ವೇಷವನ್ನು ಹರಡಬೇಡಿ. ಧನ್ಯವಾದಗಳು. ನಾನು ಎಲ್ಲಾ ಸಮುದಾಯಗಳ ಭಾವನೆಗಳನ್ನು ಗೌರವಿಸುತ್ತೇನೆʼ ಎಂದು ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಪೋಸ್ಟ್ ಮಾಡಿದ್ದಾರೆ.