- ಪಂಜಾಬ್ ಪರ ಭಾನುಕಾ ರಾಜಪಕ್ಸೆ, ನಾಯಕ ಶಿಖರ್ ಧವನ್ ಉತ್ತಮ ಆಟ
- ಮಳೆಯಿಂದಾಗಿ ಡಕ್ವರ್ಥ್ ಲೂಯಿಸ್ ಆಧಾರದ ಮೇಲೆ ಪಂಜಾಬ್ ಗೆಲುವು
ಐಪಿಎಲ್ 16ನೇ ಆವೃತ್ತಿಯ ಎರಡನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಇಲೆವೆನ್ ತಂಡದ ವೇಗದ ಬೌಲರ್ ಅರ್ಶ್ದೀಪ್ ಸಿಂಗ್ ಅವರ ಅಮೋಘ ಬೌಲಿಂಗ್ ದಾಳಿಗೆ ಒಳಗಾದ ನಿತೀಶ್ ರಾಣಾ ನೇತೃತ್ವದ ಕೋಲ್ಕತಾ ನೈಟ್ ರೈಡರ್ಸ್ 7 ರನ್ಗಳ ಸೋಲು ಅನುಭವಿಸಿತು.
ಮೊಹಾಲಿಯ ಐಎಸ್ ಬಿಂದ್ರಾ ಕ್ರೀಡಾಂಗಣದಲ್ಲಿ ಪಂಜಾಬ್ ನೀಡಿದ್ದ 191 ರನ್ಗಳ ಸವಾಲನ್ನು ಬೆನ್ನಟ್ಟಿದ ಕೆಕೆಆರ್ 16 ಓವರ್ಗಳಲ್ಲಿ 146 ರನ್ ಗಳಿಸಿದ್ದಾಗ ಮಳೆಯಿಂದಾಗಿ ಪಂದ್ಯಕ್ಕೆ ಅಡಚಣೆ ಉಂಟಾಯಿತು. ಮಳೆ ನಿಲ್ಲದ ಕಾರಣ ಅಂಪೈರ್ ಮತ್ತು ರೆಫ್ರಿ ಅವರು ಡಕ್ವರ್ಥ್ ಲೂಯಿಸ್ ಆಧಾರದ ಮೇಲೆ ಪಂಜಾಬ್ ಕಿಂಗ್ಸ್ ಇಲೆವೆನ್ ತಂಡವನ್ನು ವಿಜಯಿ ಎಂದು ಘೋಷಿಸಿದರು.
ವೆಂಕಟೇಶ್ ಅಯ್ಯರ್ (34), ನಿತೀಶ್ ರಾಣಾ (24) ಹಾಗೂ ಆಂಡ್ರೆ ರಸೆಲ್ (35) ಬಿರುಸಿನ ಆಟವಾಡಿದರೂ ರನ್ ಸರಾಸರಿಯನ್ನು ವೇಗಗೊಳಿಸಲು ಸಾಧ್ಯವಾಗಲಿಲ್ಲ.
ಅಮೊಘ ಬೌಲಿಂಗ್ ಪ್ರದರ್ಶಿಸಿದ ಅರ್ಶ್ದೀಪ್ ಸಿಂಗ್ 19/3 ವಿಕೆಟ್ ಉರುಳಿಸಿದರು. ಸ್ಯಾಮ ಕರ್ರನ್, ನೇಥನ್ ಎಲ್ಲೀಸ್, ಸಿಕಂದರ್ ರಾಜಾ ಹಾಗೂ ರಾಹುಲ್ ಚಹರ್ ತಲಾ ಒಂದೊಂದು ವಿಕೆಟ್ ಕಿತ್ತು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಭಾನುಕಾ ರಾಜಪಕ್ಸೆ, ನಾಯಕ ಶಿಖರ್ ಧವನ್ ಉತ್ತಮ ಆಟ
ಇದಕ್ಕೂ ಮುನ್ನ ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಪಂಜಾಬ್ ತಂಡ ಆರಂಭಿಕ ಬ್ಯಾಟ್ಸ್ಮೆನ್ಗಳಾದ ಪ್ರಭಸಿಮ್ರನ್ ಸಿಂಗ್ ಹಾಗೂ ನಾಯಕ ಶಿಖರ್ ಧವನ್ ಜೋಡಿ ಮೊದಲ ವಿಕೆಟ್ಗೆ 2 ಓವರ್ಗಳಿಗೆ 23 ರನ್ಗಳ ಜತೆಯಾಟವಾಡಿತು.
12 ಎಸೆತಗಳನ್ನು ಎದುರಿಸಿದ ಪ್ರಭಸಿಮ್ರನ್ ಸಿಂಗ್ 2 ಬೌಂಡರಿ, 2 ಸಿಕ್ಸರ್ನೊಂದಿಗೆ 23 ರನ್ ಗಳಿಸಿ ಟಿಮ್ ಸೌಥಿಗೆ ಕ್ಯಾಚಿತ್ತು ಪೆವಿಲಿಯನ್ಗೆ ನಿರ್ಗಮಿಸಿದರು.
ನಂತರ ಆಗಮಿಸಿದ ಎರಡನೇ ಕ್ರಮಾಂಕದ ಆಟಗಾರ ಭಾನುಕಾ ರಾಜಪಕ್ಸೆ, ನಾಯಕ ಶಿಖರ್ ಧವನ್ ಅವರೊಂದಿಗೆ 55 ಎಸೆತಗಳಲ್ಲಿ 86 ರನ್ಗಳ ಜತೆಯಾಟವಾಡಿದರು. ಅಬ್ಬರದ ಬ್ಯಾಟಿಂಗ್ ನಡೆಸಿದ ರಾಜಪಕ್ಸೆ ಕೇವಲ 32 ಎಸೆತಗಳಲ್ಲಿ 5 ಬೌಂಡರಿ ಹಾಗೂ 2 ಸಿಕ್ಸರ್ನೊಂದಿಗೆ 50 ರನ್ ಸಿಡಿಸಿ ಉಮೇಶ್ ಯಾದವ್ಗೆ ವಿಕೆಟ್ ಒಪ್ಪಿಸಿದರು. ನಾಯಕ ಶಿಖರ್ ಧವನ್ ಭರ್ಜರಿ ಬ್ಯಾಟಿಂಗ್ ನಡೆಸಿ 29 ಎಸೆತಗಳಲ್ಲಿ 6 ಬೌಂಡರಿಗಳೊಂದಿಗೆ 40 ರನ್ ಬಾರಿಸಿ ವರುಣ್ಗೆ ಬೌಲ್ಡ್ ಆದರು.
ಕೊನೆಯಲ್ಲಿ ವಿಕೆಟ್ ಕೀಪರ್ ಜಿತೇಶ್ ಶರ್ಮಾ(21), ಸಿಕಂದರ್ ರಾಜಾ (16) ಹಾಗೂ ಸ್ಯಾಮ್ ಕರ್ರನ್ (26) ಕೂಡ ಭರ್ಜರಿ ಬ್ಯಾಟಿಂಗ್ ಆಡಿ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 191 ರನ್ ಕಲೆ ಹಾಕಿದರು.