ರಾಜ್ಯ ರಾಜಧಾನಿ ಬೆಂಗಳೂರಿನ ಟ್ರಾಫಿಕ್ ನಿವಾರಣೆಯಲ್ಲಿ ನಮ್ಮ ಮೆಟ್ರೋದ ಪಾತ್ರ ಬಹುಮುಖ್ಯವಾಗಿದ್ದು, ಇದೀಗ ಮೆಟ್ರೋದ ವಿಸ್ತರಣೆ ಕಾಮಗಾರಿ ನಡೆಯುತ್ತಿದೆ. ನಾಗಸಂದ್ರದಿಂದ ಮಾದವಾರ ವರೆಗಿನ ವಿಸ್ತರಿತ ಮಾರ್ಗದಲ್ಲಿ ಕಾಮಗಾರಿ ನಡೆಯಲಿದ್ದು ಈ ಹಿನ್ನೆಲೆ, ಪೀಣ್ಯ ಹಾಗೂ ನಾಗಸಂದ್ರದ ನಡುವೆ ಮೂರು ದಿನ ಮೆಟ್ರೋ ರೈಲು ಸೇವೆ ಸ್ಥಗಿತಗೊಳ್ಳಲಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್ಸಿಎಲ್) ಹೇಳಿದೆ.
ಹಸಿರು ಮಾರ್ಗದಲ್ಲಿನ ಪೀಣ್ಯ ಇಂಡಸ್ಟ್ರಿ ಮತ್ತು ನಾಗಸಂದ್ರ ಮೆಟ್ರೋ ನಿಲ್ದಾಣಗಳ ನಡುವೆ ಜನವರಿ 26 ರಿಂದ 28 ವರೆಗೆ ಮೂರು ದಿನ ಮೆಟ್ರೋ ಸೇವೆ ತಾತ್ಕಾಲಿಕವಾಗಿ ಸ್ಥಗಿತವಾಗಲಿದೆ.
“ನಾಗಸಂದ್ರದಿಂದ ಮಾದಾವರವರೆಗಿನ ವಿಸ್ತರಣೆ ಮಾರ್ಗದ ಪೂರ್ವ ನಿಯೋಜಿತ ಕಾಮಗಾರಿಗಳನ್ನು ಕೈಗೊಳ್ಳುವ ಸಲುವಾಗಿ, ಹಸಿರು ಮಾರ್ಗದ ಪೀಣ್ಯ ಇಂಡಸ್ಟ್ರಿ ಮತ್ತು ನಾಗಸಂದ್ರ ನಿಲ್ದಾಣಗಳ ನಡುವೆ ಮೆಟ್ರೋ ರೈಲು ಸೇವೆಗಳನ್ನು ಜ.26 ರಿಂದ ಜ.28 ರವರೆಗೆ 3 ದಿನಗಳವರೆಗೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುವುದು” ಎಂದು ಹೇಳಿದೆ.
“ಪರಿಣಾಮವಾಗಿ, ಈ ದಿನಗಳಲ್ಲಿ ಪೀಣ್ಯ ಇಂಡಸ್ಟ್ರಿ ಮತ್ತು ರೇಷ್ಮೆ ಸಂಸ್ಥೆ ನಿಲ್ದಾಣಗಳ ನಡುವೆ ಮಾತ್ರ ಮೆಟ್ರೋ ರೈಲು ಸೇವೆಗಳು ಲಭ್ಯವಿರುತ್ತವೆ. ಜ.29 ರ ಬೆಳಗ್ಗೆ 5ಗಂಟೆಯಿಂದ ಎಂದಿನಂತೆ ಹಸಿರು ಮಾರ್ಗದ ನಾಗಸಂದ್ರ ಮತ್ತು ರೇಷ್ಮೆ ಸಂಸ್ಥೆ ನಡುವೆ ಸಾಮಾನ್ಯ ಸೇವೆಗಳು ಪುನರಾರಂಭಗೊಳ್ಳುತ್ತವೆ” ಎಂದು ತಿಳಿಸಿದೆ.
ಈ ಸುದ್ದಿ ಓದಿದ್ದೀರಾ? ಕೆಐಎ | ಈ ತಿಂಗಳು ಅಂತ್ಯದೊಳಗೆ ಇಂದಿರಾ ಕ್ಯಾಂಟೀನ್ ತಲೆ ಎತ್ತುವ ಸಾಧ್ಯತೆ?
“ನೇರಳೆ ಮಾರ್ಗದ ವೈಟ್ಫೀಲ್ಡ್ ಮತ್ತು ಚಲ್ಲಘಟ್ಟ ಮೆಟ್ರೋ ನಿಲ್ದಾಣಗಳ ನಡುವಿನ ರೈಲು ಸೇವೆಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಪೀಣ್ಯ ಇಂಡಸ್ಟ್ರಿ ಮತ್ತು ಗೊರಗುಂಟೆಪಾಳ್ಯ ಮೆಟ್ರೋ ನಿಲ್ದಾಣಗಳಲ್ಲಿ ಹೆಚ್ಚಿನ ಜನಸಂದಣಿಯನ್ನು ನಿರೀಕ್ಷಿಸಲಾಗಿರುವುದರಿಂದ ಟಿಕೆಟ್ ಖರೀದಿಸಲು ಸಮಯವನ್ನು ಉಳಿಸಲು ಸಾರ್ವಜನಿಕರು ವಾಟ್ಸ್ಆಪ್ ಅಥವಾ ನಮ್ಮ ಮೆಟ್ರೋ ಮತ್ತು ಇತರ ಅಪ್ಲಿಕೇಶನ್ಗಳ ಮೂಲಕ ಕ್ಯೂಆರ್ ಟಿಕೆಟ್ಗಳನ್ನು ಖರೀದಿಸಿ” ಎಂದು ಕೋರಿದೆ.
ಇದರಿಂದಾಗಿ ಪ್ರಯಾಣಿಕರಿಗೆ ಆಗುವ ಅನಾನುಕೂಲತೆಗೆ ವಿಷಾದಿಸುತ್ತೇವೆ ಹಾಗೂ ನಾಗಸಂದ್ರದ ವಿಸ್ತರಣಾ ಮಾರ್ಗದ ಕಾರ್ಯಾರಂಭಕ್ಕೆ ಸಂಬಂದಿಸಿದ ಕಾಮಗಾರಿಗಳನ್ನು ತ್ವರಿತವಾಗಿ ಮುಕ್ತಾಯಗೊಳಿಸಲು ಪ್ರಯಾಣಿಕರ ಸಹಕಾರವನ್ನು ಕೋರಿದೆ.