ಬೆಂಗಳೂರಿನ ನಗರತ್ಪೇಟೆಯ ಮೊಬೈಲ್ ಶಾಪ್ವೊಂದರಲ್ಲಿ ಹಾಕಲಾಗಿದ್ದ ಸ್ಪೀಕರ್ನ ಶಬ್ದ ಜಾಸ್ತಿಯಾಗಿದೆ ಎಂದು ಗಲಾಟೆ ನಡೆದಿದೆ. ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲಸೂರು ಗೇಟ್ ಠಾಣೆಯ ಪೊಲೀಸರು ಐವರನ್ನು ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ನಡೆಸುತ್ತಿದ್ದಾರೆ.
ಆರೋಪಿಗಳಾದ ಸುಲೇಮಾನ್, ತರುಣ್, ಶನವಾಜ್, ರೋಹಿತ್ ಹಾಗೂ ಡ್ಯಾನಿಶ್ ವಿರುದ್ಧ ಪೊಲೀಸರು ಐಪಿಸಿ ಸೆಕ್ಷನ್ 506, 504, 149, 307, 323 ಹಾಗೂ 324ರ ಅಡಿಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ.
ನಗರತ್ಪೇಟೆಯ ಸಿದ್ದಣ್ಣ ಗಲ್ಲಿಯಲ್ಲಿ ಮಾ.17ರ ಸಾಯಂಕಾಲ ಕೃಷ್ಣ ಟೆಲಿಕಾಂ ಅಂಗಡಿ ಮಾಲೀಕ ಮುಕೇಶ್ ಎಂಬಾತನ ಮೇಲೆ ಯುವಕರ ಗುಂಪೊಂದು ಹಲ್ಲೆ ಮಾಡಿದೆ ಎಂದು ತಿಳಿದುಬಂದಿದೆ.
ಈ ಘಟನೆಗೆ ಸಂಬಂಧಿಸಿದಂತೆ ಮುಖೇಶ್ ಹಲಸೂರು ಗೇಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ‘ಲೌಡ್ ಸ್ಪೀಕರ್ ಜೋರಾಗಿ ಇಟ್ಟಿದ್ದಕ್ಕೆ ಯುವಕರ ಗುಂಪು ನನ್ನ ಮೇಲೆ ಹಲ್ಲೆ ಮಾಡಿದೆ’ ಎಂದು ದೂರುದಾರ ಮುಕೇಶ್ ಆರೋಪಿಸಿದ್ದಾರೆ.
ಆತನ ದೂರಿನ ಮೇರೆಗೆ ಸುಲೇಮಾನ್, ಶಾನವಾಝ್, ರೋಹಿತ್, ದಾನಿಶ್, ತರುಣಾ ಅಲಿಯಾಸ್ ದಡಿಯ ಹಾಗೂ ಇತರರ ವಿರುದ್ದ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಆರೋಪಿಗಳ ವಿರುದ್ಧ ಐಪಿಸಿ 1860ರ ಅಡಿಯಲ್ಲಿ ಬರುವ ಕಲಂ 506, 504, 149, 307, 323 8 324 ಆಧಾರದಲ್ಲಿ ಪ್ರಕರಣ ದಾಖಲಾಗಿದೆ. ಹಲ್ಲೆ ನಡೆಸುತ್ತಿರುವ ದೃಶ್ಯವು ಮೊಬೈಲ್ ಅಂಗಡಿಯಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಲೌಡ್ ಸ್ಪೀಕರ್ ಜಗಳಕ್ಕೆ ಕೋಮು ಬಣ್ಣ ಬಳಿಯಲೆತ್ನಿಸಿದ ಬಿಜೆಪಿ; ಎಫ್ಐಆರ್ನಲ್ಲಿ ಇರೋದೇನು?
ಈ ಪ್ರಕರಣಕ್ಕೆ ಕೋಮು ಬಣ್ಣ ಬಳೆಯಲು ಯತ್ನಿಸಿದ ಬಿಜೆಪಿ, ಕಾಂಗ್ರೆಸ್ ಸರ್ಕಾರ ವಿರುದ್ಧ ಹರಿಹಾಯ್ದಿದೆ. ಜೋರಾದ ಧ್ವನಿಯಲ್ಲಿ ಹಾಡು ಹಾಕಿದ್ದಕ್ಕೆ ಗಲಾಟೆ ನಡೆದಿದ್ದನು. ಯುವಕ ಪೂಜೆ ಮಾಡುವ ಸಮಯದಲ್ಲಿ ಹನುಮಾನ ಚಾಲೀಸ್ ಹಾಕಿದ್ದಕ್ಕೆ ಮತಾಂಧರ ಗುಂಪೊಂದು ಯುವಕನ ಮೇಲೆ ಹಲ್ಲೆ ಮಾಡಿದೆ ಎಂದು ಪ್ರಕರಣವನ್ನು ತಿರುಚಿದೆ.
ಅಲ್ಲದೇ, ಸ್ಥಳಕ್ಕೆ ಭೇಟಿ ನೀಡಿದ ಸಂಸದ ತೇಜಸ್ವಿ ಸೂರ್ಯ, ಚಿಕ್ಕಪೇಟೆಯಲ್ಲಿ ಎಲ್ಲ ಕಡೆಯೂ ಹನುಮಾನ್ ಚಾಲೀಸಾ ಮತ್ತು ಹನುಮ ಧ್ವಜ ಹಾಕುವಂತೆ ಕರೆ ನೀಡಿ ಕೋಮು ಧ್ವೇಷ ಹರಡಲು ಯತ್ನಿಸಿದ್ದಾರೆ.