ಆಸ್ತಿಯಲ್ಲಿ ಪಾಲು ನೀಡುವಂತೆ ಕೇಳಿದ ಮಗನ ಮೇಲೆ ತಂದೆಯೊಬ್ಬ (ನಿವೃತ್ತ ಪೊಲೀಸ್ ಅಧಿಕಾರಿ) ಆ್ಯಸಿಡ್ ಎರಚಿದ ಘಟನೆ ಬೆಂಗಳೂರಿನ ಬಾಗಲಗುಂಟೆ ಬಳಿಯ ಮಲ್ಲಸಂದ್ರದಲ್ಲಿ ನಡೆದಿದೆ.
ಆರೋಪಿ ತಂದೆ ನಿವೃತ್ತ ಪಿಎಸ್ಐ ರಾಮಕೃಷ್ಣಯ್ಯ, ಅವರ ಹಿರಿಯ ಮಗ ಉಪೇಂದ್ರ ಹಾಗೂ ಪುತ್ರಿ ಕಲಾವತಿ ಬಂಧಿತರು. ಸಂತ್ರಸ್ತ ಕಿರಣ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಆಸ್ತಿಯಲ್ಲಿ ಪಾಲು ನೀಡುವಂತೆ ತಂದೆ ರಾಮಕೃಷ್ಣಯ್ಯ ಬಳಿ ಆಗಾಗ ಕಿರಣ್ ಕೇಳುತ್ತಿದ್ದರು. ಆ ಆಸ್ತಿ ಮತ್ತು ಮನೆಯನ್ನು ಸ್ವಯಾರ್ಜಿತವಾಗಿ ಸಂಪಾದಿಸಿದ್ದೇನೆ. ನಿನಗೆ ನೀಡುವುದಿಲ್ಲ ಎಂದು ರಾಮಕೃಷ್ಣಯ್ಯ ಹೇಳಿದ್ದರು. ಈ ವಿಚಾರವಾಗಿ ತಂದೆ-ಮಗನ ನಡುವೆ ಆಗಾಗ ಜಗಳವಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಹೀಗಾಗಿ, ನಿವೃತ್ತ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಆದ ರಾಮಕೃಷ್ಣಯ್ಯ ಅವರ ಹಿರಿಯ ಮಗ ಉಪೇಂದ್ರಕುಮಾರ್ ಹಾಗೂ ಮಗಳು ಕಲಾವತಿ ಜತೆ ಬೆಂಗಳೂರಿನ ಮಲ್ಲಸಂದ್ರದ ಮನೆಯಲ್ಲಿ ವಾಸವಾಗಿದ್ದಾರೆ. ವಿವಾಹಿತರಾದ ಕಿರಣ್ ಪತ್ನಿಯೊಂದಿಗೆ ಶೆಟ್ಟಿಹಳ್ಳಿಯಲ್ಲಿ ವಾಸವಾಗಿದ್ದಾರೆ.
ಮಾ.22ರಂದು ರಾತ್ರಿ ಕಿರಣ್ ತನ್ನ ತಂದೆಯ ಮನೆ ಬಳಿ ಹೋಗಿ ಆಸ್ತಿ ಮತ್ತು ಮನೆಯಲ್ಲಿ ಪಾಲು ಕೊಡುವಂತೆ ಕೇಳಿದ್ದರು. ಇದರಿಂದ ಕೆರಳಿದ ರಾಮಕೃಷ್ಣಯ್ಯ, ಕಿರಣ್ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಟಿ ದಾಸರಹಳ್ಳಿಯಲ್ಲಿದೆ ಎನ್ನಲಾದ ಆಸ್ತಿಯಲ್ಲಿ ರಾಮಕೃಷ್ಣಯ್ಯ ಮತ್ತು ಕಿರಣ್ ಪಾಲು ಕೇಳಿದ್ದರಿಂದ ಇಬ್ಬರ ನಡುವೆ ತೀವ್ರ ವಾಗ್ವಾದ ನಡೆದಿದೆ. ವಾಗ್ವಾದದ ವೇಳೆ, ನಿವೃತ್ತ ಪಿಎಸ್ಐ ರಾಮಕೃಷ್ಣಯ್ಯ ಉಪೇಂದ್ರ ಹಾಗೂ ಕಲಾವತಿ ಅವರು ಕಿರಣ್ ಮೇಲೆ ಆಸಿಡ್ ಎರಚಿ ಗಾಯಗೊಳಿಸಿದ್ದಾರೆ ಎನ್ನಲಾಗಿದೆ. ಉಪೇಂದ್ರಕುಮಾರ್ ಮತ್ತು ಕಲಾವತಿ ಸಹ ತಂದೆಯ ಜತೆ ಸೇರಿ ಕಿರಣ್ಗೆ ಹಿಗ್ಗಾಮುಗ್ಗಾ ಥಳಿಸಿ, ಬೆದರಿಕೆ ಹಾಕಿದ್ದಾರೆ. ಕಿರಣ್ನನ್ನು ಕೂಡಲೇ ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಆಸಿಡ್ ಎರಚಿದ ಕಾರಣ ಕಿರಣ್ ಅವರ ಒಂದು ಕಣ್ಣಿನಲ್ಲಿ ದೃಷ್ಟಿ ಕಳೆದುಕೊಳ್ಳುವ ಸಾಧ್ಯತೆಯಿದೆ. ಅವರ ದೇಹದ ಮೇಲೆ ತೀವ್ರ ಸುಟ್ಟಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮೆಟ್ರೋ ಕಾಮಗಾರಿ | ಏಪ್ರಿಲ್ 1ರಿಂದ ‘ಒಂದು ವರ್ಷ’ ಈ ರಸ್ತೆಯಲ್ಲಿ ಸಂಚಾರ ಬಂದ್
ಯಾವ ರಾಸಾಯನಿಕವನ್ನು ಬಳಸಲಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಲು ತನಿಖೆ ನಡೆಸುತ್ತಿದ್ದೇವೆ. ಸಂತ್ರಸ್ತನ ದೂರಿನ ಮೇರೆಗೆ ಬಾಗಲಗುಂಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಹಲ್ಲೆ, ಆಸಿಡ್ ದಾಳಿ, ನಿಂದನೆ, ಅಪರಾಧ ಸಂಚು ಆರೋಪದಡಿ ರಾಮಕೃಷ್ಣಯ್ಯ, ಉಪೇಂದ್ರಕುಮಾರ್ ಮತ್ತು ಕಲಾವತಿ ವಿರುದ್ಧ ದೂರು ದಾಖಲಾಗಿದೆ.