ಬೆಂಗಳೂರು ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಯು ಕೆಂಗೇರಿ ಕೆರೆಗೆ ಸಂಸ್ಕರಿಸಿದ ನೀರು ಹರಿಸುವ ಕಾಮಗಾರಿಯನ್ನು ತ್ವರಿತವಾಗಿ ಪೂರೈಸಿದ್ದು, ಕುಸಿದಿರುವ ಅಂತರ್ಜಲವನ್ನು ಮರುಪೂರಣಗೊಳಸಲು ಮುಂದಾಗಿದೆ ಎಂದು ಜಲಮಂಡಳಿ ಹೇಳಿದೆ.
ವೃಷಭಾವತಿ ವ್ಯಾಲಿಯಲ್ಲಿರುವ ತ್ಯಾಜ್ಯ ನೀರು ಸಂಸ್ಕರಣಾ ಘಟಕ, ನಾಯಂಡಹಳ್ಳಿ ಕೆರೆ, ಕೆಂಗೇರಿ ತ್ಯಾಜ್ಯ ನೀರು ಶುದ್ದೀಕರಣ ಘಟಕದಿಂದ ಸಂಸ್ಕರಿಸಿದ ನೀರನ್ನು ಕೆಂಗೇರಿ ಕೆರೆಗೆ ತುಂಬಿಸಲಾಗುತ್ತಿದೆ. ಸಂಸ್ಕರಿಸಿದ ನೀರನ್ನು ದುಬಾಸಿಪಾಳ್ಯ, ಹೊಸಕೆರಳ್ಳಿ ಹಾಗೂ ಹಲಗೇವಡೆರಹಳ್ಳಿ ಕೆರೆಗಳಿಗೆ ತುಂಬಿಸುವ ಕಾಮಗಾರಿಯೂ ಚಾಲನೆಯಲ್ಲಿದೆ ಎಂದು ಹೇಳಿದೆ.
ಮಾರ್ಚ್ 24ರಂದು ಕೆಂಗೇರಿ ಕೆರೆಗೆ ನೀರು ತುಂಬಿಸುವ ಕಾರ್ಯವನ್ನು ಪರಿಶೀಲಿಸಿದ ಜಲಮಂಡಳಿ ಅಧ್ಯಕ್ಷ ಡಾ. ರಾಮ್ ಪ್ರಸಾತ್ ಮನೋಹರ್ ಮಾತನಾಡಿ, “ಎರಡನೇ ಹಂತದಲ್ಲಿ ಸಂಸ್ಕರಿಸಿದ ನೀರನ್ನು ಕೆರೆಗಳಿಗೆ ತುಂಬಿಸುವ ಕಾರ್ಯಕ್ಕೆ ಈಗಾಗಲೇ ಚಾಲನೆ ನೀಡಲಾಗಿತ್ತು. ಇದರ ಹಿನ್ನಲೆ, ಕೆಲವು ದಿನಗಳ ಹಿಂದೆ ಕೆಂಗೇರಿ ಕೆರೆಗೆ ಭೇಟಿ ನೀಡಿ ಕಾಮಗಾರಿಯ ಪ್ರಗತಿಯನ್ನು ಚುರುಕುಗೊಳಿಸುವಂತೆ ಸೂಚಿಸಲಾಗಿತ್ತು. ಮಾರ್ಚ್ 24ರಂದು ಕೆರೆಗೆ ನೀರು ಹರಿಸುವ ಪೈಪ್ ಲೈನ್ ಅಳವಡಿಸಲಾಗಿದ್ದು, ನೀರು ಹರಿಸಲಾಗುತ್ತಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ಉತ್ತರಪ್ರದೇಶ | ಹೋಳಿ ಆಚರಣೆ ವೇಳೆ ಮುಸ್ಲಿಂ ಮಹಿಳೆಯರಿಗೆ ಕಿರುಕುಳ; ನಾಲ್ವರ ಬಂಧನ
“ಜಲಮಂಡಳಿಯ ವತಿಯಿಂದ ದಾಖಲೆಯ ಸಮಯದಲ್ಲಿ ಅಗತ್ಯ ಕಾಮಗಾರಿಯನ್ನು ಪೂರೈಸಲಾಗಿದ್ದು, ಬತ್ತಿ ಹೋಗಿದ್ದ ಜಲಮೂಲವಾದ ಕೆಂಗೇರಿ ಕೆರೆಗೆ ಮತ್ತೊಮ್ಮೆ ಜೀವ ಜಲ ತುಂಬಿಸಲಾಗುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ಈ ಕೆರೆ ತುಂಬಲಿದ್ದು, ಅಂತರ್ಜಲ ಮರುಪೂರಣ ಪ್ರಾರಂಭವಾಗಲಿರುವುದು ಸಂತಸದ ವಿಷಯವಾಗಿದೆ” ಎಂದು ಹೇಳಿದರು.
“ಈಗಾಗಲೇ ನಾಯಂಡಹಳ್ಳಿ ಕೆರೆ ಸೇರಿದಂತೆ 14 ಕೆರೆಗಳಿಗೆ ನೀರು ತುಂಬಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಕೆರೆಗಳಿಗೆ ನೀರನ್ನು ತುಂಬಿಸುವುದು ಜಲಮಂಡಳಿಯ ಗುರಿಯಾಗಿದೆ. ನಗರದಲ್ಲಿ ಅವ್ಯಾಹತವಾಗಿ ಅಂತರ್ಜಲದ ಬಳಕೆಯಾಗುತ್ತಿದೆ. ಭವಿಷ್ಯದ ನೀರಿನ ಅವಶ್ಯಕತೆ ಪೂರೈಸಲು ಅಂತರ್ಜಲ ಮರುಪೂರಣಕ್ಕೆ ಅಗತ್ಯವಿರುವ ಎಲ್ಲ ಕ್ರಮಗಳನ್ನು ಜಲಮಂಡಳಿಯ ವತಿಯಿಂದ ಕೈಗೊಳ್ಳಲಾಗುತ್ತಿದೆ” ಎಂದು ರಾಮ್ಪ್ರಸಾತ್ ಮನೋಹರ್ ತಿಳಿಸಿದರು.