ಅಂತರ್ಜಲ ಕುಸಿತದಿಂದ ನೀರಿನ ಅಭಾವಕ್ಕೆ ತುತ್ತಾಗಿರುವ ಬೆಂಗಳೂರು ನಗರದಲ್ಲಿ ಅಂತರ್ಜಲ ವೃದ್ಧಿಸುವ ಹಾಗೂ ಕೆರೆಗಳಿಗೆ ಮಳೆ ನೀರು ತುಂಬಿಸುವ ಉದ್ದೇಶದಿಂದ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಿಂದ ಸಮುದಾಯ ಮಳೆ ಕೋಯ್ಲು (ಕಮ್ಯೂನಿಟಿ ರೈನ್ ಹಾರ್ವೆಸ್ಟಿಂಗ್) ಪ್ರಾರಂಭಿಸಲು ಚಿಂತಿಸಿದೆ.
“ಬೆಂಗಳೂರು ನಗರದಲ್ಲಿ ಕಟ್ಟಡಗಳಲ್ಲಿ ಮಳೆ ನೀರು ಕೋಯ್ಲು ಅಳವಡಿಕೆಯನ್ನು ಕಡ್ಡಾಯಗೊಳಿಸಲಾಗಿದೆ. ಆದರೆ, ಕಟ್ಟಡಗಳಲ್ಲಿನ ಜಾಗದ ಕೊರತೆ ಹಾಗೂ ನಿರ್ಲಕ್ಷದಿಂದ ಇದರ ಸರಿಯಾದ ಅನುಷ್ಠಾನ ಸಾಧ್ಯವಾಗಿಲ್ಲ. ಬಹುತೇಕ ಕಡೆಗಳಲ್ಲಿ ಕೇವಲ ಅಗತ್ಯ ಅನುಮತಿ ಪಡೆದುಕೊಳ್ಳಲು ಮಳೆ ನೀರು ಕೊಯ್ಲು ಪದ್ದತಿಯನ್ನು ಅಳವಡಿಸಿದ್ದು, ಮಳೆ ನೀರನ್ನ ಸಂಗ್ರಹಿಸಿ ಒಳಚರಂಡಿಗೆ ನೇರವಾಗಿ ಹರಿಯಬಿಡಲಾಗುತ್ತಿದೆ” ಎಂದು ಜಲಮಂಡಳಿ ಅಧ್ಯಕ್ಷ ಡಾ. ರಾಮ್ ಪ್ರಸಾತ್ ಮನೋಹರ್ ತಿಳಿಸಿದ್ದಾರೆ.
“ಇದರಿಂದ ಮಳೆಗಾಲದಲ್ಲಿ ಒಳಚರಂಡಿ ವ್ಯವಸ್ಥೆ ಒತ್ತಡಕ್ಕೆ ಒಳಗಾಗಿ ಪ್ರವಾಹ ಪರಿಸ್ಥಿತಿ ಉಂಟಾಗುತ್ತದೆ. ಅಲ್ಲದೇ, ಇದರಿಂದ ಅಮೂಲ್ಯ ನೀರು ವ್ಯರ್ಥವಾಗಿ ಹರಿದು ಚರಂಡಿ ಪಾಲಾಗುತ್ತಿದೆ. ನೀರು ವ್ಯರ್ಥವಾಗದಂತೆ ಅಮೂಲ್ಯ ಮಳೆ ನೀರನ್ನ ಸಂಗ್ರಹಿಸಿ ಅದನ್ನ ಅಂತರ್ಜಲ ವೃದ್ದಿಗೆ ಬಳಸಿಕೊಳ್ಳಲು ಕಮ್ಯೂನಿಟಿ ರೈನ್ ಹಾರ್ವೆಸ್ಟಿಂಗ್ ಯೋಜನೆಯನ್ನು ಜಲಮಂಡಳಿ ರೂಪಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಿದೆ” ಎಂದು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಸಮಾಜದ ಪ್ರತಿಯೊಬ್ಬರು ಮತ ಚಲಾಯಿಸಬೇಕು; ಇದು ಚುನಾವಣಾ ಆಯೋಗದ ಗುರಿ: ತುಷಾರ್ ಗಿರಿನಾಥ್
“ಅಪಾರ ಪ್ರಮಾಣದಲ್ಲಿ ಹರಿದು ಹೋಗುವ ಮಳೆ ನೀರನ್ನ ಸಮರ್ಪಕವಾದ ವ್ಯವಸ್ಥೆಯ ಮೂಲಕ ಕೆರೆಗಳಿಗೆ ಹರಿಸುವುದು ಈ ಯೋಜನೆಯ ಮುಖ್ಯ ಉದ್ದೇಶ. ಅದರಲ್ಲೂ ಕೆರೆಗಳಿಂದ 500 ಮೀಟರ್ ಸುತ್ತಳತೆಯಲ್ಲಿರುವಂತಹ ಅಪಾರ್ಟ್ಮೆಂಟ್ಗಳು, ಸಾರ್ವಜನಿಕ ಪ್ರದೇಶಗಳು ಹಾಗೂ ದೊಡ್ಡ ಕಟ್ಟಡಗಳಿಂದ ಪೈಪ್ಲೈನ್ ಮೂಲಕ ಕೆರೆಗಳಿಗೆ ನೇರವಾಗಿ ಮಳೆ ನೀರನ್ನ ತುಂಬಿಸುವ ಚಿಂತನೆ ನಮ್ಮದಾಗಿದೆ” ಎಂದಿದ್ದಾರೆ.
“ಇದರಿಂದ ಕೆರೆಗಳಿಗೆ ಅಮೂಲ್ಯ ಮಳೆ ನೀರು ತುಂಬುವ ವ್ಯವಸ್ಥೆ ಮಾಡುವುದು ಸಾಧ್ಯವಾಗಲಿದ್ದು, ಅಂತರ್ಜಲ ವೃದ್ದಿಗೂ ಸಹಕಾರಿಯಾಗಲಿದೆ. ಮೊದಲ ಹಂತದಲ್ಲಿ ವರ್ತೂರು, ಬೆಳ್ಳಂದೂರು ಭಾಗದಲ್ಲಿ ಈ ಯೋಜನೆಯನ್ನ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಮಂಡಳಿ ಚಿಂತನೆ ನಡೆಸಿದೆ” ಎಂದು ಹೇಳಿದ್ದಾರೆ.