ಹಾಸನದ ಒಡಲಲ್ಲಿ ಇಂತಹ ಇನ್ನೆಷ್ಟು ಕತೆಗಳಿವೆಯೋ ಗೊತ್ತಿಲ್ಲ. ಪ್ರಜ್ವಲ್ ರೇವಣ್ಣ ವಿಡಿಯೊ ಬಹಿರಂಗಗೊಂಡು ಇಂದಿಗೆ ಭರ್ತಿ ಒಂದು ತಿಂಗಳಾಗಿದೆ. ಆರೋಪಿಯ ಮನೆಯವರಾರೂ ಊರು ತೊರೆದಿಲ್ಲ. ಸಂತ್ರಸ್ತೆಯರು, ಬಲಿಪಶುಗಳು ಆರೋಪಿಗಳಂತೆ ಮರೆಯಲ್ಲಿ ಬದುಕುತ್ತಿದ್ದಾರೆ.
ಹಾಸನದ ಸಂಸದನ ವಿಕೃತ ಲೈಂಗಿಕ ಚಟುವಟಿಕೆಯ ಆಳ ಅಗಲ ತಿಳಿಯಲು ಹೊರಟವರಿಗೆ ಮಾನಸಿಕ ಆಘಾತವಾಗುವುದಂತು ನಿಶ್ಚಿತ. ಸಿನಿಮಾ ಕತೆಗಳಲ್ಲೂ ಕಂಡು ಕೇಳರಿಯದಷ್ಟು ಲೈಂಗಿಕ ಕ್ರೌರ್ಯಗಳು ಆ ಒಬ್ಬನಿಂದ ನಡೆದುಹೋಗಿದೆ.
“ಇಡೀ ಸಮಾಜವೇ ಅತ್ಯಾಚಾರಗೊಂಡಿದೆ” ಎಂದು ಗೌಡರ ಆಪ್ತ ಬಳಗದಲ್ಲಿದ್ದ ಮಾಜಿ ರಾಜ್ಯಸಭಾ ಸದಸ್ಯ ಮತ್ತು ವಕೀಲರಾಗಿರುವ ಎಚ್ ಕೆ ಜವರೇಗೌಡರ ಮಾತು ಅಕ್ಷರಶಃ ನಿಜ. ಅಷ್ಟೇ ಅಲ್ಲ “ಆರೋಪಿ ಬಚಾವ್ ಆದರೂ ಜನರ ಮನಸ್ಸಿನ ಡೊಮೇನ್ನಲ್ಲಿ ಈ ಹಗರಣ ಶಾಶ್ವತವಾಗಿ ದಾಖಲಾಗಲಿದೆ. ಅದರಿಂದ ತಪ್ಪಿಸಿಕೊಳ್ಳುವುದು ಸಾಧ್ಯವೇ ಇಲ್ಲ” ಎಂಬ ಅವರ ಹೇಳಿಕೆ ಆ ಕುಟುಂಬದ ಅವನತಿಯ ಭವಿಷ್ಯವನ್ನು ಹೇಳುತ್ತದೆ.
ಆಘಾತಕಾರಿ ಸಂಗತಿಯೆಂದರೆ ಪ್ರಜ್ವಲ್ನ ತಾತನೊಂದಿಗೆ ನಾಲ್ಕು ದಶಕಗಳಿಂದ ಬಾಂಧವ್ಯ ಹೊಂದಿದ್ದ ಅಪ್ಪಟ ಜೆಡಿಎಸ್ ಬೆಂಬಲಿಗ ಕುಟುಂಬದ ಮೂರನೇ ತಲೆಮಾರಿನ ಯುವತಿಯೊಬ್ಬಳು ಈತನ ಕಾಮವಾಂಛೆಗೆ ಬಲಿಯಾಗಿರೋದು ಆ ಕುಟುಂಬವನ್ನು ಅಧೀರರನ್ನಾಗಿಸಿದೆ. ಯುವತಿಯ ತಾತ 1977ರಿಂದಲೂ ಮಾಜಿ ಪ್ರಧಾನಿಗಳ ಅತ್ಯಾಪ್ತ ವಲಯದಲ್ಲಿ ಗುರುತಿಸಿಕೊಂಡವರು. ಅಷ್ಟೇ ಅಲ್ಲ ಪ್ರತಿಷ್ಟಿತ, ಸುಶಿಕ್ಷಿತ ಕುಟುಂಬವದು. ಅವರ ಮೊಮ್ಮಗಳ ಸ್ನೇಹ ಬೆಳೆಸಿದ ಸಂಸದ ಮದುವೆಯಾಗುವುದಾಗಿ ನಂಬಿಸಿ ಆಕೆಗೆ ವಿಡಿಯೊ ಕಾಲ್ ಮಾಡಿ ಬೆತ್ತಲಾಗುವಂತೆ ಪೀಡಿಸಿ ಅದನ್ನೂ ಮೊಬೈಲ್ನಲ್ಲಿ ಇಟ್ಟುಕೊಂಡಿದ್ದ. ಆ ಕುಟುಂಬಕ್ಕೆ ಈಗ ಸಿಡಿಲು ಬಡಿದಂತಾಗಿದೆ ಎಂದು ಆ ಕುಟುಂಬದ ಆಪ್ತರೊಬ್ಬರು ʼಈ ದಿನʼಕ್ಕೆ ತಿಳಿಸಿದರು.
ಹಾಸನದಲ್ಲಿ ಉಪನ್ಯಾಸಕಿಯಾಗಿರುವ ಒಬ್ಬರು ತಮ್ಮ ತವರೂರಿಗೆ ಹೋಗಿದ್ದರಂತೆ. ಅಲ್ಲಿ ಭೇಟಿಯಾದ ವ್ಯಕ್ತಿಯೊಬ್ಬರು “ಏನ್ ನಿಮ್ಮ ಹಾಸನದ ಕತೆ” ಎಂದು ವ್ಯಂಗ್ಯವಾಗಿ ನಕ್ಕರಂತೆ. ಹಾಸನದ ಹೆಸರು ಹೇಳುವುದಕ್ಕೂ ಮುಜುಗರ ಪಡುವಂತಾಗಿದೆ ಎಂಬುದು ಅವರ ಮಾತು.
ಕಷ್ಟಪಟ್ಟು ದುಡಿದು ಆಸ್ತಿ ಮನೆ ಮಾಡಿಕೊಂಡವರನ್ನೂ “ಹೆಂಡತಿಯ ತಲೆ ಹಿಡಿದು ಆಸ್ತಿ ಮಾಡಿದ್ದಾನೆ” ಎಂದು ಆಡಿಕೊಳ್ಳುವ ಪರಿಸ್ಥಿತಿ ಹಾಸನದಲ್ಲಿ ನಿರ್ಮಾಣವಾಗಿದೆ ಎಂದು ಹಿರಿಯರೊಬ್ಬರು ಹೇಳಿದರು. ಆ ಕುಟುಂಬದ ಜೊತೆ ನಂಟಿಲ್ಲದಿದ್ದರೂ, ಆತನ ನೆರಳು ಸೋಂಕದವರೂ ಈಗ ಅವಮಾನದಿಂದ ನರಳುವಂತಾಗಿದೆ. ಮನೆಯೊಳಗೆ ಒಬ್ಬರನ್ನೊಬ್ಬರು ಅನುಮಾನದಿಂದ ಕಾಣುವಂತಾಗಿದೆ. ಸಂಸಾರದೊಳಗಿನ ಅನುಮಾನದ ವಿಶಾಚಿಗಳು ಈಗ ಹತ್ತಾರು ಕೈ- ಬಾಯಿಗಳಿಂದ ದಾಳಿ ಶುರುಮಾಡಿವೆ.
ಇದುವರೆಗೂ ಹೆಮ್ಮೆಯಿಂದ ಓಡಾಡುತ್ತ ಹಲವರಿಂದ ಗೌರವ ಪಡೆಯುತ್ತಿದ್ದ ಆ ಹೆಣ್ಣುಮಗಳಿಗೆ ಈಗ ಕಚೇರಿಯ ಸಹಾಯಕ ಕೂಡಾ ಗೌರವ ಕೊಡುತ್ತಿಲ್ಲ. ಆಕೆ ತನ್ನ ಫೋಟೋವನ್ನು ಮಾರ್ಫಿಂಗ್ ಮಾಡಲಾಗಿದೆ ಎಂದು ಹೇಳುತ್ತಾ ದಿನ ದೂಡುತ್ತಿದ್ದಾರೆ. “ಆ ಮೂರೂ ಜನರ ದೃಷ್ಟಿಕೋನ ಸರಿಯಿಲ್ಲ” ಎಂದಷ್ಟೇ ಹೇಳುವ ಆಕೆ ದೂರು ಕೊಡಲು ಸಿದ್ದರಿಲ್ಲ ಎಂದು ಸಾಮಾಜಿಕ ಕಾರ್ಯಕರ್ತರೊಬ್ಬರು ತಿಳಿಸಿದರು.
ಆಕೆಯ ಮನೆ ಆಸ್ತಿಯ ಬಗ್ಗೆ ಇದುವರೆಗೂ ಅನುಮಾನ ಪಡದ ಹಾಸನದ ಜನ ಈಗ ಇಡೀ ಕುಟುಂಬದ ಆಸ್ತಿ, ಮನೆ, ಕಾರು, ಸೈಟಿನ ಲೆಕ್ಕ ಹಾಕುತ್ತಿದ್ದಾರಂತೆ. ಆಕೆಯ ಕುಟುಂಬದವರು ಕಟ್ಟಾ ಜೆಡಿಎಸ್ ಬೆಂಬಲಿಗರು. ಆ ಕಾರಣಕ್ಕೆ ದೂರು ಕೊಟ್ಟು ಗೌಡರ ಕುಟುಂಬದ ಸಿಟ್ಟಿಗೆ ಗುರಿಯಾಗಲು ಅವರು ಸಿದ್ದರಿಲ್ಲ. ಇದು ಎಂತಹಾ ದುರಂತ ಸ್ಥಿತಿ!
ಪ್ರಜ್ವಲ್ನ ಮೊಬೈಲ್ನಲ್ಲಿದ್ದ ಜೆಡಿಎಸ್ ಕಾರ್ಯಕರ್ತೆಯೊಬ್ಬರ ಫೋಟೋವನ್ನು ಡ್ರೈವರ್ ಕಾರ್ತಿಕ್ ಕೆಲ ತಿಂಗಳ ಹಿಂದೆ ಭವಾನಿ ರೇವಣ್ಣ ಅವರಿಗೆ ಕಳಿದ್ದನಂತೆ. ಆಗ ಆಕೆಯನ್ನು ಕರೆಸಿಕೊಂಡ ಭವಾನಿ, “ಯಾವುದಕ್ಕೂ ತಲೆ ಕೆಡಿಸಿಕೊಳ್ಳಬೇಡ. ನಾನು ನೋಡಿಕೊಳ್ತೇನೆ” ಎಂದು ಹೇಳಿ ಕಳಿಸಿದ್ದರಂತೆ. ಆದರೆ, ಈಗ ಆಕೆಯ ವಿಡಿಯೊ ಕೂಡಾ ಬಹಿರಂಗಗೊಂಡಿದೆ. ಹೀಗಾಗಿ ಇದು ಇಡೀ ಕುಟುಂಬ ಸೇರಿ ಮಾಡಿದ ಘೋರ ಕೃತ್ಯ ಎಂದೇ ಹೇಳಬೇಕು.
ಪ್ರಜ್ವಲ್ ರೇವಣ್ಣ ತಾನು ಸಹಾಯ ಮಾಡಿ ಕುಟುಂಬಗಳಿಂದ ಲಂಚದ ರೂಪದಲ್ಲಿ ಹೆಣ್ಣುಮಕ್ಕಳನ್ನು ಬಳಸಿಕೊಂಡಿದ್ದಾನೆ. ಆತ ಹಾಸನವನ್ನೇ ತನ್ನ ವೇಶ್ಯಾಗೃಹ ಮಾಡಲು ಹೊರಟಿದ್ದ ಎಂದು ಗಂಭೀರ ಆರೋಪ ಮಾಡಿದ್ದಾರೆ ಹಿರಿಯ ಪತ್ರಕರ್ತ ಆರ್ ಪಿ ವೆಂಕಟೇಶ್ ಮೂರ್ತಿ.
ಆರೋಪಿಯ ತಂದೆ ಎಚ್ ಡಿ ರೇವಣ್ಣ ಅವರು, ಇವು ಐದು ವರ್ಷಗಳ ಹಿಂದಿನ ವಿಡಿಯೊ ಎಂದಿದ್ದಾರೆ. ಕಾರ್ತಿಕ್ ತಾನು ವಿಡಿಯೊ ಕಾಪಿ ಮಾಡಿಕೊಂಡು ಎರಡು ವರ್ಷಗಳಾಗಿವೆ ಎಂದಿದ್ದಾನೆ. ಹಾಗಿದ್ದರೆ ಆ ನಂತರ ಅದೆಷ್ಟು ಹೆಣ್ಣುಮಕ್ಕಳ ಬಲಿ ಪಡೆಯಲಾಗಿದೆ ಎಂಬುದು ಪ್ರಶ್ನಾರ್ಹ ಎನ್ನುತ್ತಾರೆ ಅವರು.
ಇದನ್ನೂ ಓದಿ ಲೈಂಗಿಕ ದೌರ್ಜನ್ಯ ಪ್ರಕರಣ; ಸಂತ್ರಸ್ತೆಯರ ಪರ ಇಡೀ ಸಮಾಜವೇ ನಿಲ್ಲಬೇಕಿದೆ
ಅಮೆರಿಕದ ಅಧ್ಯಕ್ಷರ ಮೇಲೆ ಒಬ್ಬ ಮಹಿಳೆಯಿಂದ ಲೈಂಗಿಕ ದೌರ್ಜನ್ಯದ ಆರೋಪ ಬಂದಾಗ ಯಾವುದೇ ಒತ್ತಡ, ಪ್ರಭಾವವನ್ನೂ ಲೆಕ್ಕಿಸದೇ ಆ ದೇಶದ ಕಾನೂನು ಅಧ್ಯಕ್ಷರನ್ನೂ ಕಟಕಟೆಯಲ್ಲಿ ತಂದು ನಿಲ್ಲಿಸುತ್ತದೆ. ಆದರೆ ನಮ್ಮಲ್ಲಿ ಪ್ರಭಾವಿಗಳು, ಅಧಿಕಾರಸ್ಥರು ಎಂಥಾ ಘೋರ ಅಪರಾಧ ಮಾಡಿದರೂ ಸಮಾಜ ಅವರ ಪರ ನಿಲ್ಲುತ್ತದೆ ಎಂಬುದಕ್ಕೆ ಸದ್ಯ ಹಾಸನದ ಪ್ರಕರಣದಲ್ಲಿ ನಡೆಯುತ್ತಿರುವ ಬೆಳವಣಿಗೆಗಳೇ ಸಾಕ್ಷಿ. ಬಡವನಿಗೆ, ಬಲ್ಲಿದನಿಗೆ ಒಂದೇ ಕಾನೂನು ಎರಡೆರಡು ತರ ವರ್ತಿಸುತ್ತದೆ ಎಂಬುದೇ ಪ್ರಜಾಪ್ರಭುತ್ವದ ವ್ಯಂಗ್ಯ.
ಇದನ್ನೂ ಓದಿ ʼಈ ದಿನʼ ಗ್ರೌಂಡ್ ರಿಪೋರ್ಟ್ 1 | ನಿಶ್ಚಿತಾರ್ಥ, ಮದುವೆ, ಸಂಬಂಧ ಮುರಿಯುವ ಆತಂಕದಲ್ಲಿ ಹಾಸನದ ಕುಟುಂಬಗಳು…
ಹಾಸನದ ಒಡಲಲ್ಲಿ ಇಂತಹ ಇನ್ನೆಷ್ಟು ಕತೆಗಳಿವೆಯೋ ಗೊತ್ತಿಲ್ಲ. ಪ್ರಜ್ವಲ್ ರೇವಣ್ಣ ವಿಡಿಯೊ ಬಹಿರಂಗಗೊಂಡು ಇಂದಿಗೆ ಭರ್ತಿ ಒಂದು ತಿಂಗಳಾಗಿದೆ. ಕೆಲವು ಸಂತ್ರಸ್ತೆಯರು ದೂರು ನೀಡಿದ್ದಾರೆ. ಎಸ್ಐಟಿ ಆರೋಪಿಗೆ ನೋಟಿಸ್ ನೀಡುತ್ತಲೇ ಇದೆ. ಆರೋಪಿಯ ಕುಟುಂಬದವರು ರಾಜಾರೋಷವಾಗಿ ರಾಜಕೀಯ ಹೇಳಿಕೆ ನೀಡುತ್ತಿದ್ದಾರೆ. ಆದರೆ ಆರೋಪಿಯನ್ನು ಕರೆಸುವ ಕೆಲಸ ಮಾಡುತ್ತಿಲ್ಲ. ಅವರಾರೂ ಮನೆ ತೊರೆದಿಲ್ಲ. ಸಂತ್ರಸ್ತೆಯರು, ಬಲಿಪಶುಗಳು ಆರೋಪಿಗಳಂತೆ ಮರೆಯಲ್ಲಿ ಬದುಕುತ್ತಿದ್ದಾರೆ.

ಹೇಮಾ ವೆಂಕಟ್
ʼಈ ದಿನ.ಕಾಮ್ʼನಲ್ಲಿ ಮುಖ್ಯ ವರದಿಗಾರ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಉದಯವಾಣಿ ಮತ್ತು ಪ್ರಜಾವಾಣಿ ಪತ್ರಿಕೆಯಲ್ಲಿ ಹತ್ತು ವರ್ಷಗಳ ಕಾಲ ಉಪಸಂಪಾದಕಿ/ವರದಿಗಾರ್ತಿಯಾಗಿ ಕಾರ್ಯನಿರ್ವಹಿಸಿದ್ದಾರೆ.