ಮುಂಡೋಡಿ ಗ್ರಾಮದ ಕಚ್ಛಿಗೆ ಎಂಬ ಊರಿನಲ್ಲಿ ಆದಿವಾಸಿ ಬುಡಕಟ್ಟು ಸಮುದಾಯಕ್ಕೆ ಸೇರಿದ ಜನರು ತಲತಲಾಂತರದಿಂದ ಈ ಭಾಗದಲ್ಲಿ ವಾಸಿಸುತ್ತಿದ್ದಾರೆ. ಈ ಪ್ರದೇಶಗಳು ದಟ್ಟವಾಗಿ ಕಾಣುವ ಸುತ್ತಲೂ ಅರಣ್ಯ ಪ್ರದೇಶವಾಗಿರುವ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಕ್ಷೇತ್ರಕ್ಕೆ ಸೇರುವ ಗ್ರಾಮಗಳಾಗಿವೆ.
ಸಂಜೆಯಾದರೆ ಬೇಗ ಕತ್ತಲು ಆವರಿಸಿಕೊಳ್ಳುತ್ತದೆ. ಗುಡ್ಡಗಾಡು ಪ್ರದೇಶದಲ್ಲಿರುವ ಮುಂಡೋಡಿ ಹಾಗೂ ಕಚ್ಚಿಗೆ ಗ್ರಾಮದಲ್ಲಿ ಸುಮಾರು 25 ಕುಟುಂಬಗಳು ವಾಸಿಸುತ್ತಿದ್ದಾರೆ.
ಸ್ಥಳೀಯ ನಿವಾಸಿ ಸುಶೀಲಾ ಈ ದಿನ.ಕಾಮ್ ಜೊತೆ ಮಾತನಾಡಿ, “ಹೊಸ ತಂತ್ರಜ್ಞಾನ ಬಂದರೂ ಕೂಡ ನಮಗೆ ಬೇಕಾಗಿರುವ ಸೌಕರ್ಯಗಳು ಇಲ್ಲ. ಮಕ್ಕಳಿಗೆ ವಿದ್ಯಾಭ್ಯಾಸ ಮಾಡಿಸಲು ತುಂಬಾ ಕಷ್ಟಕರವಾಗಿದೆ. ಇಲ್ಲಿಂದ ಶಾಲೆಗೆ ಹೋಗಬೇಕಂದ್ರೆ ಸುಮಾರು ಮೈಲಿಗಟ್ಟಲೆ ನಡೆದುಕೊಂಡೇ ಹೋಗಬೇಕು. ಹಾಗಾಗಿ ಅದೆಷ್ಟೋ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡದೆ ಶಾಲೆ ಬಿಟ್ಟಿದ್ದಾರೆ. ಸರಿಯಾದ ರಸ್ತೆಯೂ ಕೂಡ ಇಲ್ಲದಾಗಿದೆ” ಎಂದು ಹೇಳಿದರು.
“ಇಲ್ಲಿ ವಾಸಿಸುವ ಜನರಿಗೆ ಸರಿಯಾದ ಮೂಲ ಸೌಕರ್ಯಗಳಿಲ್ಲ. ಕುಡಿಯಲು ನೀರು ರಸ್ತೆ, ವಿದ್ಯುತ್, ಹಕ್ಕುಪತ್ರ ಸೇರಿದಂತೆ ಬಹುತೇಕ ಸಮಸ್ಯೆಗಳು ಕಾಣಸಿಗುತ್ತವೆ. ಸುಮಾರು ವರ್ಷಗಳ ಹಿಂದೆ ಉಳುಮೆ ಮಾಡಿಕೊಂಡಿರುವ ಎಕರೆಗಟ್ಟಲೆ ಭೂಮಿಯನ್ನು 2005ರ ನಂತರ ಕಮಿಟಿಯಲ್ಲಿ ಮಾತನಾಡಿ, ಅರಣ್ಯ ಭೂಮಿಯನ್ನು ಕುಂಟೆಗೆ ಇಳಿಸಿದರು” ಎಂದರು.
“ಸರ್ಕಾರದಿಂದ ಕೊಟ್ಟಿರುವ ಜಾಗದ ಹಕ್ಕುಪತ್ರವನ್ನು ಕೆಲವರಿಗೆ ಮಾತ್ರ ಕೊಟ್ಟಿದ್ದಾರೆ. ಉಳಿದವರಿಗೆ ಇಷ್ಟು ವರ್ಷ ಕಳೆದರೂ ಹಕ್ಕುಪತ್ರ ನೀಡಿಲ್ಲ. ಮಳೆ ನೀರನ್ನೇ ಆಧಾರವಾಗಿಟ್ಟುಕೊಂಡು ಕುಡಿಯಲು ಬಳಸುತ್ತಿದ್ದೇವೆ. ಹಿಂದಿನಿಂದಲೂ ಗೆಡ್ಡೆ ಗೆಣಸು ತಿಂದು ಬದುಕುತ್ತಿರುವ ಜನರು ಈಗಲೂ ಈ ಭಾಗದಲ್ಲಿದ್ದಾರೆ. ವೃದ್ಧರಿಗೆ ಆರೋಗ್ಯದ ಸಮಸ್ಯೆಯಾದಾಗ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಗದೆ ಏಷ್ಟೋ ಮಂದಿಯ ಪ್ರಾಣ ಹಾನಿಯಾಗಿದೆ” ಎಂದು ಬೇಸರ ವ್ಯಕ್ತಪಡಿಸಿದರು.
“ರಸ್ತೆ ಮತ್ತು ವಿದ್ಯುತ್ ಸೌಲಭ್ಯವಿಲ್ಲದಿರುವುದು ಪ್ರಮುಖವಾಗಿ ಕಾಡುತ್ತಿರುವ ಸಮಸ್ಯೆಯಾಗಿದೆ. ಕೂಲಿ ಕೆಲಸ ಮಾಡುವ ಜನರು ನಾವು. ಕೆಲಸ ಮುಗಿಸಿ ಕಾಡಿಗೆ ಹೋಗಿ ಸೌದೆ ತಂದು ಒಲೆ ಹೊತ್ತಿಸಬೇಕಾಗಿದೆ. ಕತ್ತಲಾದರೆ ಅಡುಗೆ ಮಾಡಿ ಊಟ ಮಾಡಲು ವಿದ್ಯುತ್ ಇಲ್ಲ, ಹಗಲಿನಲ್ಲಿಯೇ ನಾವು ಎಲ್ಲ ಕೆಲಸ ಮಾಡಿ ಮುಗಿಸಬೇಕಿದೆ. ಸರ್ಕಾರದಿಂದ ಎಲ್ಲ ಯೋಜನೆಗಳನ್ನು ನೀಡುತ್ತಿದ್ದಾರೆ. ಆದರೆ ನಮಗೆ ಈವರೆಗೂ ಯಾವುದೇ ಸೌಲಭ್ಯ ದೊರೆತಿಲ್ಲ. ಹೊರಗಿನ ಪ್ರಪಂಚದಲ್ಲಿ ಏನಾಗುತ್ತಿದೆ ಎಂಬ ಮಾಹಿತಿಯೂ ನಮಗೆ ತಿಳಿಯುವುದಿಲ್ಲ” ಎಂದು ಅವಲತ್ತುಕೊಂಡರು.
“ಆಸ್ಪತ್ರೆಗೆ ಹೋಗಬೇಕು, ಏನಾದರೂ ದಿನಸಿ, ದವಸ ಧಾನ್ಯ ತರಬೇಕೆಂದರೆ ಹೊರಗೆ ಹೋಗಬೇಕು. ತುಂಬಾ ದೂರ ನಡೆದು ಅಲ್ಲಿಂದ ಆಟೋದಲ್ಲಿ ಹೋಗಬೇಕು. ಆಟೋಕ್ಕೆ ₹600 ಹಣ ಬೇಕು. ಕೂಲಿ ಮಾಡಿದರೂ ಅಷ್ಟೊಂದು ಕೂಲಿ ದೊರೆಯುವುದಿಲ್ಲ. ಹೀಗಿರುವಾಗ ನಾವು ಬದುಕು ಸಾಗಿಸುವುದಾದರೂ ಹೇಗೆ?” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮುಂಡೋಡಿ ಗ್ರಾಮಸ್ಥ ತಿಮ್ಮಪ್ಪ ಈ ದಿನ.ಕಾಮ್ನೊಂದಿಗೆ ಮಾತನಾಡಿ, “ಇಲ್ಲಿ ಜೀವನ ನಡೆಸಲು ಹರಸಾಹಸ ಪಡುವಂತಾಗಿದೆ. ರಾತ್ರಿಯಲ್ಲಿ ಜೀವ ಕೈಯಲ್ಲಿಟ್ಟುಕೊಂಡು ಬದುಕುವಂತಾಗಿದೆ. ಸುತ್ತ ಮುತ್ತಲು ಕಾಡು, ನಿರ್ಜನ ಪ್ರದೇಶವಾಗಿದೆ. ಈವರೆಗೂ ವಿದ್ಯುತ್ ಅನ್ನೋದೇ ಕಂಡಿಲ್ಲ. ನೈಸರ್ಗಿಕ ಬೆಳಕು ಇದ್ದಾಗಲೇ ಕೆಲಸ ಕಾರ್ಯಗಳನ್ನು ಮುಗಿಸಿಕೊಳ್ಳಬೇಕು. ಎರಡು ವರ್ಷದ ಹಿಂದೆ ಎರಡ್ಮೂರು ಸೋಲಾರ್ ಹಾಕಿದ್ದರು. ಅದರಿಂದ ಏನೂ ಉಪಯೋಗ ಇಲ್ಲದಂತಾಗಿದೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ದಲಿತ ಮಕ್ಕಳಿಂದ ಮಲದ ಗುಂಡಿ ಸ್ವಚ್ಛತೆ, ಜಾತಿ ಕ್ರೌರ್ಯವನ್ನು ನೆನಪಿಸುತ್ತದೆ
“ನಮ್ಮ ಸಮಾಜದಲ್ಲಿ ವಿಜ್ಞಾನ ಮುಂದುವರೆದರೂ ಏನೂ ಪ್ರಯೋಜನವಿಲ್ಲದಂತಾಗಿದೆ. ಈ ಪ್ರದೇಶದ ಜನರು ತುಂಬಾ ಕಷ್ಟ ಅನುಭವಿಸುತ್ತಿದ್ದಾರೆ. ಇನ್ನಾದರೂ ಸ್ಥಳೀಯ ಶಾಸಕರು ಹಾಗೂ ಅಧಿಕಾರಿಗಳು ಕೂಡಲೇ ಈ ಗ್ರಾಮದ ಸಮಸ್ಯೆ ಆಲಿಸಿ ಬಗೆಹರಿಸಬೇಕು” ಎಂದು ಮುಂಡೋಡಿ ಗ್ರಾಮದ ಜನರು ಈ ದಿನ.ಕಾಮ್ನೊಂದಿಗೆ ತಮ್ಮ ಸಮಸ್ಯೆ ಹಂಚಿಕೊಂಡಿದ್ದಾರೆ.
ಇಲ್ಲಿ ಬದುಕಿರುವವರ ಇಂಗಿತವನ್ನು ಈಡೇರಿಸಲು ಆಳ್ವಿಕೆ ಚುರಿಕಿನಿಂದ ಕೆಲಸಮಾಡಲಿ.
ಬಿಡಿಬಿಡಿಯಾಗಿ ದೂರ ಬದುಕುತ್ತಿರುವ ಈ ಮನೆಗಳಮಂದಿ ಒಂದೆಡೆ ಬದುಕಲು ಎಡೆಯಾಗುವಂತೆ ದಾರಿಗೆ ಹೊಂದಿಕೊಂಡಂತೆ ಬಡಾವಣೆಮಾಡಿ ಮನೆಕಟ್ಟಿಕೊಡುವಂತಾಗಬೇಕು.ದಾರಿ,ನೀರು, ಕರೆಂಟ್ ಮುಂತಾದ ಸವಲತ್ತನ್ನು ಕೊಡಲು ಸರಿಯಾಗುತ್ತದೆ.
ದಯಮಾಡಿ ಆ ಸಮುದಾಯದವರನ್ನು ಸಹ ಆಧುನಿಕ ನಾಗರಿಕ ವ್ಯವಸ್ಥೆಗೆ ತನ್ನಿ.