- ಕೆರೆಗಳ ಉಸ್ತುವಾರಿ ಬಿಬಿಎಂಪಿಯ ಜವಾಬ್ದಾರಿ
- ಅಧಿಕಾರಿಗಳ ನಿರಾಸಕ್ತಿಗೆ ಹೋರಾಟಗಾರರ ಅಸಮಾಧಾನ
ಕಳೆದ ವಾರ ಮಡಿವಾಳ ಕೆರೆಯಲ್ಲಿ ಮೀನುಗಳ ಮಾರಣಹೋಮ ನಡೆದಿದ್ದರೂ ನೀರಿನ ಗುಣಮಟ್ಟವನ್ನು ಇನ್ನೂ ಸುಧಾರಿಸಲಾಗಿಲ್ಲ. ಮಂಗಳವಾರ ಬೆಳಗ್ಗೆಯೂ ಕೆರೆಯ ದಡದಲ್ಲಿ ನೂರಾರು ಮೀನುಗಳು ಸತ್ತು ತೇಲಾಡಿವೆ. ಇಷ್ಟಾದರೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಹಾಗೂ ಅರಣ್ಯ ಇಲಾಖೆ ಕ್ರಮ ಕೈಗೊಂಡಿಲ್ಲ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.
ಬೆಂಗಳೂರಿನ ಕೆರೆಗಳಿಗೆ ಕೊಳಚೆ ನೀರು ಸೇರುವುದನ್ನು ತಡೆಯುವಲ್ಲಿ ಬಿಬಿಎಂಪಿ ಹಾಗೂ ಅರಣ್ಯ ಇಲಾಖೆ ವಿಫಲವಾಗಿವೆ ಎಂದು ಕೆರೆ ಹೋರಾಟಗಾರರು ವಾಗ್ದಾಳಿ ನಡೆಸಿದ್ದಾರೆ.
ಕೆರೆಗಳ ರಕ್ಷಣೆಯಲ್ಲಿ ಅಧಿಕಾರಿಗಳ ನಿರಾಸಕ್ತಿ ಕಂಡು ಕೆರೆ ಹೋರಾಟಗಾರರು ಅಸಮಾಧಾನಗೊಂಡಿದ್ದಾರೆ. ಮಡಿವಾಳ ಕೆರೆಯ ಸುತ್ತಮುತ್ತಲಿನ ನಾಗರಿಕರೆ ಕೆರೆ ರಕ್ಷಣೆಗೆ ಮುಂದಾಗಿದ್ದಾರೆ. ಅವರೆಲ್ಲರೂ, ಮೇ 25 ರಂದು ಹಾನಿಗೊಳಗಾಗಿದ್ದ ಮಳೆನೀರು ಚರಂಡಿಯನ್ನು ಸರಿಪಡಿಸುವ ಕೆಲಸ ಮಾಡಿದ್ದಾರೆ.
ಈ ಬಗ್ಗೆ ಮಾತನಾಡಿದ ‘ಬೆಂಗಳೂರು ಲೇಕ್ಸ್’ ಸಂಘಟನೆಯ ಮಂಜುನಾಥ್, “ಕೆರೆಗಳಲ್ಲಿ ಕೇವಲ ಮೀನು ಮಾತ್ರವಲ್ಲದೆ, ಹಲವಾರು ಜಲಚರಗಳೂ ಸಾಯುತ್ತಿವೆ. ಕೆರೆಗೆ ಸೇರುತ್ತಿರುವ ಕೊಳಚೆ ನೀರು, ಜಲಚರಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತಿವೆ. ಈ ಕೆರೆಗೆ ಕಾಯಕಲ್ಪ ನೀಡಲು ಕನಿಷ್ಠ ಒಂದು ವರ್ಷ ಬೇಕು” ಎಂದು ಹೇಳಿದರು.
“ಇದು ಕೇವಲ ಅರಣ್ಯ ಇಲಾಖೆಯ ಜವಾಬ್ದಾರಿಯಲ್ಲ. ಎಲ್ಲ ಅಧಿಕಾರಿಗಳು ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ಹಾನಿಗೊಳಗಾದ ಚರಂಡಿಗಳ ಗೋಡೆಯನ್ನು ಸರಿಪಡಿಸಲು ಬಿಬಿಎಂಪಿಗೆ ತಿಳಿಸಲಾಗಿದೆ” ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಚಕ್ರಪಾಣಿ ವೈ ಹೇಳಿದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | 41 ಅಂಡರ್ಪಾಸ್ಗಳ ಸ್ಥಿತಿಗತಿ ವರದಿ ಸಿದ್ಧಪಡಿಸಿದ ಬಿಬಿಎಂಪಿ
“ಅರಣ್ಯ ಇಲಾಖೆಯು ಕೆರೆಗಳ ಒಳಹರಿವನ್ನು ನಿರ್ವಹಿಸುವುದಿಲ್ಲ. ಕೆರೆಗಳನ್ನು ನೋಡಿಕೊಳ್ಳುವುದು ಬಿಬಿಎಂಪಿಯ ಜವಾಬ್ದಾರಿಯಾಗಿದೆ” ಎಂದು ಅವರು ಹೇಳಿದ್ದಾರೆ.