- 2020ರಲ್ಲಿ ಸಂಸ್ಥೆಯ ಅಧಿಕಾರ ವಹಿಸಿಕೊಂಡಾಗ ಬಿಡಿಎ ಖಾತೆಯಲ್ಲಿ ₹260 ಕೋಟಿ ಇತ್ತು
- ಪ್ರಾಧಿಕಾರ ಎರಡು ವರ್ಷದಲ್ಲಿ 3,735 ನಿವೇಶನ ಹರಾಜು ಮಾಡಿ ₹3,553 ಕೋಟಿ ಆದಾಯ ಗಳಿಸಿದೆ
ಬೆಂಗಳೂರಿನ ಮೇಡಿ ಅಗ್ರಹಾರ ಗ್ರಾಮದ ಬಳಿ ನಿರ್ಮಾಣವಾಗುತ್ತಿರುವ ಡಾ. ಶಿವರಾಮ ಕಾರಂತ ಬಡಾವಣೆಗಾಗಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ರೈತರ ಭೂಮಿಯನ್ನು ಸ್ವಾಧೀನ ಪಡಿಸಿಕೊಂಡಿದೆ. ಭೂಮಿ ನೀಡಿದ ರೈತರಿಗೆ ಪರಿಹಾರವಾಗಿ ಬಡಾವಣೆಯಲ್ಲಿ ಅಭಿವೃದ್ಧಿಪಡಿಸಿದ ನಿವೇಶನವನ್ನು ಪರಿಹಾರವಾಗಿ ನೀಡುವುದಾಗಿ ಬಿಡಿಎ ತಿಳಿಸಿದೆ.
ಈ ಬಗ್ಗೆ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಬಿಡಿಎ ಅಧ್ಯಕ್ಷ ಎಸ್ ಆರ್ ವಿಶ್ವನಾಥ್, “ಬಡಾವಣೆ ನಿರ್ಮಾಣದಿಂದ ಭೂಮಿ ಕಳೆದುಕೊಳ್ಳುವವರು ಅವರ ಜಮೀನಿನೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿರುತ್ತಾರೆ. ಹೀಗಾಗಿ, ಅವರು ಬಿಟ್ಟುಕೊಟ್ಟ ಭೂಮಿಯಲ್ಲಿಯೇ ಅಭಿವೃದ್ಧಿ ಪಡಿಸಿದ ನಿವೇಶನವನ್ನು ಪರಿಹಾರವಾಗಿ ನೀಡಲು ನಿರ್ಧರಿಸಲಾಗಿದೆ” ಎಂದು ತಿಳಿಸಿದರು.
“2020ರಲ್ಲಿ ನಾನು ಸಂಸ್ಥೆಯ ಅಧಿಕಾರ ವಹಿಸಿಕೊಂಡಾಗ ಬಿಡಿಎ ಖಾತೆಯಲ್ಲಿ ₹260 ಕೋಟಿ ಹಣವಿತ್ತು. ಈಗ ಪ್ರಾಧಿಕಾರದ ಬಳಿ ₹1,012 ಕೋಟಿ ಇದೆ. ನಿವೇಶನಗಳ ಮಾರಾಟ, ಅತಿಕ್ರಮಣ ಆಸ್ತಿಗಳ ವಸೂಲಿ ಮತ್ತಿತರ ಉಪಕ್ರಮಗಳಿಂದ ಆದಾಯ ಹೆಚ್ಚಿದೆ. ಕಳೆದ ಎರಡು ವರ್ಷಗಳಲ್ಲಿ ಬಿಡಿಎ 3,735 ನಿವೇಶನಗಳನ್ನು ಹರಾಜು ಮಾಡಿ ₹3,553 ಕೋಟಿ ಆದಾಯ ಗಳಿಸಿದೆ. ಅತಿಕ್ರಮಣ ತೆರವುಗೊಳಿಸುವ ಮೂಲಕ ಪ್ರಾಧಿಕಾರದ ₹2,000 ಕೋಟಿ ಮೌಲ್ಯದ ಆಸ್ತಿಯನ್ನು ವಶಪಡಿಸಿಕೊಳ್ಳಲಾಗಿದೆ” ಎಂದರು.
“ನಗರದಲ್ಲಿ ನಾನಾ ಬಡಾವಣೆಗಳ ರಚನೆಗಾಗಿ ಬಿಡಿಎ ಸ್ವಾಧೀನಪಡಿಸಿಕೊಂಡಿರುವ 11,000 ಎಕರೆಗೆ ಸಂಬಂಧಿಸಿದ ಪ್ರಕರಣಗಳ ತ್ವರಿತ ವಿಲೇವಾರಿಗಾಗಿ, ಲೋಕ ಅದಾಲತ್ ನಡೆಸಲು ಅನುಕೂಲವಾಗುವಂತೆ ಸಂಸ್ಥೆ ರಾಜ್ಯ ಸರ್ಕಾರವನ್ನು ಸಂಪರ್ಕಿಸಿದೆ. ಹೆಚ್ಚಿನ ಪ್ರಕರಣಗಳು ಮಾಲೀಕರಿಂದ ಹಂಚಿಕೆಯಾದ ಭೂಮಿಗೆ ಹೆಚ್ಚಿನ ಪರಿಹಾರಕ್ಕಾಗಿ ಬೇಡಿಕೆಯಿವೆ. 30 ರಿಂದ 40 ವರ್ಷಗಳವರೆಗೆ ಬಾಕಿ ಉಳಿದಿರುವ ಪ್ರಕರಣಗಳಿವೆ” ಎಂದು ತಿಳಿಸಿದ್ದಾರೆ.