ಕೊಟ್ಟ ಮಾತಿನಂತೆ ಪುಟ್ಟಣ್ಣಯ್ಯನವರ ಮಗನ ಬೆಂಬಲಕ್ಕೆ ನಿಂತ ದರ್ಶನ್
ʼಸರ್ವೋದಯ ಕರ್ನಾಟಕ ಪಕ್ಷʼದಿಂದ ಕಣಕ್ಕಿಳಿದಿರುವ ದರ್ಶನ್ ಪುಟ್ಟಣ್ಣಯ್ಯ
ರೈತ ನಾಯಕ ದಿವಂಗತ ಪುಟ್ಟಣ್ಣಯ್ಯನವರ ಪುತ್ರ ದರ್ಶನ್ ಮೇಲುಕೋಟೆ ಕ್ಷೇತ್ರದಲ್ಲಿ ʼಸರ್ವೋದಯ ಕರ್ನಾಟಕ ಪಕ್ಷʼದ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕಿಳಿದಿದ್ದಾರೆ. ಗುರುವಾರ ಪಾಂಡವಪುರದಲ್ಲಿ ನಾಮಪತ್ರ ಸಲ್ಲಿಸಿರುವ ಅವರಿಗೆ ಸ್ಯಾಂಡಲ್ವುಡ್ನ ಖ್ಯಾತ ನಟ ದರ್ಶನ್ ಜೊತೆಯಾಗಿ ಭರ್ಜರಿ ರೋಡ್ ಶೋ ನಡೆಸಿದ್ದು, ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.
ಈ ಹಿಂದೆ ದರ್ಶನ್ ಪುಟ್ಟಣ್ಣಯ್ಯ ಅವರ ಚುನಾವಣಾ ಪ್ರಚಾರ ಮಾಡುವುದಾಗಿ ನಟ ದರ್ಶನ್ ಘೋಷಿಸಿದ್ದರು. ಈ ಹಿನ್ನೆಲೆ ಗುರುವಾರ ಪಾಂಡವಪುರದಲ್ಲಿ ನಡೆದ ರೋಡ್ ಶೋನಲ್ಲಿ ಭಾಗವಹಿಸಿ, “ದರ್ಶನ್ ಪುಟ್ಟಣ್ಣಯ್ಯ ಯೋಗ್ಯವಂತ, ಆತನ ಗೆಲುವಿಗೆ ಶ್ರಮಿಸುವುದಾಗಿ ಈ ಹಿಂದೆ ಹೇಳಿದ್ದೆ. ಕೊಟ್ಟ ಮಾತಿನಂತೆ ಪ್ರಚಾರಕ್ಕೆ ಬಂದಿದ್ದೇನೆ. ಆತನ ಗೆಲುವು ನಿಮ್ಮಲ್ಲರ ಗೆಲುವಾಗಲಿದೆ” ಎಂದಿದ್ದಾರೆ.
ದರ್ಶನ್, ತಾವು ಕೊಟ್ಟ ಮಾತಿನಂತೆ ರೈತ ನಾಯಕ ಪುಟ್ಟಣ್ಣಯ್ಯನವರ ಮಗನ ಪರ ಚುನಾವಣಾ ಪ್ರಚಾರ ಮಾಡಿದ್ದಕ್ಕೆ ರಾಷ್ಟ್ರ ಪ್ರಶಸ್ತಿ ವಿಜೇತ ಚಿತ್ರ ನಿರ್ದೇಶಕ ಮಂಸೋರೆ ಸೇರಿದಂತೆ ಹಲವು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ದರ್ಶನ್ ಅವರ ಚುನಾವಣಾ ಪ್ರಚಾರದ ವಿಡಿಯೋ ತುಣುಕನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿರುವ ಮಂಸೋರೆ, “ಪ್ರೀತಿಯ ದರ್ಶನ್ ಸರ್, ದರ್ಶನ್ ಪುಟ್ಟಣ್ಣಯ್ಯ ಅವರ ಪರವಾಗಿ ನೀವು ಪ್ರಚಾರ ಮಾಡಿರೋದು ನಿಮ್ಮ ದೊಡ್ಡತನ ತೋರಿಸುತ್ತೆ. ನಿಮ್ಮ ಈ ಸ್ನೇಹ ಹಾಗೂ ರೈತರ ಪರ ಕಾಳಜಿಗೆ ಶರಣು. ದರ್ಶನ್ ಪುಟ್ಟಣ್ಣಯ್ಯ ಅಂತಹ ರೈತ ಪರ ಕಾಳಜಿ ಇರುವ ವ್ಯಕ್ತಿಗಳು ವಿಧಾನಸಭೆ ಪ್ರವೇಶಿಸಬೇಕು” ಎಂದಿದ್ದಾರೆ.
ರೈತ ನಾಯಕ ಪುಟ್ಟಣ್ಣಯ್ಯನವರ ಮಗನ ಪರ ದರ್ಶನ್ ಪ್ರಚಾರಕ್ಕೆ ನಿಂತಿರುವುದನ್ನು ಕಂಡು ಅಭಿಮಾನಿಗಳು ಕೂಡ ಸಂತಸ ವ್ಯಕ್ತ ಪಡಿಸಿದ್ದು, “ದರ್ಶನ್ ರೈತರ ರಾಯಭಾರಿ, ಸಮರ್ಥ ಅಭ್ಯರ್ಥಿಯ ಪರ ಮತ ಯಾಚನೆ ಮಾಡುತ್ತಿದ್ದಾರೆ” ಎಂದಿದ್ದಾರೆ. ಇನ್ನು ಕೆಲವರು ನಟ ಸುದೀಪ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಬಿಜೆಪಿ ಪರ ಪ್ರಚಾರ ಮಾಡುತ್ತಿರುವುದನ್ನು ಹೋಲಿಕೆ ಮಾಡಿ ಸುದೀಪ್ ನಡೆಗೆ ವ್ಯಂಗ್ಯವಾಡಿದ್ದಾರೆ.
ಪ್ರಚಾರದ ವೇಳೆ ಕಾಟೇರ ಚಿತ್ರದ ಬಗ್ಗೆ ದರ್ಶನ್ ಮಾತು
ಇನ್ನು ಪ್ರಚಾರದ ನಡುವೆ ತಾವು ನಟಿಸುತ್ತಿರುವ ʼಕಾಟೇರʼ ಚಿತ್ರದ ಬಗ್ಗೆ ಮಾತನಾಡಿರುವ ದರ್ಶನ್, “ಕಾಟೇರಾ ಚಿತ್ರದ ಟೀಸರ್ ಅನ್ನು ಕಳೆದ ಫೆಬ್ರವರಿಯಲ್ಲಿ ದರ್ಶನ್ ಪುಟ್ಟಣ್ಣಯ್ಯ ಅವರೇ ಬಿಡುಗಡೆ ಮಾಡಿದ್ದರು. 70ರ ದಶಕದಲ್ಲಿ ಜಾರಿಯಾದ ಉಳುವವನೇ ಭೂಮಿಯ ಒಡೆಯ ಎಂಬ ಕಾಯ್ದೆ, ಆ ಕ್ಷಣದಿಂದ ಚುರುಕುಗೊಂಡ ರೈತ ಹೋರಾಟದ ಸುತ್ತ ನಾವು ಸಿನಿಮಾ ಮಾಡುತ್ತಿದ್ದೇವೆ” ಎಂದಿದ್ದಾರೆ.