ಗ್ರೌಂಡ್ ರಿಪೋರ್ಟ್: ರಾಗಿಗುಡ್ಡದಲ್ಲಿ ಸೌಹಾರ್ದತೆ ಇದ್ದರೂ ಜನ ಮಾತಾಡಲು ಹೆದರುವುದೇಕೆ?

Date:

ಶಿವಮೊಗ್ಗದ ಶಾಂತಿನಗರ (ರಾಗಿಗುಡ್ಡ) ನಿಜಕ್ಕೂ ವಿಶಿಷ್ಟ ಪ್ರದೇಶ. ಇಲ್ಲಿ ಹಿಂದೂ ಮುಸ್ಲಿಂ ಸಮುದಾಯಗಳೆರಡೂ ವರ್ಷಪೂರ್ತಿ ಪ್ರೀತಿ, ಬಾಂಧವ್ಯದಿಂದ ಇದ್ದರೂ ಹಬ್ಬಹರಿದಿನಗಳ ಸಂದರ್ಭದಲ್ಲಿ ಕೆಲವು ಅಹಿತಕರ ಘಟನೆಗಳು ವರದಿಯಾಗುತ್ತಿವೆ. ರಾಜಕೀಯ ಪ್ರೇರಿತ ಶಕ್ತಿಗಳು ಎರಡು ಸಮುದಾಯಗಳ ನಡುವಿನ ನೆಮ್ಮದಿಯನ್ನು ಹಾಳು ಮಾಡುವ ಬೆಳವಣಿಗೆಗಳು ಆಗುತ್ತಿರುವುದಕ್ಕೆ ಇಲ್ಲಿನ ಜನಸಾಮಾನ್ಯರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಹಿಂದೂಗಳಲ್ಲಿನ ಎಸ್‌ಸಿ, ಎಸ್‌ಟಿ, ಒಬಿಸಿ ಸಮುದಾಯಗಳು ಮತ್ತು ಬಡ ಮುಸ್ಲಿಮರು, ಕ್ರಿಶ್ಚಿಯನ್ನರು ರಾಗಿಗುಡ್ಡದಲ್ಲಿ ಪ್ರೀತಿ, ಸೌಹಾರ್ದತೆಯಿಂದ ಮೊದಲಿನಿಂದಲೂ ನೆಲೆಸಿದ್ದಾರೆ. ಅಕ್ಕಪಕ್ಕದಲ್ಲಿಯೇ ಹಿಂದೂ- ಮುಸ್ಲಿಂ ಸಮುದಾಯಗಳ ಮನೆಗಳಿದ್ದು ಅನೋನ್ಯವಾಗಿ ಬಾಳುತ್ತಿದ್ದಾರೆ. ವ್ಯಾಪಾರ ವಹಿವಾಟುಗಳಿಗೆ ಒಬ್ಬರಿಗೊಬ್ಬರು ಅವಲಂಬಿಸಿದ್ದಾರೆ.

ಈದ್ ಮಿಲಾದ್ ಹಬ್ಬದ ಸಂದರ್ಭದಲ್ಲಿ ಕೆಲವು ಮತೀಯ ಶಕ್ತಿಗಳು ಮುಸ್ಲಿಂ ಸಮುದಾಯವನ್ನು ಪ್ರಚೋದಿಸಿರುವುದು ಬೆಳಕಿಗೆ ಬಂದಿದೆ. ಆ ನಂತರ ಉಭಯ ಸಮುದಾಯಗಳಲ್ಲೂ ಅಪನಂಬಿಕೆ ಬಿತ್ತಲಾಗಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

’ಈದಿನ.ಕಾಂ’ ತಂಡವು ರಾಗಿಗುಡ್ಡದ ಗಲ್ಲಿಗಲ್ಲಿಗೆ ಭೇಟಿ ನೀಡಿ ಅಲ್ಲಿನ ಹಿಂದೂ ಮುಸ್ಲಿಂ ಸಮುದಾಯವನ್ನು ಮಾತನಾಡಿಸಲು ಪ್ರಯತ್ನಿಸಿದೆ. ಎರಡು ಸಮುದಾಯಗಳ ಜನರೂ ಪ್ರತಿಕ್ರಿಯಿಸಿದ್ದು ನಮಗೆ ನೆಮ್ಮದಿ ಬೇಕು, ನಾವು ಮೊದಲಿನಿಂದಲೂ ಅಣ್ಣ ತಮ್ಮಂದಿರಂತೆ ಇದ್ದೇವೆ. ಜನರ ನೆಮ್ಮದಿ ಹಾಳುಮಾಡುವವರಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಲ್ಲಿರುವ ಸೌಹಾರ್ದತೆಯ ಬಗ್ಗೆ ಮಾತನಾಡಲು ಅನೇಕ ಹಿಂದೂಗಳು ಹಿಂದೇಟು ಹಾಕುವುದು ಕಂಡುಬಂದಿತು. ಹೆಸರು ಹೇಳಲಿಚ್ಛಿಸದ ಹಿಂದೂ ಸಮುದಾಯದ ವ್ಯಾಪಾರಿಗಳಿಬ್ಬರು ಮಾತನಾಡಿ, “ನಾವು ಸೌಹಾರ್ದತೆಯಿಂದ ಇದ್ದೇವೆ ಎಂಬುದು ಸತ್ಯ. ಆದರೆ ಇದನ್ನು ಹೇಳಿದರೆ ಕಷ್ಟವಾಗುತ್ತದೆ. ನಾವು ಹಿಂದೂ ಮತ್ತು ಮುಸ್ಲಿಂ ಸಮುದಾಯದ ಇಬ್ಬರನ್ನೂ ಅವಲಂಬಿಸಿ ಅಂಗಡಿಯನ್ನು ನಡೆಸುತ್ತಿದ್ದೇವೆ. ನಮಗೆ ಇಬ್ಬರೂ ಬೇಕು. ನಾವು ಏನೇ ಹೇಳಿದರೂ ಕೆಲವು ಹಿಂದೂ ಸಂಘಟನೆಗಳವರು ಬಂದು ನಮ್ಮನ್ನು ದ್ವೇಷಿಸುವ ಸಾಧ್ಯತೆ ಇದೆ. ಹೀಗಾಗಿ ಏನನ್ನೂ ಹೇಳಿಕೊಳ್ಳಲು ಆಗುತ್ತಿಲ್ಲ” ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ಇದನ್ನೂ ಓದಿರಿ: ’ಈ ದಿನ’ ಎಕ್ಸ್‌ ಕ್ಲೂಸಿವ್‌: ಬಜರಂಗದಳದ ರೋಹನ್ ಕಲ್ಲೆಸೆತವೇ ಶಿವಮೊಗ್ಗ ಗಲಭೆಯ ಆರಂಭ ಬಿಂದುವೇ?

ಇದರ ನಡುವೆ ಅನೇಕರು ’ಈದಿನ.ಕಾಂ’ಗೆ ಪ್ರತಿಕ್ರಿಯಿಸಿದ್ದು ರಾಗಿಗುಡ್ಡದಲ್ಲಿನ ವಸ್ತುಸ್ಥಿತಿಯನ್ನು ಹಂಚಿಕೊಂಡಿದ್ದಾರೆ.

ಸ್ಥಳೀಯ ನಿವಾಸಿ ಶಿವಾಜಿ ಪ್ರತಿಕ್ರಿಯಿಸಿ, “ಕಳೆದ 25 ವರ್ಷಗಳಿಂದ ರಾಗಿಗುಡ್ಡದಲ್ಲೇ ವಾಸವಿದ್ದೇನೆ. ಪಕ್ಕದ ಏರಿಯಾದಲ್ಲಿ ಅಂದು ಕಲ್ಲು ತೂರಾಟವಾಯಿತು. ನಮ್ಮ ಬೀದಿಯಲ್ಲಿ ನಾವೆಲ್ಲ ಚೆನ್ನಾಗಿ ಇದ್ದೇವೆ. ಯಾರೋ ಮಾಡಿದ ತಪ್ಪಿದೆ ಇಲ್ಲಿನ ಜನರಿಗೆಲ್ಲ ತೊಂದರೆಯಾಗುತ್ತಿದೆ. ಕೆಲಸಕ್ಕೆ ಹೋಗಲು ಆಗ್ತಾ ಇಲ್ಲ. ಕಳೆದ ವರ್ಷ ಮೊದಲ ಕ್ರಾಸ್‌ನಲ್ಲಿ ಚಪ್ಪಲಿ ತೂರಾಟ ನಡೆದಿತ್ತು. ಇಲ್ಲಿನ ಹಿರಿಯರು ಸಮಾಧಾನ ಮಾಡಿದ್ದರು. ನಾವು ಅಣ್ಣತಮ್ಮಂದಿರಂತೆ ಇದ್ದೇವೆ. ಯಾರೋ ಹೊರಗಡೆಯವರು ಬಂದು ಮಾಡಿರುವಂತಿದೆ. ನಮಗೂ ತೊಂದರೆಯಾಗಿದೆ, ಅವರಿಗೂ ತೊಂದರೆಯಾಗಿದೆ. ನಮಗೆ ನ್ಯಾಯ ಸಿಗಬೇಕೆಂದು ಕೇಳಿಕೊಳ್ತೀನಿ. ಹೊರಗಡೆಗೆ ಹೋಗಿ ಕೆಲಸ ಮಾಡಲು ಬಿಟ್ಟರೆ ಸಾಕು ಎಂಬಂತಾಗಿದೆ. ಭಾನುವಾರ ನಡೆದ ಘಟನೆಯನ್ನು ಬಿಟ್ಟರೆ ಇನ್ಯಾವುದೇ ಸಮಸ್ಯೆ ಆಗಿಲ್ಲ. ಕೆಲವು ಸುಳ್ಳುಗಳನ್ನು ಹಬ್ಬಿಸುತ್ತಿದ್ದಾರೆ. ಇಲ್ಲಿ ಬೆಂಕಿ ಹೊತ್ತಿಕೊಂಡಿದೆ ಎಂಬ ಸುಳ್ಳು ಸುದ್ದಿ ಹರಡಲಾಗಿತ್ತು. ಫೈರ್‌ ಡಿಪಾರ್ಟ್‌ಮೆಂಟ್‌ ನವರು ಸುಮ್ಮನೆ ಬಂದು ವಾಪಸ್ ಹೋದರು” ಎಂದು ತಿಳಿಸಿದರು.

ರಾಗಿಗುಡ್ಡದ ನಿವಾಸಿ ಶಿವಾಜಿ

ಇಲ್ಲಿನ ನಿವಾಸಿ ನಸೀಮಾ ಕಣ್ಣೀರು ಹಾಕುತ್ತಾ ಮಾತನಾಡಿ, “ಅಂದು ಕಲ್ಲು ತೂರಾಟ ಆದ ಬಳಿಕ ಅನೇಕರನ್ನು ಬಂಧಿಸಲಾಗಿದೆ. ಕಳೆದ ಮೂವತ್ತು ವರ್ಷಗಳಿಂದ ನಾವಿಲ್ಲಿ ಅನ್ಯೋನ್ಯವಾಗಿ ಬದುಕುತ್ತಿದ್ದೇವೆ. ತಪ್ಪು ಮಾಡಿದ್ದು ಯಾರೋ ಆದ್ರು ಅವರನ್ನು ಮಾತ್ರ ಹಿಡಿದುಕೊಂಡು ಉಳಿದರನ್ನು ಬಿಡುಗಡೆ ಮಾಡಬೇಕು. ಹಬ್ಬ ಮಾಡೋದು ಖುಷಿಗಲ್ಲವಾ? ಅದನ್ನು ಬಿಟ್ಟು ಯಾರಾದರೂ ಗಲಾಟೆ ಮಾಡಲು ಹೋಗ್ತಾರಾ? ನಾವು ಒಂದಾಗಿಯೇ ಇದ್ದೇವೆ. ಇಲ್ಲಿ ನೋಡಿ ಅದು ಮುಸ್ಲಿಂ ಮನೆ, ಪಕ್ಕದಲ್ಲಿ ಹಿಂದೂ ಮನೆ ಇದೆ. ಇಡೀ ರಾಗಿಗುಡ್ಡವೇ ಇರುವುದು ಹೀಗೆ. ನಾವೆಲ್ಲ ಒಟ್ಟಾಗಿಯೇ ಇದ್ದೇವೆ. ನಮಗೆ ಏನಾದರೂ ಬೇಕಾದರೆ ಅವರ ಮನೆಗೆ ಹೋಗಿ ಈಸ್ಕೊಳ್ಳುತ್ತೇವೆ, ಅವರಿಗೆ ಏನಾದರೂ ಬೇಕಾದರೆ ನಮ್ಮ ಮನೆಯಲ್ಲಿ ಈಸ್ಕೊಳ್ಳುತ್ತಾರೆ. ಆ ರೀತಿ ಇದ್ದೋರು ಅಕ್ಕಪಕ್ಕದವರನ್ನೆಲ್ಲ ನಿಷ್ಠುರ ಮಾಡಿಕೊಂಡು ಇರಲು ಸಾಧ್ಯವೇ?” ಎಂದು ಪ್ರಶ್ನಿಸಿದರು.

ರಾಗಿಗುಡ್ಡದ ನಿವಾಸಿ ನಸೀಮಾ

ಕಲ್ಲು ತೂರಾಟದಲ್ಲಿ ಇಬ್ಬರು ಮೊಮ್ಮಕ್ಕಳು ಗಾಯಗೊಂಡಿದ್ದಾರೆಂದು ಅಳಲು ತೋಡಿಕೊಂಡಿರುವ ಮುದುಕಿ ಚಿಕ್ಕಮ್ಮ ,”ನಾವು ಇದೇ ಮೊದಲು ಇಂತಹ ಗಲಾಟೆ ನೋಡಿದ್ದು. ಹಿಂದೂ ಮುಸ್ಲಿಂ ಎಲ್ಲಾ ಇಲ್ಲಿ ಚೆನ್ನಾಗಿದ್ದೆವು. ಘಟನೆಯಾದ ಬಳಿಕ ಭಯ ಶುರುವಾಗಿದೆ. ಊಟ ಸೇರಲ್ಲ, ನಿದ್ದೆ ಬರ್ತಾ ಇಲ್ಲ” ಎಂದು ಆತಂಕ ತೋಡಿಕೊಂಡರು.

ರಾಗಿಗುಡ್ಡದ ನಿವಾಸಿ ಚಿಕ್ಕಮ್ಮ

ಪುಷ್ಪಮ್ಮ ಎಂಬವರು ಪ್ರತಿಕ್ರಿಯಿಸಿ, “ನಮಗೆ ಇಲ್ಲಿರುವವರು ಯಾರೂ ತೊಂದರೆ ಕೊಟ್ಟಿಲ್ಲ. ನಾವು ಗಣಪತಿ ಹಬ್ಬ ಮಾಡಿದಾಗ ಅವರು ಆರಾಮವಾಗಿ ನಿಂತುಕೊಂಡು ನೋಡಿದರು. ಅವರು ಮೆರವಣಿಗೆ ಮಾಡಿದಾಗ ನಾವು ನಿಂತುಕೊಂಡು ನೋಡಿದೆವು. ಈ ಬೀದಿಯಲ್ಲಿ ಅಂಥದ್ದೇನೂ ಆಗಿಲ್ಲ. ಹೊರಗಡೆಯಿಂದ ಬಂದವರೋ ಪಕ್ಕದ ಬೀದಿಯವರೋ ಈ ಬೀದಿಯ ಒಬ್ಬ ಹುಡುಗನಿಗೆ ಹೊಡೆದಿದ್ದಾರೆ. ನಮ್ಮ ಮನೆ ಸುತ್ತ ಮುಸ್ಲಿಮ್ ಮನೆಗಳಿವೆ. ಅವರೊಂದಿಗೆ ಚೆನ್ನಾಗಿ ಮಾತಕತೆ ಇದೆ” ಎಂದು ತಿಳಿಸಿದರು.

ರಾಗಿಗುಡ್ಡದ ನಿವಾಸಿ ಪುಷ್ಪಮ್ಮ

ಇದು ರಾಗಿಗುಡ್ಡದ ನಿಜಸ್ಥಿತಿ. ಜನರು ಪ್ರೀತಿ, ವಿಶ್ವಾಸದಿಂದ ಬದುಕುವಾಗ ಕೆಲವು ಕಿಡಿಗೇಡಿಗಳು ಮಾಡಿರುವ ಕೃತ್ಯಕ್ಕೆ ಎರಡೂ ಸಮುದಾಯಗಳೂ ಪರಿತಪಿಸುವಂತಾಗಿದೆ. ಪೊಲೀಸರು ಕಟ್ಟುನಿಟ್ಟಿನ ಕ್ರಮ ಜರುಗಿಸಿರುವುದು ಶಾಂತಿನೆಲೆಸಲು ಒಂದೆಡೆ ಕಾರಣವಾಗಿದ್ದರೂ ಮತ್ತೊಂದೆಡೆ ನಿತ್ಯದ ಬದುಕಿಗೆ ತೊಡಕಾಗಿರುವುದು ಸತ್ಯ.

ಯತಿರಾಜ್‌ ಬ್ಯಾಲಹಳ್ಳಿ
+ posts

ಪತ್ರಕರ್ತ, ಲೇಖಕ

Sanket
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿತ್ರದುರ್ಗ | ನೀತಿ ಸಂಹಿತೆ ನೆಪದಲ್ಲಿ ನೀಲಿ ಬಾವುಟ ತೆರವು; ಕೇಸರಿ ಬಿಟ್ಟಿದ್ದೇಕೆ ಎಂದಾಗ ರಾತ್ರೋರಾತ್ರಿ ಮರುಸ್ಥಾಪನೆ

ಆರಂಭದಲ್ಲಿ ನೆಪ ಹೇಳುತ್ತಿದ್ದ ಪಿಡಿಓಗೆ, ಜನರ ಜೈಭೀಮ್ ಘೋಷಣೆಗಳು ಅಪ್ಪಳಿಸಿದವು... ಡಾ.ಬಿ.ಆರ್‌.ಅಂಬೇಡ್ಕರ್ ಜಯಂತಿಯಂದು...

ಅಂಬೇಡ್ಕರರ ಪ್ರಬುದ್ಧ ಭಾರತ ಮತ್ತು ಮೋದಿಯವರ ವಿಕಸಿತ ಭಾರತ

ರಾಜಕೀಯ ಸ್ವಾತಂತ್ರ್ಯಕ್ಕಿಂತ ಸ್ವತಂತ್ರ ಭಾರತದಲ್ಲಿ ಸಾಮಾಜಿಕ ಪ್ರಜಾಸತ್ತೆ ಮತ್ತು ಆರ್ಥಿಕ ಪ್ರಜಾಸತ್ತೆಗಳನ್ನು...

ಹಿಂದುತ್ವಕ್ಕೆ ಬಲಿಯಾದ ಕುಲಾಲ ಮತ್ತು ಸಣ್ಣ ಸಮುದಾಯಗಳ ಪ್ರಾತಿನಿಧ್ಯ!

ಬಿಜೆಪಿ ಮತ್ತು ಸಂಘಪರಿವಾರದಲ್ಲಿ ಕುಂಬಾರ/ಕುಲಾಲ್/ಮೂಲ್ಯ ಸಮುದಾಯಗಳ ಯುವಕರು ಇದ್ದರೂ ಅವರಿಗೆ ರಾಜಕೀಯ...

ಅಂಬೇಡ್ಕರ್ ವಿಶೇಷ | ಭಾರತೀಯರೆಲ್ಲರೂ ಗೌರವಿಸಲೇಬೇಕಾದ ಮೇರುವ್ಯಕ್ತಿತ್ವ- ಬಾಬಾ ಸಾಹೇಬ್ ಅಂಬೇಡ್ಕರ್

ಬಾಬಾ ಸಾಹೇಬ್ ಅವರಲ್ಲದೆ ಬೇರೆಯವರು ನಮ್ಮ ಸಂವಿಧಾನ ರಚಿಸಿದ್ದರೆ ಭಾರತ ಹೇಗಿರುತ್ತಿತ್ತು...