- ಚುನಾವಣಾ ಪ್ರಚಾರ ಕಣದೊಳಗೆ ಸಕ್ರಿಯರಾದ ಸ್ಟಾರ್ ನಟ ದರ್ಶನ್
- ಬಿಜೆಪಿ ಅಭ್ಯರ್ಥಿ ನಾಮಪತ್ರ ಸಲ್ಲಿಕೆಗೆ ಜೊತೆಯಾಗಲಿರುವ ನಟ
ರಂಗೇರಿರುವ ರಾಜ್ಯ ವಿಧಾನಸಭಾ ಚುನಾವಣಾ ಕಣದೊಳಗೆ ಈಗ ಸ್ಯಾಂಡಲ್ವುಡ್ ಸ್ಟಾರ್ಗಳ ಕಲರವ ಆರಂಭವಾಗಿದೆ. ಸಿಎಂ ಬಸವರಾಜ ಬೊಮ್ಮಾಯಿ ಪರ ಪ್ರಚಾರ ನಡೆಸುವುದಾಗಿ ಸ್ಟಾರ್ ನಟ ಸುದೀಪ್ ಘೋಷಿಸಿದ್ದಾರೆ. ಈ ಬೆನ್ನಲ್ಲೇ, ಚಂದನವನದ ಮತ್ತೋರ್ವ ಸ್ಟಾರ್ ನಟ ದರ್ಶನ್ ಕೂಡ ರಾಜಕೀಯ ಅಖಾಡದಲ್ಲಿ ತಮ್ಮನ್ನೂ ತೊಡಗಿಸಿಕೊಳ್ಳಲಿದ್ದಾರೆ.
ಕಳೆದ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಪರವಾಗಿ ಪ್ರಚಾರ ನಡೆಸಿದ್ದ ದರ್ಶನ್, ಈ ಬಾರಿ ಸುಮಲತಾ ಅವರ ಆಪ್ತನ ಜೊತೆ ಚುನಾವಣಾ ಕಣದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಶ್ರೀರಂಗಪಟ್ಟಣದ ಬಿಜೆಪಿ ಅಭ್ಯರ್ಥಿ ಸಚ್ಚಿದಾನಂದ ಪರವಾಗಿ ದರ್ಶನ್ ಎಲೆಕ್ಷನ್ ಅಖಾಡದಲ್ಲಿ ಗುರುತಿಸಿಕೊಳ್ಳಲಿದ್ದಾರೆ. “ತಮ್ಮ ಜೊತೆ ನಾಮಪತ್ರ ಸಲ್ಲಿಕೆಗೆ ದರ್ಶನ್ ಜೊತೆಯಾಗಲಿದ್ದಾರೆ” ಎಂದು ಖುದ್ದು ಬಿಜೆಪಿ ಅಭ್ಯರ್ಥಿ ಸಚ್ಚಿದಾನಂದ ಟ್ವೀಟ್ ಮೂಲಕ ಹೇಳಿಕೊಂಡಿದ್ದಾರೆ.
ಈ ಸುದ್ದಿ ಓದಿದ್ದೀರಾ? :ಈ ದಿನ ಸಂಪಾದಕೀಯ | ಸೋಲಿನ ಭಯದಿಂದ ಸಿನಿಮಾ ತಾರೆಯರ ಹಿಂದೆ ಬಿದ್ದಿದೆಯೇ ಬಿಜೆಪಿ?
“ಇಂದು (ಏಪ್ರಿಲ್ 17)ರಂದು ನಾನು ನಾಮಪತ್ರ ಸಲ್ಲಿಸುತ್ತಿದ್ದೇನೆ ಈ ವೇಳೆ ಛಾಲೆಂಜಿಂಗ್ ಸ್ಟಾರ್ ದರ್ಶನ್ ನನ್ನೊಂದಿಗಿರಲಿದ್ದಾರೆ” ಎಂದು ತಿಳಿಸಿದ್ದಾರೆ.
ಹೀಗೆ ಸುದೀಪ್ ಬಳಿಕ ದರ್ಶನ್ ಎಲೆಕ್ಷನ್ ಅಖಾಡದಲ್ಲಿ ಕಾಣಿಸಿಕೊಳ್ಳುತ್ತಿರುವುದಕ್ಕೆ ಅಭಿಮಾನಿಗಳು ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಕಾದು ನೋಡಬೇಕು.