ಬಿಜೆಪಿ ವಿರುದ್ಧ ಬಂಡಾಯವೆದ್ದ ಮಾಜಿ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳನ್ನು ಕರೆತಂದಿರುವ ಕಾಂಗ್ರೆಸ್ಗೂ ಬಂಡಾಯ ಬಿಸಿ ತಟ್ಟುತ್ತಿದೆ. ಇದೂವರೆಗೂ, ಸುಮಾರು ಎಂಟು ಮಂದಿ ಮುಖಂಡರು ಕಾಂಗ್ರೆಸ್ ತೊರೆದಿದ್ದಾರೆ. ಇದೀಗ, ಮಂಡ್ಯ ಜಿಲ್ಲೆಯ ಮದ್ದೂರಿನ ಗುರುಚರಣ್ ಕೂಡ ಕಾಂಗ್ರೆಸ್ ತೊರೆದಿದ್ದಾರೆ. ಜೊತೆಗೆ, ಡಿಕೆ ಸಹೋದರರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸಂಸದ ಡಿಕೆ ಸುರೇಶ್ ಕಾಂಗ್ರೆಸ್ಅನ್ನು ಹಾಳು ಮಾಡುತ್ತಿದ್ದಾರೆಂದು ಆರೋಪಿಸಿದ್ದಾರೆ.
ಮದ್ದೂರಿನಲ್ಲಿ ಗುರುಚರಣ್ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ, ಅವರಿಗೆ ಕಾಂಗ್ರೆಸ್ ಟಿಕೆಟ್ ನಿರಾಕರಿಸಿದೆ. ಹೀಗಾಗಿ, ಅವರು ಬಂಡಾಯವೆದ್ದು ಪಕ್ಷತೊರೆದು ಜೆಡಿಎಸ್ ಸೇರಿದ್ದು, ಆ ಪಕ್ಷದಿಂದ ಕಣಕ್ಕಿಳಿದಿದ್ದಾರೆ.
ಈ ನಡುವೆ, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿರುವ ಗುರುಚರಣ್, “ಭಯೋತ್ಪಾದಕರು ಹಣ ತಂದರೆ, ಅವರಿಗೂ ಕಾಂಗ್ರೆಸ್ ಟಿಕೆಟ್ ಸಿಗುತ್ತದೆ” ಎಂದಿದ್ದಾರೆ.
“ಕಾಂಗ್ರೆಸ್ಅನ್ನು ಸಂಸದ ಡಿ.ಕೆ ಸುರೇಶ್ ಹಾಳು ಮಾಡುತ್ತಿದ್ದಾರೆ. ಸುರೇಶ್ ಎದುರು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅಸಹಾಯಕಾರಾಗಿದ್ದಾರೆ. ಸರೇಶ್ ಮುಂದೆ ಶಿವಕುಮಾರ್ ಮಾತು ನಡೆಯುವುದಿಲ್ಲ. ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ಅವರ ಮಾತಿಗೂ ಡಿ.ಕೆ ಶಿವಕುಮಾರ್ ಕಿವಿಗೊಡಲಿಲ್ಲ” ಎಂದಿದ್ದಾರೆ.
ಈ ಸುದ್ದಿ ಓದಿದ್ದೀರಾ?: ಸಿದ್ದರಾಮಯ್ಯ ರುಂಡ ಚೆಂಡಾಡುತ್ತೇನೆ ಎಂದಿದ್ದ ಚನ್ನಬಸಪ್ಪಗೆ ಬಿಜೆಪಿ ಟಿಕೆಟ್
“ಎಸ್.ಎಂ ಕೃಷ್ಣ ಅವರನ್ನು ಸಂಪರ್ಕಿಸಿದ್ಧೇನೆ. ಅವರು ನನಗೆ ಬೆಂಬಲ ನೀಡುತ್ತೇನೆಂದು ಹೇಳಿದ್ದಾರೆ” ಎಂದು ಗುರುಚರಣ್ ಹೇಳಿದ್ದಾರೆ.