ಮಾಜಿ ಮುಖ್ಯಮಂತ್ರಿ ಎಸ್ ಬಂಗಾರಪ್ಪ ಅವರ ಪುತ್ರಿ ಮತ್ತು ನಟ ಶಿವರಾಜಕುಮಾರ್ ಅವರ ಪತ್ನಿ ಗೀತಾ ಶಿವರಾಜಕುಮಾರ್ ಅವರು ಶುಕ್ರವಾರ ಕಾಂಗ್ರೆಸ್ ಸೇರಿದರು.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಕೆಪಿಸಿಸಿ ಡಿ ಕೆ ಶಿವಕುಮಾರ್ ಅವರು ಡಾ. ರಾಜಕುಮಾರ್ ಅವರ ಸೊಸೆಯನ್ನು ಪಕ್ಷದ ಬಾವುಟ ನೀಡಿ ಬರ ಮಾಡಿಕೊಂಡರು.
ಬಳಿಕ ಮಾತನಾಡಿದ ಡಿ ಕೆ ಶಿವಕುಮಾರ್, “ಎಸ್ ಬಂಗಾರಪ್ಪ ಕುಟುಂಬಕ್ಕೆ ಬಹಳ ಗಾಳ ಹಾಕಿ ಹಾಕಿ ಸುಸ್ತಾಗಿದ್ದೆ. ಮಧು ಬಂಗಾರಪ್ಪ ಬಂದರು. ಈಗ ನನ್ನ ಸಹೋದರಿ ಗೀತಾ ಶಿವರಾಜಕುಮಾರ್ ಅವರು ಬಲೆಗೆ ಬಿದ್ದಿದ್ದಾರೆ” ಎಂದು ತಮಾಷೆ ಮಾಡಿದರು.
ರಾಹುಲ್ ಗಾಂಧಿ ಅವರು ರಾಜ್ಯದ ಎಲ್ಲ ಮಹಿಳೆಯರಿಗೂ ಉಚಿತ ಪ್ರಯಾಣ ಯೋಜನೆ ಘೋಷಿಸಿದ್ದಾರೆ. ರಾಹುಲ್ ಗಾಂಧಿ ಅವರ ಬಲೆಗೆ ಗೀತಾ ಶಿವರಾಜಕುಮಾರ್ ಬಿದ್ದಿದ್ದಾರೆ. ನನ್ನ ನಾಯಕ ಬಂಗಾರಪ್ಪ ಪುತ್ರಿ ಕಾಂಗ್ರೆಸ್ ಸೇರಿರುವುದರಿಂದ ಪಕ್ಷಕ್ಕೆ ಮತ್ತಷ್ಟು ಬಲ ಬಂದಿದೆ. ಖುದ್ದು ರಾಹುಲ್ ಗಾಂಧಿ ಅವರೇ ನನ್ನನ್ನು ಇಲ್ಲಿಗೆ ಕಳುಹಿಸಿ ಗೀತಾ ಶಿವರಾಜಕುಮಾರ್ ಅವರನ್ನು ಬರಮಾಡಿಕೊಳ್ಳಲು ಸೂಚಿಸಿದ್ದಾರೆ” ಎಂದು ಹೇಳಿದರು.
ಹಾಗೆಯೇ ಮೂಡಿಗೆರೆ ಕ್ಷೇತ್ರದಲ್ಲಿ ವಿಚಲಿತ ರಾಜಕಾರಣ ನಡೆಯುತ್ತಿದೆ. ಬಿಜೆಪಿ ಬಿಟ್ಟು ಜೆಡಿಎಸ್ ಸೇರಿದ್ದ ಸಜ್ಜನ ರಾಜಕಾರಣಿ ಮಾಜಿ ಸಚಿವ ಬಿಬಿ ನಿಂಗಯ್ಯ ಅವರು ಟಿಕೆಟ್ ವಂಚಿತರಾಗಿದ್ದು, ಜೆಡಿಎಸ್ ಪಕ್ಷದ ನಡೆಗೆ ಬೇಸತ್ತು ಕಾಂಗ್ರೆಸ್ ಸೇರಿದ್ದಾರೆ. ಇನ್ನು ಶಾಂತಿನಗರ ಮಾಜಿ ಕಾರ್ಪೋರೇಟರ್ ತುಳಸಿರಾಮ್ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದಾರೆ. ಅಲ್ಲದೇ ದೊಮ್ಮಲೂರು ಕಾರ್ಪೋರೇಟರ್ ಗೀತಾ ಶ್ರೀನಿವಾಸ ಬಿಜೆಪಿ ಬಿಟ್ಟು ಕಾಂಗ್ರೆಸ್ಗೆ ಬಂದಿದ್ದಾರೆ ಎಂದರು.