ಹಾಸನ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಟಿಕೆಟ್ಗೆ ಸಂಬಂಧಿಸಿದಂತೆ ಕಳೆದ ಕೆಲವು ತಿಂಗಳುಗಳಿಂದ ಮಡುಗಟ್ಟಿದ್ದ ಆಕ್ರೋಶ, ದ್ವೇಷಗಳಿಗೆ ಫುಲ್ಸ್ಟಾಪ್ ಬಿದ್ದಿದೆ. ಭವಾನಿ ರೇವಣ್ಣ ಮುನಿಸು ಮರೆತು ಸ್ವರೂಪ್ ಪರ ಪ್ರಚಾರಕ್ಕಿಳಿದಿದ್ದಾರೆ.
ಹಾಸನದ ಟಿಕೆಟ್ ತನಗೇ ಬೇಕೆಂದು ಭವಾನಿ ರೇವಣ್ಣ ಅವರು ಹಠ ಹಿಡಿದಿದ್ದರು. ಎಚ್.ಡಿ ಕುಮಾರಸ್ವಾಮಿ ಅವರು ಮಾತ್ರ ಎಚ್.ಪಿ ಸ್ವರೂಪ್ ಅವರಿಗೇ ಟಿಕೆಟ್ ಎಂದು ಸ್ಪಷ್ಟಪಡಿಸಿದ್ದರು. ಈ ವಿವಾದದಲ್ಲಿ ದೇವೇಗೌಡರ ಕುಟುಂಬವೇ ಒಡೆದು ಹೋಗಬಹುದು ಎನ್ನುವಷ್ಟರ ಮಟ್ಟಿಗೆ ಚರ್ಚೆಗಳು ನಡೆದಿದ್ದವು. ಅಂತಿಮವಾಗಿ ಎಚ್.ಪಿ ಸ್ವರೂಪ್ ಅವರಿಗೆ ಟಿಕೆಟ್ ನೀಡಲಾಗಿತ್ತು. ಎಚ್.ಡಿ ರೇವಣ್ಣ ಅವರು ಸ್ವಲ್ಪ ಬೇಸರದಿಂದಲೇ ಈ ನಿರ್ಧಾರವನ್ನು ಒಪ್ಪಿಕೊಂಡಿದ್ದರು. ಇದೀಗ, ಭವಾನಿ ರೇವಣ್ಣ ಹಠ ಬಿಟ್ಟು ಸ್ವರೂಪ್ ಪರ ಪ್ರಚಾರಕ್ಕಿಳಿದಿದ್ದಾರೆ.
ಹಾಸನದಲ್ಲಿ ಬುಧವಾರ ನಡೆದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಸ್ವರೂಪ್ ಮತ್ತು ರೇವಣ್ಣ ಅವರ ಕುಟುಂಬಿಕರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಎಚ್ ಡಿ ರೇವಣ್ಣ ದಂಪತಿ ವೇದಿಕೆಗೆ ಬರುತ್ತಿದ್ದಂತೆ ಸ್ವರೂಪ್ ಅವರು ಇಬ್ಬರ ಕಾಲಿಗೆ ಬಿದ್ದು ಆಶೀರ್ವಾದ ಪಡೆದಿದ್ದಾರೆ. ದಂಪತಿಯೂ ಕೂಡ ಯಾವುದೇ ಹಮ್ಮು ಬಿಮ್ಮು ತೋರದೆ ಆಶೀರ್ವಾದ ಮಾಡಿದ್ದಾರೆ. ಅಲ್ಲದೆ, ಸ್ವರೂಪ್ ತಮ್ಮ ಮಗನಿದ್ದಂತೆ ಎಂದು ಭವಾನಿ ರೇವಣ್ಣ ಹೇಳಿದ್ದಾರೆ.
ರೇವಣ್ಣ ಕುಟುಂಬ ಮನವೊಲಿಸುವಲ್ಲಿ ಸ್ವರೂಪ್ ಯಶಸ್ವಿ
ಕಾರ್ಯಕ್ರಮಕ್ಕೆ ಮುನ್ನ ಸ್ವರೂಪ್ ಅವರು ಎಚ್.ಡಿ ರೇವಣ್ಣ ಅವರ ಕುಟುಂಬದ ಜತೆ ಮಾತುಕತೆ ನಡೆಸಿದ್ದರು. ಯಾವ ಬೇಸರವನ್ನೂ ಇಟ್ಟುಕೊಳ್ಳದೆ ಕಾರ್ಯಕ್ರಮಕ್ಕೆ ಬರುವಂತೆ ಮನವಿ ಮಾಡಿದ್ದರು. ʼನಾನು ಯಾವ ತಪ್ಪನ್ನೂ ಮಾಡಿಲ್ಲ. ನಿಮ್ಮ ವಿಚಾರದಲ್ಲಿ ಒಂದು ತಪ್ಪು ಮಾತನಾಡಿಲ್ಲ. ನಿಮ್ಮ ಬಗ್ಗೆ ತುಂಬಾ ಗೌರವವಿದೆʼ ಎಂದು ಸ್ಪಷ್ಟಪಡಿಸಿದ್ದರು.
ಹಾಸನದ ಜೆಡಿಎಸ್ ಟಿಕೆಟ್ ವಿಚಾರದಲ್ಲಿ ಸ್ವರೂಪ್ ಅವರ ನಡೆ ನುಡಿಗಳು ಕೂಡಾ ಅದೇ ರೀತಿಯಲ್ಲಿದ್ದವು. ಎಷ್ಟೇ ಕೆದಕಿದರೂ ರೇವಣ್ಣ ಕುಟುಂಬದ ವಿರುದ್ಧ ಒಂದೇ ಒಂದು ಮಾತು ಆಡಿರಲಿಲ್ಲ. ಯಾರಿಗೆ ಟಿಕೆಟ್ ಕೊಟ್ಟರೂ ನಾನು ಬೆಂಬಲಿಸುತ್ತೇನೆ ಎಂದಷ್ಟೇ ಹೇಳುತ್ತಿದ್ದರು. ಇದೆಲ್ಲವನ್ನು ರೇವಣ್ಣ ಕುಟುಂಬ ಗಮನಿಸಿದ್ದು, ʼಟಿಕೆಟ್ ಕೊಟ್ಟಾದ ಮೇಲೆ ದ್ವೇಷ ಸಾಧಿಸುವುದು ಒಳ್ಳೆಯದಲ್ಲʼ ಎಂಬ ನಿಲುವು ಮತ್ತು ಸ್ವರೂಪ್ ಅವರ ನಡೆಗಳಿಗೆ ಮಣಿದ ಭವಾನಿ ಮತ್ತು ರೇವಣ್ಣ ಅವರು ಕಾರ್ಯಕ್ರಮಕ್ಕೆ ಬರಲು ಒಪ್ಪಿಕೊಂಡಿದ್ದರು ಎನ್ನಲಾಗಿದೆ.
ಈ ಸುದ್ದಿ ಓದಿದ್ದೀರಾ? ಇದು ನನ್ನ ಕೊನೆಯ ಚುನಾವಣೆ ಎನ್ನುವ ಮೂಲಕ ಉತ್ತರಾಧಿಕಾರಿ ಘೋಷಿಸಿದ ಸಿದ್ದರಾಮಯ್ಯ
ಜೆಡಿಎಸ್ನ ಇಂದಿನ ಸಭೆ ಹೆಚ್.ಡಿ ರೇವಣ್ಣ ಅವರ ಅಧ್ಯಕ್ಷತೆಯಲ್ಲಿ ನಡೆದಿದೆ. ಸಭೆಯಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಸೇರಿದಂತೆ ಹಲವು ಮುಖಂಡರು ಇದ್ದರು.
ಗುರುವಾರ ಜೆಡಿಎಸ್ ರ್ಯಾಲಿ
ಸ್ವರೂಪ್ ಅವರು ಗುರುವಾರ ಹಾಸನದಲ್ಲಿ ಬೃಹತ್ ರ್ಯಾಲಿ ನಡೆಸಿ ನಾಮಪತ್ರ ಸಲ್ಲಿಸುವ ಕಾರ್ಯಕ್ರಮ ಇಟ್ಟುಕೊಂಡಿದ್ದಾರೆ. ರ್ಯಾಲಿಯಲ್ಲಿ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ, ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ, ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ ಭಾಗಿಯಾಗುವ ಸಾಧ್ಯತೆಯಿರುವುದಾಗಿ ತಿಳಿದುಬಂದಿದೆ.