ರಮೇಶ್ ಜಾರಕಿಹೊಳಿಯ ಅಟ್ಟಹಾಸಕ್ಕೆ, ಒಳರಾಜಕೀಯಕ್ಕೆ ಬೇಸತ್ತಿರುವ ಲಿಂಗಾಯತ ನಾಯಕರು ಪಕ್ಷಭೇದ ಮರೆತು ಒಂದಾದಂತೆ ಕಾಣುತ್ತಿದೆ. ರಾಜಕೀಯವಾಗಿ ಕಟ್ಟಿಹಾಕಲು ಒಳಗೊಳಗೇ ಷಡ್ಯಂತ್ರ ರೂಪಿಸಿರುವುದು ಸ್ಪಷ್ಟವಾಗಿದೆ.
ಬೆಳಗಾವಿಯಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ರಮೇಶ್ ಜಾರಕಿಹೊಳಿ ನಡುವಿನ ರಾಜಕೀಯ ಸಮರ ಈಗ ನಿರ್ಣಾಯಕ ಹಂತ ತಲುಪಿದಂತೆ ಕಾಣುತ್ತಿದೆ.
ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರ ಉರುಳಲು ಕಾರಣವಾದ, ಆಪರೇಷನ್ ಕಮಲದ ರೂವಾರಿ ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಹಣಿಯಲು ಮುಂದಾಗಿರುವ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅಖಾಡ ಸಿದ್ಧಪಡಿಸಿದ್ದಾರೆ.
ಬಿಜೆಪಿ ತೊರೆದು ಕಾಂಗ್ರೆಸ್ ಸೇರಿರುವ ಲಕ್ಷ್ಮಣ ಸವದಿ ಕೂಡ ಲಕ್ಷ್ಮಿ ಹೆಬ್ಬಾಳ್ಕರ್ಗೆ ಮತ್ತಷ್ಟು ಬಲ ತುಂಬಿದ್ದು, ಈಗ ಇಬ್ಬರೂ ಒಟ್ಟಾಗಿ ತಮ್ಮ ಎದುರಾಳಿ ರಮೇಶ್ ಜಾರಕಿಹೊಳಿಯನ್ನು ರಾಜಕೀಯವಾಗಿ ಕಟ್ಟಿಹಾಕಲು ಮುಂದಾಗಿದ್ದಾರೆ.
ಗೋಕಾಕ್ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಚಂದನ್ ಗಿಡ್ಡನವರ್ ಅವರು ತಮ್ಮ ನಾಮಪತ್ರ ವಾಪಸ್ ಪಡೆದು, ಕಾಂಗ್ರೆಸ್ ಜೊತೆಗೆ ಕೈಜೋಡಿಸುವಂತೆ ಮಾಡುವಲ್ಲಿ ಲಕ್ಷ್ಮಣ ಸವದಿ ಮತ್ತು ಲಕ್ಷ್ಮಿ ಹೆಬ್ಬಾಳ್ಕರ್ ಜೋಡಿ ಸಫಲವಾಗಿದೆ.
ಲಕ್ಷ್ಮಣ ಸವದಿ ಮತ್ತು ಲಕ್ಷ್ಮಿ ಹೆಬ್ಬಾಳ್ಕರ್ ಅವರು ಖುದ್ದು ಚಂದನ್ ಗಿಡ್ಡನವರ್ ಮನೆಗೆ ಹೋಗಿ, ರಮೇಶ್ ಜಾರಕಿಹೊಳಿ ಸೋಲಿಸಲು ಕೈ ಜೋಡಿಸುವಂತೆ ಕೋರಿದ್ದರು. ಗೋಕಾಕ್ ತಾಲ್ಲೂಕಿನಲ್ಲಿ ಪಂಚಮಸಾಲಿ ಸಮುದಾಯದ ಪ್ರಮುಖ ನಾಯಕನಾಗಿ ಗುರುತಿಸಿಕೊಂಡಿರುವ ಚಂದನ್ ಗಿಡ್ಡನವರ್ ಅವರು ಲಕ್ಷ್ಮಣ ಸವದಿ ಮತ್ತು ಲಕ್ಷ್ಮಿ ಹೆಬ್ಬಾಳ್ಕರ್ ಮಾತಿಗೆ ಬೆಲೆಕೊಟ್ಟು ತಮ್ಮ ನಾಮಪತ್ರ ವಾಪಸ್ ಪಡೆದಿದ್ದಾರೆ. ಇದು ಸಹಜವಾಗಿ ಕಾಂಗ್ರೆಸ್ ಅಭ್ಯರ್ಥಿಗೆ ವರವಾಗುವ ಸಾಧ್ಯತೆ ಹೆಚ್ಚಿದೆ.
ಕಾಂಗ್ರೆಸ್ಗೆ ಬೆಂಬಲ ನೀಡಿರುವುದರಿಂದ ಚಂದನ್ ಗಿಡ್ಡನವರ್ ಅನ್ನು ಜೆಡಿಎಸ್ ಉಚ್ಚಾಟಿಸಲಿದೆ ಎಂಬ ಮಾತುಗಳು ಕೇಳಿಬಂದಿದ್ದು, ಇದೇ ವಾರದಲ್ಲಿ ಅವರು ಅಧಿಕೃತವಾಗಿ ಅವರು ಕಾಂಗ್ರೆಸ್ ಸೇರಲಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ.
“ರಮೇಶ್ ಜಾರಕಿಹೊಳಿಯ ಭ್ರಷ್ಟಾಚಾರ, ಅಕ್ರಮ ಚಟುವಟಿಕೆಗಳ ವಿರುದ್ಧ ಕಳೆದ 20 ವರ್ಷಗಳಿಂದ ಚಂದನ್ ಗಿಡ್ಡನವರ್ ಹೋರಾಡುತ್ತಿದ್ದಾರೆ. ಇತ್ತೀಚೆಗೆ ಜಿಲ್ಲೆಯಲ್ಲಿ ಜಾರಕಿಹೊಳಿಯ ಉಪಟಳ ಬಹಳ ಆಗಿದೆ. ಅವರನ್ನು ಹೇಗಾದೂ ಮಾಡಿ ಸೋಲಿಸಬೇಕು ಎಂದು ಪಣ ತೊಟ್ಟು ತಮ್ಮ ನಾಮಪತ್ರ ವಾಪಸ್ ಪಡೆದಿದ್ದಾರೆ” ಎಂದು ಚಂದನ್ ಗಿಡ್ಡನವರ್ ಆತ್ಮೀಯರು ಈ ದಿನ.ಕಾಮ್ಗೆ ಹೇಳಿದರು.
ಮುಂದುವರಿದು. “ಕಾಂಗ್ರೆಸ್ ಅಭ್ಯರ್ಥಿ ಮಹಾಂತೇಶ್ ಕಡಾಡಿ ಪಂಚಮಸಾಲಿ ಸಮುದಾಯಕ್ಕೆ ಸೇರಿದವರು. ಇತ್ತ ಚಂದನ್ ಗಿಡ್ಡನವರ್ ಕೂಡ ಪಂಚಮಸಾಲಿ ಸಮುದಾಯದ ಪ್ರಮುಖ ನಾಯಕ. ಹೀಗಾಗಿ ಚಂದನ್ ಅವರು ಸ್ಪರ್ಧೆಯಲ್ಲಿ ಉಳಿದರೆ ಲಿಂಗಾಯತ ಮತಗಳು ಒಡೆಯುತ್ತಿದ್ದವು. ಇದನ್ನು ಅರಿತು ಮಹಾಂತೇಶ್ ಕಡಾಡಿ ಅವರ ಗೆಲುವಿಗೆ ದಾರಿ ಸುಗಮ ಮಾಡಲು ಕಣದಿಂದ ಹಿಂದೆ ಸರಿದಿದ್ದಾರೆ. ಈ ವಾರದಲ್ಲಿ ಕಾಂಗ್ರೆಸ್ ಜೊತೆ ಸೇರಿ ಜಾರಕಿಹೊಳಿ ಮಣಿಸಲು ಕ್ಷೇತ್ರದಾದ್ಯಂತ ಸಂಚರಿಸಲಿದ್ದಾರೆ” ಎಂದರು.
ಈ ಸುದ್ದಿ ಓದಿದ್ದೀರಾ? ಈದಿನ.ಕಾಮ್ ಸಮೀಕ್ಷೆ-5: ಸರ್ಕಾರದ ಯೋಜನೆಗಳ ʼಫಲʼ ಬಿಜೆಪಿಗೆ ಸಿಗದು; ಕಾಂಗ್ರೆಸ್ನ ಗ್ಯಾರಂಟಿಗಳಿಗೆ ಇನ್ನೂ ಇಲ್ಲ ಗ್ಯಾರಂಟಿ
ತಂತ್ರ, ಪ್ರತಿತಂತ್ರ ಹೆಣೆದ ನಾಯಕರು
ಲಕ್ಷ್ಮಿ ಹೆಬ್ಬಾಳಕರ್ ಅವರನ್ನು ರಾಜಕೀಯವಾಗಿ ಕಟ್ಟಿಹಾಕಲು ರಮೇಶ್ ಜಾರಕಿಹೊಳಿ ಅವರು ತಮ್ಮ ಆಪ್ತ ಹಿಂಡಲಗಾ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗೇಶ ಮನ್ನೋಳಕರ ಅವರಿಗೆ ಹಠ ಹಿಡಿದು ಟಿಕೆಟ್ ಕೊಡಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ತಂತ್ರ ರೂಪಿಸಿರುವ ಲಕ್ಷ್ಮಿ ಹೆಬ್ಬಾಳಕರ್ ಅವರು ರಮೇಶ್ ಜಾರಕಿಹೊಳಿ ಸೋಲಿಸಲು ಗೋಕಾಕ್ನ ಪ್ರಸಿದ್ಧ ಮಕ್ಕಳ ವೈದ್ಯ ಪಂಚಮಸಾಲಿ ಸಮುದಾಯದ ನಾಯಕ ಮಹಾಂತೇಶ್ ಕಡಾಡಿ ಅವರಿಗೆ ಟಿಕೆಟ್ ಕೊಡಿಸಿದ್ದಾರೆ.
ಹಾಗೆಯೇ ಮಹಾಂತೇಶ್ ಕಡಾಡಿ ಅವರಿಗೆ ಕಾಂಗ್ರೆಸ್ನಿಂದ ಟಿಕೆಟ್ ಕೊಡಿಸಲು ಹೆಚ್ಚು ಒತ್ತಡ ಹೇರಿದವರು ವೈದ್ಯರು ಮತ್ತು ವಕೀಲರು ಎಂಬ ಮಾಹಿತಿ ಇದೆ. ಗೋಕಾಕ್ ಕ್ಷೇತ್ರದ ಬಹುತೇಕ ವೈದ್ಯರ ಮತ್ತು ವಕೀಲರ ವಿರೋಧವನ್ನು ಜಾರಕಿಹೊಳಿ ಕಟ್ಟಿಕೊಂಡಿದ್ದಾರೆ. ಈಗ ಅವರೇ ಮುಂದೆ ನಿಂತು ಮಹಾಂತೇಶ್ ಕಡಾಡಿ ಗೆಲುವಿಗೆ ಕ್ಷೇತ್ರದಲ್ಲಿ ಶ್ರಮಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಬಿಜೆಪಿಯೊಳಗೂ ವಿರೋಧ
ಜೊತೆಗೆ ರಮೇಶ್ ಜಾರಕಿಹೊಳಿಯ ಅಟ್ಟಹಾಸಕ್ಕೆ, ಒಳರಾಜಕೀಯಕ್ಕೆ ಬೇಸತ್ತಿರುವ ಬಿಜೆಪಿಯ ಲಿಂಗಾಯತ ನಾಯಕರು ಕೂಡ, ಒಳಗೊಳಗೇ ರಮೇಶ್ ಜಾರಕಿಹೊಳಿಯನ್ನು ಕಟ್ಟಿಹಾಕಲು ಷಡ್ಯಂತ್ರ ರೂಪಿಸಿದ್ದಾರೆ. ಶಶಿಕಲಾ ಜೊಲ್ಲೆಯ ನಾಯಕತ್ವದಲ್ಲಿ ಲಿಂಗಾಯತ ನಾಯಕರೆಲ್ಲ ಒಂದಾಗಿದ್ದು, ರಮೇಶ್ ಜಾರಕಿಹೊಳಿಗೆ ಈ ಚುನಾವಣೆಯಲ್ಲಿ ಲಿಂಗಾಯತ ಮತಗಳು ದುಬಾರಿಯಾಗುವ ಸಾಧ್ಯತೆ ಇದೆ.