ಬೆಂಗಳೂರು ಬಳಿಯ ದೇವನಹಳ್ಳಿಯಲ್ಲಿ ಶುಕ್ರವಾರ ನಡೆದ ಬಿಜೆಪಿ ರ್ಯಾಲಿಯಲ್ಲಿ ಪ್ರಧಾನಿ ಮೋದಿ ಭಾಗವಹಿಸಿದ್ದರು. ಆ ಕಾರ್ಯಕ್ರಮದಲ್ಲಿ ಭಾಗವಹಿಸಿದರೆ 500 ರೂ. ಕೊಡುತ್ತೇವೆಂದು ಕರೆದುಕೊಂಡು ಬಂದು ಕೇವಲ 200 ರೂ. ಕೊಟ್ಟಿದ್ದಾರೆಂದು ಬಿಜೆಪಿ ವಿರುದ್ಧ ರ್ಯಾಲಿಯಲ್ಲಿ ಭಾಗವಹಿಸಿದ್ದವರು ಆರೋಪಿಸಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟದ ಸುಮಾರು 40 ಕೂಲಿ ಕಾರ್ಮಿಕರು ಬಿಜೆಪಿ ವಿರುದ್ಧ ಈ ಆರೋಪ ಮಾಡಿದ್ದಾರೆ. ಮೋದಿ ಭಾಗವಹಿಸುವ ರ್ಯಾಲಿಗೆ ಬನ್ನಿ 500 ರೂ. ಕೊಡುತ್ತೇವೆಂದು ಬಿಜೆಪಿ ಮುಖಂಡರು ಕರೆದೊಯ್ದಿದ್ದರು. ಆದರೆ, ವಾಪಸ್ ಬಂದ ಮೇಲೆ ಕೇವಲ 200 ರೂ. ಕೊಟ್ಟಿದ್ದಾರೆ ಎಂದು ಅವರು ಆರೋಪಿಸಿದ್ದು, ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“ನಮ್ಮ ಒಂದು ದಿನದ ಕೂಲಿಯ ಮೊತ್ತ (500 ರೂ.) ಒಡುತ್ತೇವೆಂದು ಅವರು ಹೇಳಿದ್ದರು. ಕಾರ್ಯಕ್ರಮ ಮುಗಿಸಿ ಬಂದ ಬಳಿಕ 100 ರೂ. ಕೊಡಲು ಬಂದರು. ನಾವು ಗಲಾಟೆ ಮಾಡಿದೆವು. ನಂತರ, ತಮಗೆ ಅವಮಾನವಾಗುತ್ತದೆಂದು ಮತ್ತೆ 100 ರೂ. ಸೇರಿಸಿ 200 ರೂ. ನೀಡಿದರು” ಎಂದು ಅವರು ಆರೋಪಿಸಿದ್ದಾರೆ.
ನಮಗೆ ದೊರೆಯಬೇಕಿದ್ದ ಹಣ ದೊರೆತಿಲ್ಲವೆಂದು ಕಾರ್ಮಿಕರು ಪೊಲೀಸರು ದೂರು ನೀಡಲು ಮುಂದಾಗಿದ್ದರು ಎಂದೂ ತಿಳಿದುಬಂದಿದೆ. ಆದರೆ, ಈ ಆರೋಪಕ್ಕೆ ಸಂಬಂಧಿಸಿದಂತೆ ಯಾರೂ ದೂರು ನೀಡಲು ಬಂದಿಲ್ಲವೆಂದು ಶಿಡ್ಲಘಟ್ಟ ಪೊಲೀಸರು ತಿಳಿಸಿದ್ದಾರೆ.