- ದೇಶ, ನಾಡು ಕಟ್ಟುವಲ್ಲಿ ಪ್ರತಿಯೊಬ್ಬರ ಮತ ಮುಖ್ಯ
- ನಿರ್ಭೀತಿಯಿಂದ ಮತ ಚಲಾಯಿಸುವುದು ಪ್ರತಿಯೊಬ್ಬರ ಕರ್ತವ್ಯ
ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಗುಮಗೇರಿ ಗ್ರಾಮದಲ್ಲಿ ಏಪ್ರಿಲ್ 24ರಂದು ಮೇಣದ ಬತ್ತಿ ಹಚ್ಚಿ, ಜಾಗೃತಿ ಗೀತೆ ಹಾಡುವ ಮೂಲಕ ಮತದಾನದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ನೆರವೇರಿತು.
ಮಹಿಳೆಯರು ಪಂಜು ಹಿಡಿದು ಜಾಥಾದಲ್ಲಿ ಭಾಗಿಯಾದರು, ಜೊತೆಗೆ ಜಾಗೃತಿ ಗೀತೆಗಳನ್ನೊಳಗೊಂಡಿದ್ದ ವಿಶೇಷ ಕಾರ್ಯಕ್ರಮವನ್ನು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಮಲ್ಲಪ್ಪ ಕುಂಬಾರ್ ನೇತೃತ್ವದಲ್ಲಿ ಆಯೋಜಿಸಲಾಗಿತ್ತು.
“ಯುವಕರು, ವೃದ್ಧರು, ವಿಕಲಚೇತನ ಮತದಾರರು ನಿರ್ಭೀತಿಯಿಂದ ಮತ ಚಲಾಯಿಸಬೇಕು. ಶೇ. 100ರಷ್ಟು ಮತ ಚಲಾಯಿಸಿ ಯೋಗ್ಯ ಮತ್ತು ಸಮರ್ಥ ನಾಯಕನನ್ನು ಆಯ್ಕೆ ಮಾಡಬೇಕು. ದೇಶ, ನಾಡು ಕಟ್ಟುವಲ್ಲಿ ಪ್ರತಿಯೊಬ್ಬರ ಮತ ಮುಖ್ಯವಾಗಿರುತ್ತದೆ. ಚುನಾವಣೆ ಪ್ರಜಾತಂತ್ರದ ಹಬ್ಬ. ಆಸೆ, ಆಮೀಷಗಳಿಗೆ ಒಳಗಾಗದೇ ಮುತುವರ್ಜಿವಹಿಸಿ ಮತ ಚಲಾಯಿಸಬೇಕು” ಎಂದು ತಾಲೂಕು ಪಂಚಾಯಿತಿಯ ಸಹಾಯಕ ನಿರ್ದೇಶಕ ನಿಂಗನಗೌಡ ವಿ ಎಚ್ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಸಾಮಾಜಿಕ ಲೆಕ್ಕಪರಿಶೋಧಕ ಸಂಯೋಜಕ ರವಿಗೌಡರ್, ತಾಲೂಕು ಪಂಚಾಯಿತಿಯ ಐಇಸಿ ಸಂಯೋಜಕ ಚಂದ್ರಶೇಖರ್ ಜಿ ಹಿರೇಮಠ, ಗ್ರಾಮ ಪಂಚಾಯಿತಿಯ ಸಿಬ್ಬಂದಿ ವಿರುಪಾಕ್ಷಪ್ಪ, ಹನುಮಂತ, ಲಕ್ಷ್ಮೀದೇವಿ, ಹನುಮಂತ ಶಕಪೂರ, ಜಾನಪದ ಕಲಾವಿದರಾದ ಸುಕುಮುನಿ, ನಾಗಪ್ಪ, ಎನ್.ಆರ್.ಎಲ್.ಎಂ ಸಂಜೀವಿನಿ ಸ್ವಸಹಾಯ ಸಂಘದ ಹನುಮಕ್ಕ, ಸುಮಾ, ನಿರ್ಮಲ ಕಸ್ತೂರಿ ಹಾಗೂ ಇತರರು ಅಂಗನವಾಡಿ, ಆಶಾ, ಕಾರ್ಯಕರ್ತೆಯರಾದ ಶಾರದಾ, ಹನುಮಕ್ಕ, ಬಸಮ್ಮ, ಕವಿತಾ ಹಾಗೂ ಗ್ರಾಮದ ಗುರು ಹಿರಿಯರು, ಸಾರ್ವಜನಿಕರು ಭಾಗವಹಿಸಿದ್ದರು.
ಈ ಸುದ್ದಿ ಓದಿದ್ದೀರಾ?: ಕೊಪ್ಪಳ | ಗಂಗಾವತಿಯಲ್ಲಿ ಮತ ಬೇಟೆ ಆರಂಭಿಸಿದ ಎಎಪಿ ಮಹಿಳಾ ಮುಖಂಡರು