ಬೆಂಗಳೂರಿನಲ್ಲಿ ಈಡಿಗರ ಒಗ್ಗಟ್ಟು ಪ್ರದರ್ಶನ; ಸಾಗರೋಪಾದಿಯಲ್ಲಿ ಜನ ಭಾಗಿ

Date:

ಸಮುದಾಯದ 26 ಒಳಪಂಗಡಗಳು ಸೇರಿದ್ದ ಈ ಸಮಾವೇಶದಲ್ಲಿ ಸಮುದಾಯದ ರಾಜಕಾರಣಿಗಳು, ಸಂಘಟಕರು, ಮುಖಂಡರು ತಮ್ಮ ಆಗ್ರಹಗಳನ್ನು ಸರ್ಕಾರದ ಗಮನಕ್ಕೆ ತಂದರು.

ಬೆಂಗಳೂರಿನ ಅರಮನೆ ಮೈದಾನದಲ್ಲಿ ಭಾನುವಾರ ನಡೆದ ’ಕರ್ನಾಟಕ ಪ್ರದೇಶ ಆರ್ಯ ಈಡಿಗ ಸಂಘದ ಅಮೃತ ಮಹೋತ್ಸವ’ವು ಸಮುದಾಯದ ಶಕ್ತಿ ಪ್ರದರ್ಶನಕ್ಕೆ ಸಾಕ್ಷಿಯಾಯಿತು.

ಈಡಿಗರು, ಬಿಲ್ಲವರು, ನಾಮಧಾರಿಗಳು, ಹಳೇಪೈಕರು, ದೀವರು, ಈಳವರು ಒಳಗೊಂಡಂತೆ ಸಮುದಾಯದ 26 ಒಳಪಂಗಡಗಳು ಸೇರಿದ್ದ ಈ ಸಮಾವೇಶದಲ್ಲಿ ಸಮುದಾಯದ ರಾಜಕಾರಣಿಗಳು, ಸಂಘಟಕರು, ಮುಖಂಡರು ತಮ್ಮ ಆಗ್ರಹಗಳನ್ನು ಸರ್ಕಾರದ ಗಮನಕ್ಕೆ ತಂದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಶಿಕ್ಷಣ ಸಚಿವ ಮಧು ಬಂಗಾರಪ್ಪ ಸಮುದಾಯದ ಪರವಾಗಿ ಮನವಿಗಳನ್ನು ಮಾಡಿದರು. “ಕುಲಕಸುಬು ಕಳೆದುಕೊಂಡ ಮೇಲೆ ಬೀದಿಪಾಲಾಗಿರುವ ಸಮುದಾಯವನ್ನು ಮೇಲೆತ್ತುವ ಭರವಸೆ ನೀಡಬೇಕು. ಶರಾವತಿ ನದಿಗೆ ಡ್ಯಾಮ್ ಕಟ್ಟಿದ ಮೇಲೆ ರಾಜ್ಯಕ್ಕೆ ಬೆಳಕು ಸಿಕ್ಕಿತು. ಆದರೆ ಭೂಮಿ ಕಳೆದುಕೊಂಡ ಈಡಿಗರು ಕತ್ತಲಲ್ಲಿ ಬದುಕುತ್ತಿದ್ದಾರೆ. ಭೂ ಒಡೆತನದ ಹಕ್ಕುಪತ್ರಗಳನ್ನು ಸಮುದಾಯಕ್ಕೆ ನೀಡಬೇಕು” ಎಂದು ಆಗ್ರಹಿಸಿದರು. ಜೊತೆಗೆ ಸಿದ್ದರಾಮಯ್ಯನವರಲ್ಲಿ ಎಸ್.ಬಂಗಾರಪ್ಪನವರ ಗುಣಗಳನ್ನು ಕಾಣುತ್ತಿರುವುದಾಗಿ ನುಡಿದರು.

ಈ ಸುದ್ದಿ ಓದಿದ್ದೀರಾ? ಜಾತಿ, ಧರ್ಮ ಮೀರಿ ಬೆಳೆದ ನಾರಾಯಣ ಗುರು ನಿಜವಾದ ವಿಶ್ವ ಮಾನವ: ಸಿಎಂ ಸಿದ್ದರಾಮಯ್ಯ

ಸಮುದಾಯಕ್ಕೆ ನಿಗಮವನ್ನು ಸ್ಥಾಪಿಸಿ 500 ಕೋಟಿ ರೂ.ಗಳನ್ನು ನೀಡಬೇಕು, ಅಧ್ಯಯನ ಪೀಠ ಸ್ಥಾಪಿಸಬೇಕು ಸೇರಿದಂತೆ ಹಲವು ಬೇಡಿಕೆಗಳನ್ನು ಸಂಘವು ಇಟ್ಟಿದೆ. “ವಿಧಾನಸಭೆ ಅಧಿವೇಶನ ನಡೆಯುತ್ತಿರುವುದರಿಂದ ಬೇಡಿಕೆಗಳ ಕುರಿತು ಘೋಷಣೆ ಮಾಡಲು ಸಾಧ್ಯವಿಲ್ಲ. ಸೆಷನ್ ಮುಗಿದ ಮೇಲೆ ಸಂಘದ ಪದಾಧಿಕಾರಿಗಳು ನನ್ನನ್ನು ಭೇಟಿಯಾಗಲಿ. ಭರವಸೆಗಳನ್ನು ಈಡೇರಿಸಲು ಸಿದ್ಧ” ಎಂದು ಸಿಎಂ ಸಿದ್ದರಾಮಯ್ಯ ಭರವಸೆಯನ್ನು ನೀಡಿದರು.

ಇದಕ್ಕೂ ಮುನ್ನ ಅನೇಕ ಮುಖಂಡರು, ಸಮುದಾಯದ ಸ್ವಾಮೀಜಿಗಳು ವೇದಿಕೆಯನ್ನು ಉದ್ದೇಶಿಸಿ ಮಾತನಾಡಿದರು. ಆರ್ಯ ಈಡಿಗ ಸಂಘವನ್ನು ಸ್ಥಾಪಿಸಿದ ಪ್ರಾತಃ ಸ್ಮರಣೀಯರಾದ ಕೆ.ಎನ್.ಗುರುಸ್ವಾಮಿ, ಕೆ.ವೆಂಕಟಸ್ವಾಮಿ ಅವರನ್ನು ಸಮಾವೇಶದ ಉದ್ದಕ್ಕೂ ಸ್ಮರಿಸಲಾಯಿತು. ವರ್ಣರಂಜಿತ ರಾಜಕಾರಣಿ ಮತ್ತು ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ, ವರನಟ ಡಾ.ರಾಜ್‌ಕುಮಾರ್‌, ಕರ್ನಾಟಕ ರತ್ನ ಪುನೀತ್ ರಾಜ್‌ಕುಮಾರ್‌, ಬ್ಯಾಂಕಿಂಗ್ ಕ್ಷೇತ್ರದಲ್ಲಿ ಬದಲಾವಣೆಗಳನ್ನು ತಂದ ಜನಾರ್ದನ ಪೂಜಾರಿ, ಭೂ ಸುಧಾರಣೆಗಳಿಗಾಗಿ ಹೋರಾಟಗಳನ್ನು ನಡೆಸಿದ ಹಿರಿಯ ರಾಜಕಾರಣಿ ಕಾಗೋಡು ತಿಮ್ಮಪ್ಪ ಸೇರಿದಂತೆ ಸಮುದಾಯದ ಅನೇಕ ಧುರೀಣರ ಸಾಧನೆಗಳನ್ನು ಮೆಲುಕು ಹಾಕಲಾಗಿತು.

ಈಡಿಗ ಸಮಾವೇಶದಲ್ಲಿ ಸೇರಿದ್ದ ಜನಸ್ತೋಮ

ಸೋಲೂರಿನ ವಿಖ್ಯಾತನಂದ ಸ್ವಾಮೀಜಿಯವರು ಮಾತನಾಡಿ, “1995ರಲ್ಲಿ ಇದೇ ಮೈದಾನದಲ್ಲಿ ನಡೆದ ಈಡಿಗ ಸಮಾವೇಶದಲ್ಲಿ ಅಂದು ಭಾಗಿಯಾಗಿದ್ದೆ. ಇಂದು ನಮ್ಮದೇ ನೇತೃತ್ವದಲ್ಲಿ ಕಾರ್ಯಕ್ರಮ ಆಗುತ್ತಿರುವುದು ತುಂಬಾ ಸಂತೋಷ ತಂದಿದೆ. ಈ ಸಮಾವೇಶದ ಮೂಲಕ ಸಮಾಜದ ಅಭ್ಯುದಯ ಆರಂಭವಾಗಬೇಕು” ಎಂದು ಆಶಿಸಿದರು.

ಈ ಸುದ್ದಿ ಓದಿದ್ದೀರಾ? ಶಿವರಾಜ್ ಕುಮಾರ್ ಕೇಳಿದ್ದಲ್ಲಿ ಲೋಕಸಭಾ ಟಿಕೆಟ್ ಕೊಡಲು ಸಿದ್ಧ: ಡಿ ಕೆ ಶಿವಕುಮಾರ್

ಹರಿದು ಹಂಚಿಹೋಗಿದ್ದ ಸಮುದಾಯದ 26 ಉಪಪಂಗಡಗಳು ನಾರಾಯಣ ಗುರುಗಳ ಸಂದೇಶವನ್ನು ಅರ್ಥ ಮಾಡಿಕೊಂಡು ಒಂದಾಗಿದ್ದೇವೆ. ನಾವೆಲ್ಲ ಏಕತೆಯಿಂದ ಮುಂದು ನಡೆಯೋಣ ಎಂದು ಸಂದೇಶ ನೀಡಿದರು.

ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಮಾತನಾಡಿ, “ಈ ಸಮಾಜ ಹಿಂದುಳಿದಿದೆ. ನಮ್ಮದೇ ಆದ ಸರ್ಕಾರ ಬಂದಿದೆ. ನಮ್ಮದೇ ಮುಖ್ಯಮಂತ್ರಿಗಳಿದ್ದಾರೆ. ಈ ಸರ್ಕಾರ ನಮ್ಮ ಪರವಾಗಿದೆ. ನಮ್ಮ ಸಮಾಜವನ್ನು ಎತ್ತರಕ್ಕೆ ಕೊಂಡೊಯ್ಯಬೇಕು. ನಾವು ಬಂಗಾರಪ್ಪನವರ ಗರಡಿಯಲ್ಲಿ ಕಲಿತವರು. ಈ ಸಮಾಜದ ಪರವಾಗಿ, ನಿಮ್ಮ ಪರವಾಗಿ ದನಿಯಾಗಿ ಇರುತ್ತೇವೆ. ಸಮಾಜದ ಯುವಕರಿಗೆ ಶಿಕ್ಷಣ ನೀಡಿದರೆ ಗಟ್ಟಿಯಾಗಿ ನಿಲ್ಲುತ್ತಾರೆ. ನಮ್ಮಲ್ಲಿ ಐಎಎಸ್, ಕೆಎಎಸ್ ಆದವರು ಕಡಿಮೆ ಇದ್ದಾರೆ. ಈಡಿಗ ಸಮಾಜದ ಅಭಿವೃದ್ಧಿ ನಿಗಮ ರೂಪಿಸಿ ಐನ್ನೂರು ಕೋಟಿಯನ್ನು ನೀಡಬೇಕು. ಯಾವುದೇ ಪಕ್ಷದಲ್ಲಿದ್ದರೂ ನಾವು ಒಂದೇ ಎಂಬುದನ್ನು ಸಮಾಜದ ಮುಖಂಡರು ಅರ್ಥ ಮಾಡಿಕೊಳ್ಳಬೇಕು” ಎಂದು ತಿಳಿಸಿದರು.

ಮಾಜಿ ಸಚಿವ ಎಚ್.ಹಾಲಪ್ಪ ಮಾತನಾಡಿ, “ಹಕ್ಕೋತ್ತಾಯ ಮಾಡಲು ಅಧಿಕಾರದಲ್ಲಿ ಇರುವವರನ್ನು ಕರೆದಿದ್ದೇವೆ. ಇದು ಭಿಕ್ಷೆಯಲ್ಲ; ನಮ್ಮ ಹಕ್ಕು. ನಮ್ಮ ಸಮಾಜದಲ್ಲಿ  ಮೂಲಭೂತ ಸಮಸ್ಯೆಗಳಿವೆ. ಡಿ.ಕೆ.ಶಿವಕುಮಾರ್ ಅವರನ್ನು ಟ್ರಬಲ್ ಶೂಟರ್‌ ಎನ್ನುತ್ತಾರೆ. ನಮ್ಮ ಸಮಸ್ಯೆಗಳನ್ನು ಹೋಗಲಾಡಿಸಬೇಕು” ಎಂದರು.

ಮಾಜಿ ಸಚಿವ ಮಾಲಿಕಯ್ಯ ಗುತ್ತೇದಾರ್‌ ಮಾತನಾಡಿ, “ಕಾಂತರಾಜ ಆಯೋಗದ ವರದಿಯನ್ನು ಬೇಗನೇ ಬಹಿರಂಗಪಡಿಸಬೇಕು. ಆಗ ಹಿಂದುಳಿದ ಸಮುದಾಯದ ಸಮಸ್ಯೆಗಳಿಗೆ ಅನುಗುಣವಾಗಿ ಕಾರ್ಯಕ್ರಮಗಳನ್ನು ರೂಪಿಸಲು ಸಾಧ್ಯವಾಗುತ್ತದೆ. ಯಾವ ಪಕ್ಷ ನಮಗೆ ಸ್ಪಂದಿಸುತ್ತದೆಯೋ ಅದಕ್ಕೆ ಸಮುದಾಯ ಚಿರ ಋಣಿಯಾಗಿರಬೇಕಾಗುತ್ತದೆ” ಎಂದು ಘೋಷಿಸಿದರು.

“ವಿಧಾನ ಪರಿಷತ್ ಸದಸ್ಯರಾದ ಬಿ.ಕೆ.ಹರಿಪ್ರಸಾದ್ ಅವರು ಕಾರ್ಯಕ್ರಮಕ್ಕೆ ಬರಬೇಕಿತ್ತು. ಏನು ಡೆಫರೆನ್ಸ್ ಇದೆಯೋ ಗೊತ್ತಿಲ್ಲ. ಸಮಾಜದಲ್ಲಿ ಈ ರೀತಿಯ ಒಡಕು ಬರಬಾರದು” ಎಂದು ಎಚ್ಚರಿಸಿದರು.

ಮಾಜಿ ಸಂಸದ ವಿನಯ್ ಕುಮಾರ್‌ ಸೊರಕೆ ಮಾತನಾಡಿ, “ದೇವಾಲಯಕ್ಕೆ ಪ್ರವೇಶ ಇಲ್ಲದೆ ಇರುವಾಗ ಬ್ರಹ್ಮಶ್ರೀ ನಾರಾಯಣ ಗುರುಗಳು ದೇವಸ್ಥಾನವನ್ನು ನಿರ್ಮಿಸಿ, ಇಡೀ ಸಮಾಜಕ್ಕೆ ಬೆಳಕು ಕೊಡುವ ಕೆಲಸವನ್ನು ಮಾಡಿದರು. ಈಡಿಗರು ಮತ್ತು ಬಿಲ್ಲವರು ಅಣ್ಣತಮ್ಮಂದಿರಾಗಿದ್ದೇವೆ. ನಾವೆಲ್ಲ ಒಂದಾಗಿ ಸಾಗುತ್ತಿದ್ದೇವೆ” ಎಂದು ಸಂತಸ ವ್ಯಕ್ತಪಡಿಸಿದರು.

ಈ ಸುದ್ದಿ ಓದಿದ್ದೀರಾ? ಭಾಗ್ಯಗಳನ್ನು ಕೊಟ್ಟಿರುವ ಮುಖ್ಯಮಂತ್ರಿಗಳು ಬಡವರಿಗೆ ಭೂಮಿಯ ಹಕ್ಕನ್ನು ನೀಡಲಿ: ಮಧು ಬಂಗಾರಪ್ಪ

ಬ್ರಹ್ಮಶ್ರೀ ನಾರಾಯಣ ಗುರುಗಳ ರೀತಿಯಲ್ಲಿ ಆತ್ಮವಿಶ್ವಾಸವನ್ನು ಸಮುದಾಯಕ್ಕೆ ತುಂಬುವ ಕೆಲಸವನ್ನು ರಾ.ರಾಜ್‌ಕುಮಾರ್‌ ಕುಟುಂಬ ಮಾಡಿದೆ. ಡಾ.ರಾಜ್‌ ಅವರು ಮನಸ್ಸು ಮಾಡಿದ್ದರೆ ರಾಜ್ಯದ ಮುಖ್ಯಮಂತ್ರಿಯಾಗುತ್ತಿದ್ದರು. 2013ರಲ್ಲಿ ಸಮಾವೇಶ ನಡೆದಿದ್ದಾಗ ಪುನೀತ್ ರಾಜ್‌ಕುಮಾರ್‌ ಪಾಲ್ಗೊಂಡಿದ್ದರು. ಇಂದು ಶಿವರಾಜ್‌ಕುಮಾರ್‌ ಭಾಗಿಯಾಗಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಒಂದು ಸಿದ್ಧಾಂತವನ್ನು ಒಪ್ಪಿದವರು. ಹದಿನೈದು ಲಕ್ಷ ಜನ ಅವರ ಜನ್ಮದಿನದ ಕಾರ್ಯಕ್ರಮಕ್ಕೆ ಸೇರಿದ್ದರು. ಅವರು ಎಂದಿಗೂ ತಮ್ಮ ಸಿದ್ಧಾಂತವನ್ನು ಬಿಡದವರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ನಮ್ಮ ಮೀಸಲಾತಿಗೆ ಯಾವುದೇ ರೀತಿಯ ಕುಂದು ಬರದಂತೆ ಭರವಸೆಯನ್ನು ನೀಡಬೇಕು. 26 ಪಂಗಡಗಳನ್ನು ಒಟ್ಟಿಗೆ ಸೇರಿಸಿ, ನಮ್ಮ ಜನಸಂಖ್ಯೆಯನ್ನು ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದರು.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವ ಶಿವರಾಜ್ ತಂಗಡಗಿ ಮಾತನಾಡಿ, “ನಾರಾಯಣ ಗುರುಗಳ ಹಾದಿಯಲ್ಲಿ ಹೊರಟವರು ಸಿದ್ದರಾಮಯ್ಯನವರು. ಈ ಹಿಂದೆ ಸಿಎಂ ಆಗಿದ್ದಾಗಲೂ ಪ್ರಾಣಾಳಿಕೆಯಲ್ಲಿ ಘೋಷಣೆ ಮಾಡಿದ್ದನ್ನು ಜಾರಿಗೆ ತಂದಿದ್ದರು” ಎಂದು ಶ್ಲಾಘಿಸಿದರು.

ಲೋಕಸಭೆ ಚುನಾವಣೆಯಲ್ಲಿ ಡಾ.ಶಿವರಾಜ್ ಕುಮಾರ್‌ ಅವರಿಗೆ ಟಿಕೆಟ್ ನೀಡಲು ಕಾಂಗ್ರೆಸ್ ಸಿದ್ಧ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸಮಾವೇಶದಲ್ಲಿ ಹೇಳಿದರು. ಇದನ್ನು ಪ್ರಸ್ತಾಪಿಸಿ ಮಾತನಾಡಿದ ಶಿವರಾಜ್‌ಕುಮಾರ್‌, “ಬಣ್ಣ ಹಚ್ಚೋದು ನಮ್ಮ ವೃತ್ತಿ. ನನ್ನ ಪತ್ನಿ ರಾಜಕಾರಣದಲ್ಲಿದ್ದಾರೆ. ಅವರ ಆಯ್ಕೆ ಮಾಡಿಕೊಂಡಿದ್ದನ್ನು ಬೆಂಬಲಿಸುವುದು ನಮ್ಮ ಕರ್ತವ್ಯ. ಅವರ ಇಚ್ಛೆಗೆ ಬದ್ಧನಾಗಿದ್ದೇನೆ. ನನ್ನ ಸಪೋರ್ಟ್ ಅವರಿಗೆ ಇದ್ದೇ ಇರುತ್ತದೆ” ಎಂದು ಪ್ರತಿಕ್ರಿಯಿಸಿದರು.

“ನಮ್ಮ ಉದ್ದೇಶ ಏನು? ಆಗ ಆಗಬೇಕಿತ್ತು, ಈಗ ಆಗಬೇಕಿತ್ತು, ಯಾರಿಂದ ಆಯಿತು, ಯಾರು ಮಾಡಿದರು ಎಂಬುದು ಮುಖ್ಯವಲ್ಲ. ಯಾರಿಗಾಗಿ ಮಾಡಿದರು ಎಂಬುದು ಮುಖ್ಯ. ನಾನು ಯಾವಾಗಲು ನಿಮ್ಮಲ್ಲಿ ಒಬ್ಬ. ನೀವೆಲ್ಲ ಬೆಳೆಸಿದ್ದಕ್ಕೆ ನಾವು ಇಲ್ಲಿದ್ದೇನೆ. ಇಂತಹ ಕಾರ್ಯಕ್ರಮಗಳು ಹೆಚ್ಚು ಕಾರ್ಯಕ್ರಮಗಳು ಆಗಬೇಕು” ಎಂದು ಆಶಿಸಿದರು.

ಸಂಘದ ಅಧ್ಯಕ್ಷರಾದ ಡಾ.ಎಂ.ತಿಮ್ಮೇಗೌಡ ಅವರು ಅಧ್ಯಕ್ಷತೆ ವಹಿಸಿ ತಮ್ಮ ಬೇಡಿಕೆಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸಲ್ಲಿಸಿದರು. ‘ಪ್ರಜಾವಾಣಿ’, ‘ಡೆಕ್ಕನ್ ಹೆರಾಲ್ಡ್’ ಪತ್ರಿಕೆಗಳ ನಿರ್ದೇಶಕರಾದ ತಿಲಕ್‌ ಕುಮಾರ್‌, ಹೊಸಪೇಟೆ ಶಾಸಕ ಗವಿಯಪ್ಪ, ಚಲನಚಿತ್ರ ಕ್ಷೇತ್ರದ ಚಿನ್ನೇಗೌಡ, ಸೋಲೂರಿನ ವಿಖ್ಯಾತಾನಂದ ಸ್ವಾಮೀಜಿ, ಧರ್ಮಸ್ಥಳ ಶ್ರೀರಾಮ ಕ್ಷೇತ್ರದ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ, ನಿಟ್ಟೂರಿನ ರೇಣುಕಾನಂದ ಸ್ವಾಮೀಜಿ, ಕಾರ್ತಿಕೇಯ ಮಠದ ಯೋಗೇಂದ್ರ ಅವಧೂತರು, ನಿಪ್ಪಾಣಿಯ ಅರುಣಾನಂದ ಸ್ವಾಮೀಜಿ, ಸಿಗಂದೂರು ಶ್ರೀಕ್ಷೇತ್ರದ ಧರ್ಮದರ್ಶಿ ರಾಮಪ್ಪ, ಸಂಘದ ಪ್ರಧಾನ ಕಾರ್ಯದರ್ಶಿ ಎಚ್.ಟಿ.ಮೋಹನ್ ದಾಸ್, ನಟ ಸಾಧುಕೋಕಿಲ ಸೇರಿದಂತೆ ನೂರಾರು ಮುಖಂಡರು, ರಾಜಕಾರಣಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು. ಸಾಗರೋಪಾದಿಯಲ್ಲಿ ಜನ ಭಾಗಿಯಾಗಿದ್ದರು.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿಜಯ ದಿವಸ್ ಆಚರಣೆ | ಕಾರ್ಗಿಲ್ ಯೋಧ ಕ್ಯಾಪ್ಟನ್ ಕಾಲಿಯಾರಿಗೆ ದ್ರೋಹ ಬಗೆದ ಬಿಜೆಪಿ

ಇವತ್ತು ನಾವು ವಿಜಯ್ ದಿವಸ್ ಆಚರಿಸಿ, ನಮ್ಮ ಐನೂರು ಸೈನಿಕರ ಸಾವಿಗೆ...

ಮುಡಾ ದಾಖಲೆ ಬಹಿರಂಗ, ಮನೆ ಮುರುಕ ರಾಜಕಾರಣ ಬಿಡಿ ಎಂದು ಸಿಎಂ ಬಿಜೆಪಿಗೆ ತಿರುಗೇಟು

ಅಧಿವೇಶನದಲ್ಲಿ ರಾಜ್ಯದ ಜನರ ಸಮಸ್ಯೆಗಳ ಬಗ್ಗೆ ಆಡಳಿತ ಪಕ್ಷದವರು ಬೆಳಕು ಚೆಲ್ಲಿ...

ಬಿಜೆಪಿ ಪಾದಯಾತ್ರೆಯ ಪ್ರತಿ ದಿನ ಅವರ ಒಂದೊಂದು ಹಗರಣ ಬಯಲು: ಡಿ ಕೆ ಶಿವಕುಮಾರ್

ಬಿಜೆಪಿ ಪಾದಯಾತ್ರೆಯ ಪ್ರತಿ ದಿನವೂ ಅವರ ಒಂದೊಂದು ಹಗರಣ ಬಯಲು ಮಾಡುತ್ತೇವೆ...

ಏನಿದು ಮುಡಾ – ವಾಲ್ಮೀಕಿ ನಿಗಮ ಅಕ್ರಮ; ಈ ಹಿಂದೆ ಯಾವೆಲ್ಲಾ ಹಗರಣಗಳು ನಡೆದಿವೆ?

ಲೋಕಸಭಾ ಚುನಾವಣಾ ಫಲಿತಾಂಶ ಹೊರಬಂದ ಬೆನ್ನಲ್ಲೇ ರಾಜ್ಯ ರಾಜಕಾರಣದಲ್ಲಿ ಮುಡಾ ಮತ್ತು...