ಉರ್ದು ಸೇರಿದಂತೆ ಭಾಷಾ ಅಲ್ಪಸಂಖ್ಯಾತ ಮಾಧ್ಯಮದ ಅಭ್ಯರ್ಥಿಗಳಿಗೆ ಶಿಕ್ಷಕರ ನೇಮಕಾತಿಯಲ್ಲಿ ನೀಡಿದ್ದ ಭರವಸೆಯನ್ನು ಸರ್ಕಾರ ಶೀಘ್ರವಾಗಿ ಈಡೇರಿಸಬೇಕು. ಸರ್ಕಾರವು ಕೊಟ್ಟ ಮಾತಿನಿಂದ ಹಿಂದೆ ಸರಿಯಬಾರದು ಎಂದು ಕರ್ನಾಟಕ ರಾಜ್ಯ ಮುಸ್ಲಿಂ ಒಕ್ಕೂಟ ಒತ್ತಾಯಿಸಿದೆ.
ಮರಾಠಿ ಶಿಕ್ಷಕರ ಪೂರ್ಣ ಪ್ರಮಾಣದ ನೇಮಕಾತಿಗೆ ಆಗ್ರಹಿಸಿ ಒಕ್ಕೂಟವು ಪತ್ರಿಕಾ ಹೇಳಿಕೆ ಪ್ರಕಟಿಸಿದೆ. “ಹಿಂದೆ 15 ಸಾವಿರ ಶಿಕ್ಷಕರ ನೇಮಕಾತಿ ಸಂದರ್ಭದಲ್ಲಿ ಉರ್ದು ಮತ್ತು ಮರಾಠಿ ಮಾಧ್ಯಮದ ಅಭ್ಯರ್ಥಿಗಳನ್ನು ಹೊರಗಿಡಲಾಗಿತ್ತು. ಬಳಿಕ ತೀವ್ರ ಪ್ರತಿಭಟನೆ ಮತ್ತು ಒತ್ತಾಯದ ಹಿನ್ನೆಲೆಯಲ್ಲಿ 800 ಉರ್ದು ಹಾಗೂ 200 ಮರಾಠಿ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಸರ್ಕಾರ ಮತ್ತು ಸಂಬಂಧಪಟ್ಟ ಸಚಿವರು ಬಹಿರಂಗ ಭರವಸೆ ನೀಡಿದ್ದರು. ಆದರೆ, ಪ್ರಸ್ತುತ ಸರ್ಕಾರವು ಅತ್ಯಂತ ಕಡಿಮೆ ಸಂಖ್ಯೆಯ ಹುದ್ದೆಗಳಿಗೆ ಮಾತ್ರ ನೇಮಕಾತಿ ಪ್ರಕ್ರಿಯೆ ನಡೆಸಲು ಮುಂದಾಗುತ್ತಿದೆ. ಇದು ಅಭ್ಯರ್ಥಿಗಳಲ್ಲಿ ತೀವ್ರ ಆತಂಕ ಹಾಗೂ ಆಕ್ರೋಶಕ್ಕೆ ಕಾರಣವಾಗಿದೆ” ಎಂದು ಹೇಳಿದೆ.
ಈ ಕುರಿತು ಮಾತನಾಡಿರುವ ಒಕ್ಕೂಟದ ಸಂಚಾಲಕ ಸುಹೇಲ್ ಅಹಮದ್ ಮರೂರ್, “ಸರ್ಕಾರವು ತನ್ನ ಭರವಸೆಯಿಂದ ಹಿಂದೆ ಸರಿದು ಹುದ್ದೆಗಳ ಸಂಖ್ಯೆಯನ್ನು ಕಡಿತಗೊಳಿಸುತ್ತಿರುವುದು ಭಾಷಾ ಅಲ್ಪಸಂಖ್ಯಾತ ಅಭ್ಯರ್ಥಿಗಳಿಗೆ ಮಾಡುತ್ತಿರುವ ದೊಡ್ಡ ಅನ್ಯಾಯ. ಇದು ಕೇವಲ ಉದ್ಯೋಗಾವಕಾಶದ ವಿಷಯವಲ್ಲ, ಬದಲಿಗೆ ಸಾಮಾಜಿಕ ನ್ಯಾಯ ಮತ್ತು ಸಮಾನ ಅವಕಾಶದ ಪ್ರಶ್ನೆಯಾಗಿದೆ,” ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಒಕ್ಕೂಟದ ಪ್ರಮುಖ ಬೇಡಿಕೆಗಳು:
- ಸರ್ಕಾರ ಮುಂಚೆ ಭರವಸೆ ನೀಡಿದಂತೆ 800 ಉರ್ದು ಹಾಗೂ 200 ಮರಾಠಿ ಶಿಕ್ಷಕರ ಹುದ್ದೆಗಳನ್ನು ಪೂರ್ಣ ಪ್ರಮಾಣದಲ್ಲಿ ಭರ್ತಿ ಮಾಡಲು ತಕ್ಷಣವೇ ಸ್ಪಷ್ಟ ಆದೇಶ ಹೊರಡಿಸಬೇಕು.
- ಹುದ್ದೆಗಳ ಸಂಖ್ಯೆಯನ್ನು ಕಡಿತಗೊಳಿಸುವ ಯಾವುದೇ ಪ್ರಸ್ತಾವನೆಯನ್ನು ಸರ್ಕಾರ ಕೂಡಲೇ ಸಂಪೂರ್ಣವಾಗಿ ಕೈಬಿಡಬೇಕು.
- ನೇಮಕಾತಿ ವಿಚಾರದಲ್ಲಿ ಅಭ್ಯರ್ಥಿಗಳಲ್ಲಿ ಉಂಟಾಗಿರುವ ಗೊಂದಲವನ್ನು ಸರ್ಕಾರ ತಕ್ಷಣವೇ ಪರಿಹರಿಸಬೇಕು.
“ಸರ್ಕಾರವು ಈ ಕೂಡಲೇ ಸಕಾರಾತ್ಮಕವಾಗಿ ಸ್ಪಂದಿಸಿ ಭಾಷಾ ಅಲ್ಪಸಂಖ್ಯಾತ ಅಭ್ಯರ್ಥಿಗಳಿಗೆ ನೀಡಿದ್ದ ಅಭಯವನ್ನು ಈಡೇರಿಸಬೇಕು” ಎಂದು ಸುಹೇಲ್ ಅಹಮದ್ ಮರೂರ್ ಆಗ್ರಹಿಸಿದ್ದಾರೆ.



