- 19 ಕೆರೆಗಳಲ್ಲಿ ಸುಮಾರು 39 ಲಕ್ಷ ಮೀನು ಮರಿಗಳನ್ನು ಬಿಡಲಾಗಿದೆ
- ಮೀನುಗಾರಿಕಾ ಇಲಾಖೆಗೆ ಅಧಿಕ ಆದಾಯ ಬಂದಿದೆ ಎಂದ ಸಹಾಯಕ ನಿರ್ದೇಶಕಿ
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಕೆರೆಗಳಲ್ಲಿ ಮೀನು ಸಾಕಣೆಯಿಂದ 2022-23ನೇ ಸಾಲಿನಲ್ಲಿ ಸರ್ಕಾರಕ್ಕೆ ₹39,29,215 ಆದಾಯ ಬಂದಿದೆ.
ತಾಲೂಕಿನಲ್ಲಿ ಒಟ್ಟು 21 ಕೆರೆಗಳನ್ನು ಮೀನು ಸಾಕಣೆಗೆ ಗುರುತಿಸಲಾಗಿದ್ದು, ಈ ಪೈಕಿ 19 ಕೆರೆಗಳಲ್ಲಿ ಮೀನು ಸಾಕಾಣಿಕೆ ನಡೆಯುತ್ತಿದೆ. ಈ ಕೆರೆಗಳಲ್ಲಿ ಸುಮಾರು 39 ಲಕ್ಷ ಮೀನು ಮರಿಗಳನ್ನು ಬಿಡಲಾಗಿದೆ ಎಂದು ಮೀನುಗಾರಿಕೆ ಇಲಾಖೆ ತಾಲೂಕು ಸಹಾಯಕ ನಿರ್ದೇಶಕಿ ಅಮೃತಾ ತಿಳಿಸಿದ್ದಾರೆ.
“ನೆಲಮಂಗಲ ಪಟ್ಟಣದ ಕೆರೆಯಲ್ಲಿನ ನೀರು ಮೀನು ಸಾಕಾಣಿಕೆಗೆ ಯೋಗ್ಯವಿಲ್ಲವೆಂದು ಮಾಲಿನ್ಯ ನಿಯಂತ್ರಣ ಮಂಡಳಿ ವರದಿ ನೀಡಿದೆ” ಎಂದು ಅವರು ಹೇಳಿದ್ದಾರೆ.
“2023-24ನೇ ಸಾಲಿನಲ್ಲಿ ಮೀನು ಸಾಕಾಣಿಕೆಯ ಕೆರೆಗಳ ನವೀಕರಣ ಏ.30ರೊಳಗೆ ಮಾಡಬೇಕಾಗಿದೆ. ನವೀಕರಣ ಮಾಡಲು ಈಗಾಗಲೇ ಮೀನುಗಾರರಿಗೆ ನೋಟಿಸ್ ನೀಡಲಾಗಿದೆ” ಎಂದರು.
ಈ ಸುದ್ದಿ ಓದಿದ್ದೀರಾ?: ರಾಯಚೂರು | ಕುಸ್ತಿಪಟುಗಳ ಹೋರಾಟಕ್ಕೆ ಎಐಡಿವೈಒ ಬೆಂಬಲ
2022-23ನೇ ಸಾಲಿನಲ್ಲಿ 19 ಕೆರೆಗಳ ಪೈಕಿ ದೇವರಹೊಸಹಳ್ಳಿ, ಹಳೇನಿಜಗಲ್, ಕುಲುವನಹಳ್ಳಿ, ಬಿದಲೂರು ಗಂಗಮ್ಮನ ಗುಡಿ, ಗೊಲ್ಲಹಳ್ಳಿ, ಟಿ.ಬೇಗೂರು, ಬರಧಿ, ಓಬಳಾಪುರ, ಶ್ರೀನಿವಾಸಪುರ, ದೊಡ್ದಬೆಲೆ ಕೋಣನಕೆ ಹಾಗೂ ಮರಳಕುಂಟೆ ಕೆರೆಗಳು ಈ ಟೆಂಡರ್ನಲ್ಲಿ ವಿಲೇವಾರಿ ಆಗಿದ್ದವು. ಬಿಲ್ಲಿನಕೋಟೆ, ಮದಗ, ನಿಡವಂದ, ತ್ಯಾಮಗೊಂಡ್ಲು ಹಿರೆಕೆರೆ, ಮಣ್ಣೇ ಅಮಾನಿಕೆರೆ ಮತ್ತು ಕಂಬಾಳು ಕೆರೆಗಳು ನವೀಕರಣದ ಮೂಲಕ ವಿಲೇವಾರಿಯಾಗಿವೆ ಎನ್ನಲಾಗಿದೆ.
ಕಳೆದ ಸಾಲಿನಲ್ಲಿ ಕುಲುವನಹಳ್ಳಿ ಕೆರೆ ಅತಿ ಹೆಚ್ಚು ₹13.50 ಲಕ್ಷಕ್ಕೆ ಹರಾಜಾಗಿದ್ದರೆ, ಹೊನ್ನರಾಯನಹಳ್ಳಿ ಕೆರೆ ₹9,480 ಕಡಿಮೆ ಮೊತ್ತಕ್ಕೆ ಹರಾಜಾಗಿತ್ತು ಎಂದು ತಿಳಿದುಬಂದಿದೆ.