ಬೀದರ್ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಪ್ರಾಣಿ ಪಕ್ಷಿಗಳಿಗೆ ಆಶ್ರಯ ಸೇರಿದಂತೆ ಆಹಾರ ಒದಗಿಸದ ಗಿಡಮರಗಳಿವೆ. ಇಂಥ ಅನುಪಯುಕ್ತ ಅರಣ್ಯ ಪ್ರದೇಶದಲ್ಲಿ ಭದ್ರವಾಗಿ ನೆಲೆಸಲು ಆಗದ ಕಾರಣ ಕಾಡುಪ್ರಾಣಿಗಳು ರೈತರ ಜಮೀನಿಗೆ ನುಗ್ಗಿ ಬೆಳೆ ನಾಶಪಡಿಸುತ್ತಿವೆ. ನಾಡಿನಲ್ಲಿ 5 ಕೋಟಿ ಸಸಿ ನೆಡುವ ಕಾರ್ಯಕ್ರಮದಲ್ಲಿ ಉಪಯುಕ್ತ ಗಿಡಮರಗಳು ನೆಡುವ ಮೂಲಕ ಪರಿಸರ ಸಂರಕ್ಷಣೆಗೆ ಅರಣ್ಯ ಇಲಾಖೆ ಮುಂದಾಗಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಕಾರ್ಯಕರ್ತರು ಆಗ್ರಹಿಸಿದರು.
ಬೀದರ್ ಜಿಲ್ಲೆಯ ಭಾಲ್ಕಿ ಪಟ್ಟಣದಲ್ಲಿ ಅರಣ್ಯ, ಪರಿಸರ ಮತ್ತು ಜೈವಿಕ ಖಾತೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರಿಗೆ ರೈತ ಸಂಘದ ಕಾರ್ಯಕರ್ತರು ಹಕ್ಕೊತ್ತಾಯ ಪತ್ರ ಸಲ್ಲಿಸಿದ್ದಾರೆ. “ಜಿಲ್ಲಾದ್ಯಂತ ಎಪ್ರಿಲ್-ಮೇ ತಿಂಗಳಲ್ಲಿ ಆಲಿಕಲ್ಲು ಮಳೆಯಿಂದಾಗಿ ತೋಟಗಾರಿಕೆ ಬೆಳೆಗಳು ಸಂಪೂರ್ಣ ನಾಶವಾಗಿವೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಕೃಷಿ ಮಾಡಿದ್ದ ರೈತರು ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ. ಕೂಡಲೇ ರೈತರಿಗೆ ಎನ್ಡಿಆರ್ಎಫ್ ಹಾಗೂ ಎಸ್ಡಿಆರ್ಎಫ್ನಿಂದ ಹೆಕ್ಟೇರ್ಗೆ 50 ಸಾವಿರ ರೂ. ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದರು.
ರೈತ ಸಂಘದ ಹಕ್ಕೊತ್ತಾಯಗಳು
- ಕಳೆದ ವರ್ಷ ಬೆಳೆ ನಷ್ಟದ ಪರಿಹಾರವನ್ನು ಅವೈಜ್ಞಾನಿಕವಾಗಿ ವಿತರಿಸಿ, ರೈತರಿಗೆ ವಂಚಿಸಿದ ವಿಮೆ ಕಂಪನಿಗಳನ್ನು ಕಪ್ಪು ಪಟ್ಟಿಗೆ ಸೇರಿಸಬೇಕು.
- ಹಿಂದಿನ ಸರ್ಕಾರದ ಅವಧಿಯಲ್ಲಿ ಒಂದು ಲಕ್ಷದವರೆಗೆ ಸಾಲ ಮನ್ನಾ ಮಾಡಲಾಗಿತ್ತು. ಆದರೆ, ಕೆಲವು ರೈತರ ಸಾಲ ಮನ್ನಾ ಆಗಲಿಲ್ಲ. ಹೀಗಾಗಿ ಅಂತ ರೈತರನ್ನು ಗುರುತಿಸಿ ಋಣ ಮುಕ್ತ ಮಾಡಬೇಕು.
- ರೈತರ ಬೆಳೆ ನಾಶಪಡಿಸುವ ಕಾಡುಪ್ರಾಣಿಗಳ ಹಾವಳಿಗೆ ಕಡಿವಾಣ ಹಾಕಬೇಕು. ಕಾಡು ಪ್ರಾಣಿಗಳಿಂದ ಹಾನಿಯಾದ ಬೆಳೆಗೆ ವೈಜ್ಞಾನಿಕ ಪರಿಹಾರ ನೀಡಬೇಕು. ಕಾಡುಪ್ರಾಣಿಗಳು ಅರಣ್ಯ ಪ್ರದೇಶದಲ್ಲಿ ವಾಸಿಸುವಂತೆ ಕ್ರಮ ಕೈಗೊಳ್ಳಬೇಕು.
- ರಾತ್ರಿ ಸಮಯದಲ್ಲಿ ರೈತರ ಹೊಲಗಳಿಗೆ ಪಂಪ್ಸೆಟ್ ಮೂಲಕ ನೀರು ಹರಿಸಲು ವಿದ್ಯುತ್ ಪೂರೈಕೆ ಮಾಡಬೇಕು.
- ಕಬ್ಬಿನ ಬಾಕಿ ಹಣ ಪಾವತಿಸಬೇಕು.
ಹಕ್ಕೊತ್ತಾಯ ಪತ್ರ ಸಲ್ಲಿಸುವ ವೇಳೆ ರೈತ ಸಂಘದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಸ್ವಾಮಿ, ನಾಗಶೆಟ್ಟಿ ಲಂಜವಾಡೆ, ವಿಠ್ಠಲರಾವ ಮೇತ್ರೆ, ರುದ್ರಯ್ಯ ಸ್ವಾಮಿ, ವಿಠ್ಠಲ ರೆಡ್ಡಿ, ಸಂತೋಷ್ ಗುದುಗೆ, ಶಿವು ಬಂಡೆ, ಬಸವರಾಜ ಅಷ್ಟೂರೆ, ಚಂದ್ರಶೇಖರ ಪಾಟೀಲ, ಸೋಮನಾಥ್ ಏಣಕುರ, ಓಂಪ್ರಕಾಶ್ ಖಂಡಾಳೆ, ರಾಜಕುಮಾರ್ ಬೇಲೂರ, ವಿಠ್ಠಲರಾವ ಆಣದೂರೆ, ಕಂಟೆಪ್ಪ ತರನಳ್ಳಿ, ಪ್ರಭು ಮೇತ್ರೆ ಕಾಶೆಪ್ಪ ಬೇಲೂರ, ವಿಜಯಕುಮಾರ್ ಬಾವುಗೆ ಇದ್ದರು.