ವೇಗವಾಗಿ ವಿಕಸನಗೊಳ್ಳುತ್ತಿರುವ ಜಗತ್ತಿನಲ್ಲಿ ಶಿಕ್ಷಕರು ಆಧುನಿಕ ಬೋಧನಾ ಅಭ್ಯಾಸಗಳನ್ನು ರೂಢಿಸಿಕೊಂಡು ಪರಿಣಾಮಕಾರಿ ಬೋಧನೆ ಮೂಲಕ ವಿದ್ಯಾರ್ಥಿಗಳಿಗೆ ಮೌಲ್ಯಯುತ ಶಿಕ್ಷಣ ನೀಡಲು ಪಣತೊಡಬೇಕು ಎಂದು ಧಾರವಾಡದ ಖ್ಯಾತ ವಾಗ್ಮಿ ಡಾ. ಮಹೇಶ ಮಾಶಾಳ ಹೇಳಿದರು.
ಔರಾದ ತಾಲೂಕಿನ ಸಂತಪೂರ ಗ್ರಾಮದ ಭಾರತ ಕಲ್ಯಾಣ ಮಂಟಪದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಔರಾದ, ರಾಜ್ಯ ಪ್ರೌಢ ಶಾಲಾ ಸಹ ಶಿಕ್ಷಕರ ಸಂಘ ಹಾಗೂ ಅನುದಾನ ರಹಿತ ಪ್ರಾಥಮಿಕ ಹಾಗೂ ಪ್ರೌಢ ಶಾಲೆ ಆಡಳಿತ ಮಂಡಳಿ ಸಂಘದ ಸಂಯುಕ್ತಾಶ್ರಯದಲ್ಲಿ ಶನಿವಾರ ಶಿಕ್ಷಕರಿಗೆ ಆಯೋಜಿಸಿದ ಒಂದು ದಿನದ ಕಾರ್ಯಗಾರದಲ್ಲಿ ಪರೀಕ್ಷಾ ಪಾವಿತ್ರತ್ಯೆ ಹಾಗೂ ವ್ಯಕ್ತಿತ್ವ ವಿಕಸನ ಕುರಿತು ಅವರು ವಿಶೇಷ ಉಪನ್ಯಾಸ ನೀಡಿದರು.
“ಶಿಕ್ಷಕರು ಬರೀ ಹುದ್ದೆಗಾಗಿ ಬೋಧಿಸದೆ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪಾಠ ಮಾಡಬೇಕು. ಮಕ್ಕಳ ಸಬಲೀಕರಣಕ್ಕೆ ಶಿಕ್ಷಕ ವೃತ್ತಿ ಅವಕಾಶವಾಗಿದೆ ಎಂದು ಅರ್ಥೈಸಿಕೊಂಡು ಕಲಿಕೆಯಲ್ಲಿ ಹೃದಯ ವೈಶಾಲತೆ ತೋರಬೇಕು. ಸಮಕಾಲೀನ ಸಮಾಜಕ್ಕೆ ಅನುಗುಣವಾಗಿ ಸುಂದರ ವಾತಾವರಣ ನಿರ್ಮಿಸಿ ಬೋಧಿಸಿದರೆ ಮಕ್ಕಳಲ್ಲಿ ಕೌಶಲ್ಯತೆ ಬೆಳೆಯಲು ಸಾಧ್ಯ. ಶಿಕ್ಷಕರು ಯಾವುದೇ ಜಾತಿ, ಧರ್ಮ ಹಾಗೂ ರಾಜಕೀಯ ಪಕ್ಷಗಳಿಗೆ ಅಂಟಿಕೊಳ್ಳದೆ ತಮ್ಮ ಕರ್ತವ್ಯ ನಿಭಾಯಿಸಬೇಕು” ಎಂದು ಸಲಹೆ ನೀಡಿದರು.
“ಮಗುವಿನೊಂದಿಗೆ ಮಗುವಿಗೆ ಬೋಧಿಸಿದರೆ ಮಕ್ಕಳ ನೆಚ್ಚಿನ ಶಿಕ್ಷಕರಾಗಬಹುದು. ಮಕ್ಕಳನ್ನು ಅಂಕಗಳಿಗೆ ಸೀಮಿತಗೊಳಿಸದೆ ನಾಡು, ನುಡಿ, ಸಂಸ್ಕೃತಿ, ಪರಿಸರ, ಆರೋಗ್ಯ ಜತೆಗೆ ಬದುಕಿನ ಸೌಂದರ್ಯ ಕುರಿತು ಮನವರಿಕೆ ಮಾಡಿಸುವುದು ಅಗತ್ಯವಿದೆ. ಎಷ್ಟೇ ಪ್ರಶಸ್ತಿ, ಸನ್ಮಾನ ಸ್ವೀಕರಿಸಿದರೂ ವಿದ್ಯಾರ್ಥಿಗಳ ನೆಚ್ಚಿನ ಶಿಕ್ಷಕರಾಗದಿದ್ದರೆ ವ್ಯರ್ಥವಾಗುತ್ತದೆ. ಶಿಸ್ತುಬದ್ಧ ಹಾಗೂ ನವೀನ ಬೋಧನಾ ವಿಧಾನ ಮೂಲಕ ಮಕ್ಕಳಲ್ಲಿ ಮಾನವೀಯ ಮೌಲ್ಯ ಮತ್ತು ಸಂಸ್ಕಾರ ಶಿಕ್ಷಣ ಒದಗಿಸಲು ಕಾರ್ಯಪ್ರವೃತರಾಗಬೇಕು” ಎಂದು ಉದಾಹರಣೆಗಳ ಮೂಲಕ ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಡಾ.ಚಂದ್ರಶೇಖರ ಪಾಟೀಲ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, “ತೆಲಂಗಾಣ ಹಾಗೂ ಮಹಾರಾಷ್ಟ್ರ ಗಡಿ ಹಂಚಿಕೊಂಡಿರುವ ಔರಾದ ಹಾಗೂ ಕಮಲನಗರ ತಾಲೂಕಿನ ಮಕ್ಕಳು ತುಂಬಾ ಪ್ರತಿಭಾವಂತರಿದ್ದಾರೆ. ವಿದ್ಯಾರ್ಥಿಗಳು ಕಷ್ಟಪಟ್ಟು ಅಧ್ಯಯನ ನಡೆಸಿದರೆ ಯಶಸ್ಸು ಸಾಧ್ಯ, ಈ ನಿಟ್ಟಿನಲ್ಲಿ ಎಲ್ಲರೂ ಒಗ್ಗೂಡಿ ಮಕ್ಕಳ ಫಲಿತಾಂಶ ಹೆಚ್ಚಿಸಲು ಪ್ರಯತ್ನಿಸೋಣ” ಎಂದರು.
“ಖಾಸಗಿ ಶಾಲೆಗಳೊಂದಿಗೆ ಪೈಪೋಟಿ ನಡೆಸಬೇಕಾದ ಇಂದಿನ ಸರ್ಕಾರಿ ಶಾಲೆಗಳಲ್ಲಿ ಅನೇಕ ಸಮಸ್ಯೆಗಳಿವೆ. ಶಿಕ್ಷಕರ ಯಾವುದೇ ಸಮಸ್ಯೆಗಳಿದ್ದರೂ ಬಗೆಹರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುವೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | 3,000 ರೂ. ಲಂಚಕ್ಕೆ ಬೇಡಿಕೆ; ಲೋಕಾಯುಕ್ತ ಬಲೆಗೆ ಗ್ರಾ.ಪಂ. ಬಿಲ್ ಕಲೆಕ್ಟರ್
ಕಾರ್ಯಕ್ರಮದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಸಲೀಂ ಪಾಶಾ, ಔರಾದ ಕ್ಷೇತ್ರ ಶಿಕ್ಷಣಾಧಿಕಾರಿ ಮಹಮ್ಮದ್ ಮಕ್ಷೂದ್, ಡಯಟ್ ಉಪನ್ಯಾಸಕ ಲಕ್ಷ್ಮಣ ತುರೆ, ಪರೀಕ್ಷಾ ನೋಂದಣಿ ಅಧಿಕಾರಿ ಈಶ್ವರ ಕ್ಯಾದೆ, ಪ್ರಾ.ಶಾ.ಶಿ.ಸಂ. ಜಿಲ್ಲಾ ಉಪಾಧ್ಯಕ್ಷ ಪಂಡರಿ ಅಡೆ, ಪ್ರೌ.ಶಾ.ಶಿ.ಸಂ. ಜಿಲ್ಲಾ ಗೌರವಾಧ್ಯಕ್ಷ ಮಹಾದೇವ ಚಿಟಗಿರೆ ಸೇರಿದಂತೆ ಪ್ರಮುಖರಾದ ಶಿವಾಜಿರಾವ ಪಾಟೀಲ್, ವಿಶ್ವನಾಥ ಪಾಟೀಲ್, ಸಂಜುಕುಮಾರ ಶೆಟಕಾರ್, ರಾಜಕುಮಾರ್ ಡೊಂಗ್ರೆ, ಗುರುನಾಥ ದೇಶಮುಖ, ಕೃಷ್ಣ ಪಾಟೀಲ್ ಸೇರಿದಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳು, ಖಾಸಗಿ ಶಿಕ್ಷಣ ಆಡಳಿತ ಮಂಡಳಿ ಮುಖ್ಯಸ್ಥರು ಮತ್ತು ಔರಾದ, ಕಮಲನಗರ ತಾಲೂಕಿನ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲೆಯ ನೂರಾರು ಶಿಕ್ಷಕರು ಹಾಜರಿದ್ದರು.