ಲೋಕಸಭಾ ಚುನಾವಣೆಯನ್ನು ನೆನಪಿನಲ್ಲಿಟ್ಟುಕೊಂಡು ಟಿ.ಬಿ ಜಯಚಂದ್ರ ಅವರಿಗೆ ಮಂತ್ರಿಗಿರಿ ನೀಡಬೇಕು ಎಂದು ಒತ್ತಾಯಿಸಿ ಕುಂಚಿಟಿಗರ ಕ್ಷೇಮಾಭಿವೃದ್ಧಿ ಸಂಘ ಮತ್ತು ಕರ್ನಾಟಕ ರಾಜ್ಯ ಕುಂಚಿಟಿಗರ ಒಕ್ಕೂಟದ ಮುಖಂಡರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮನವಿ ಮಾಡಿದ್ದಾರೆ.
“ಚಿತ್ರದುರ್ಗ ಲೋಕಸಭಾ ವ್ಯಾಪ್ತಿಯ ಶಿರಾ, ಪಾವಗಡ, ಚಳ್ಳಕೆರೆ, ಹಿರಿಯೂರು, ಚಿತ್ರದುರ್ಗ, ಹೊಸದುರ್ಗ, ಹೊಳಲ್ಕೆರೆ ತಾಲೂಕಿನಲ್ಲಿ ಕುಂಚಿಟಿಗರು ನಿರ್ಣಾಯಕ ಮತದಾರರಾಗಿದ್ದಾರೆ. ಹಾಗಾಗಿ ಲೋಕಸಭಾ ಚುನಾವಣೆ ಮುಂದಿಟ್ಟುಕೊಂಡು ಕುಂಚಿಟಿಗರ ಏಕೈಕ ಶಾಸಕ, ಕಾನೂನು ಪದವೀಧರ ಟಿ.ಬಿ ಜಯಚಂದ್ರ ಅವರಿಗೆ ಕುಂಚಿಟಿಗರ ಕೋಟಾದಲ್ಲಿ ಮಂತ್ರಿ ಸ್ಥಾನ ನೀಡಬೇಕು” ಎಂದು ಆಗ್ರಹಿಸಿದರು.
“ಕಳೆದ 26 ವರ್ಷಗಳಿಂದ ಕುಂಚಿಟಿಗರಿಗೆ ಕೇಂದ್ರ ಒಬಿಸಿ ಮೀಸಲಾತಿ ಕೈತಪ್ಪಿದ್ದು, ಶೈಕ್ಷಣಿಕವಾಗಿ, ಔದ್ಯೋಗಿಕವಾಗಿ ಸಾಮಾಜಿಕವಾಗಿ ತುಂಬಲಾರದ ನಷ್ಟ ಉಂಟಾಗಿದೆ. ರಾಜಕೀಯವಾಗಿ ಕುಂಚಿಟಿಗರನ್ನು ಬಳಸಿಕೊಂಡು ಈ ರೀತಿ ನಂಬಿಕೆದ್ರೋಹ ಮಾಡಿದರೆ ಮುಂದಿನ ವರ್ಷದ ಲೋಕಸಭಾ ಚುನಾವಣೆಯಲ್ಲಿ ಕುಂಚಿಟಿಗರು ಇದಕ್ಕೆ ತಕ್ಕ ಉತ್ತರ ನೀಡಲಿದ್ದಾರೆ” ಎಂದು ಎಚ್ಚರಿಸಿದರು.
“ಒಕ್ಕಲಿಗ ಕೋಟಾದಲ್ಲಿ ಒಬ್ಬರಿಗೆ ಕಡಿಮೆ ಮಾಡಿ ಜಾತಿ ಸಮೀಕರಣ ಮತ್ತು ಸಾಮಾಜಿಕ ನ್ಯಾಯದಡಿ ಕುಂಚಿಟಿಗರಿಗೆ ಒಂದು ಸಚಿವ ಸ್ಥಾನ ನೀಡಬೇಕು ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರಿಗೆ ಒತ್ತಾಯಿಸಿದ್ದಾರೆ.
“ದಕ್ಷಿಣ ಭಾರತದಲ್ಲಿ ಕುಂಚಿಟಿಗರ ಏಕೀಕರಣ ಮತ್ತು ಧೃವೀಕರಣ ಹೋರಾಟ ನಡೆಯುತ್ತಿದೆ. ಕರ್ನಾಟಕದ 18 ಜಿಲ್ಲೆ 46 ತಾಲೂಕುಗಳ ಪೈಕಿ 25 ಲಕ್ಷಕ್ಕೂ ಅತ್ಯಧಿಕ ಸಂಖ್ಯೆಯಲ್ಲಿ ಕುಂಚಿಟಿಗರಿದ್ದೇವೆ. ತಮಿಳುನಾಡಿನಲ್ಲಿ 30 ಲಕ್ಷ, ಆಂಧ್ರಪ್ರದೇಶದಲ್ಲಿ 5 ಲಕ್ಷ ಕುಂಚಿಟಿಗರಿದ್ದು, ಕೇರಳ, ಮಹಾರಾಷ್ಟ್ರ, ಒರಿಸ್ಸಾ ರಾಜ್ಯಗಳಲ್ಲಿ ಹರಿದು ಹಂಚಿಹೋಗಿದ್ದಾರೆ” ಎಂದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಬ್ರಿಜ್ ಭೂಷಣ್ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ
“ಕಾಂಗ್ರೆಸ್ ಸರ್ಕಾರ ಕುಂಚಿಟಿಗರಿಗೆ ಸೂಕ್ತ ಪ್ರಾತಿನಿಧ್ಯ ಕೊಡದಿದ್ದರೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಹುತೇಕ ಸ್ವಾಭಿಮಾನಿ ಕುಂಚಿಟಿಗರು ಕೈತಪ್ಪಿ ಹೋಗಲಿದ್ದಾರೆ” ಎಂದು ತಿಳಿಸಿದರು.
ಈ ಸಭೆಯಲ್ಲಿ ಕಸವನಹಳ್ಳಿ ರಮೇಶ್, ಎಸ್ ವಿ ರಂಗನಾಥ್, ಹುಲಿ ರಂಗನಾಥ್, ಜೋಗೇಶ್ ಚಂದ್ರಗಿರಿ, ಅವಿನಾಶ್ ಗಿರಿಸ್ವಾಮಿ, ಅಶೋಕ್, ನರೇಂದ್ರಪ್ಪ, ಜಯಪ್ರಕಾಶ್, ರಂಗಸ್ವಾಮಿ, ಪೆಪ್ಸಿ ಹನುಮಂತರಾಯ, ಚಿದಾನಂದಪ್ಪ, ಜಯರಾಮಯ್ಯ, ಧನಂಜಯ ಸೇರಿದಂತೆ ಇತರರು ಇದ್ದರು.