ಚಿತ್ರದುರ್ಗದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಯುವ ಜನರಿಗೆ ಹತ್ತು ದಿನಗಳ ಉದ್ಯಮಶೀಲತಾಭಿವೃದ್ಧಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಜಿಲ್ಲಾ ಕೈಗಾರಿಕ ಕೇಂದ್ರದಲ್ಲಿ ಇರುವ ಯೋಜನೆಗಳ ಬಗ್ಗೆ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಬಿ.ಆನಂದ್ ಮಾಹಿತಿ ನೀಡಿದರು.
ಚಿತ್ರದುರ್ಗ ನಗರದ ಜಿಲ್ಲಾ ಕೈಗಾರಿಕಾ ಕೇಂದ್ರದ ಸಭಾಂಗಣದಲ್ಲಿ ಸಮಾಜ ಕಲ್ಯಾಣ ಇಲಾಖೆ, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ‘ಹಾಗೂ ಜೀವನೋಪಾಯ ಇಲಾಖೆ, ಕರ್ನಾಟಕ ಉದ್ಯಮಶೀಲತಾಭಿವೃದ್ಧಿ ಕೇಂದ್ರ (ಸಿಡಾಕ್) ಮತ್ತು ಜಿಲ್ಲಾ ಕೈಗಾರಿಕ ಕೇಂದ್ರ ಇವರ ಸಂಯುಕ್ತಾಶ್ರಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಯುವ ಜನರಿಗೆ ಹತ್ತು ದಿನಗಳ ಉದ್ಯಮಶೀಲತಾಭಿವೃದ್ಧಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಣ್ಣ ಸಣ್ಣ ಪ್ರಮಾಣದ ಉದ್ಯಮಗಳಿಂದ ಉದ್ಯೋಗ ಸೃಷ್ಟಿಯಾಗಿದೆ ಎಂದು ತಿಳಿಸಿದ ಅವರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗಾಗಿ ಸಿಡಾಕ್ ಸಂಸ್ಥೆಯು ಉದ್ಯಮಶೀಲತೆ ಕಾರ್ಯಕ್ರಮಗಳನ್ನು ನಿರಂತರವಾಗಿ ಸಂಘಟಿಸುತ್ತಿರುವುದಕ್ಕೆ ಅಭಿನಂದಿಸಿದರು.
ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಜಗದೀಶ್ ಹೆಬ್ಬಳ್ಳಿ ಮಾತನಾಡಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳ ಅಭಿವೃದ್ಧಿಗಾಗಿ ಸಮಾಜ ಕಲ್ಯಾಣ ಇಲಾಖೆ ಇರುವಂತದ್ದು. ಆದುದರಿಂದ ಎಲ್ಲಾ ಶಿಬಿರಾರ್ಥಿಗಳು ಆಸಕ್ತಿಯಿಂದ ಭಾಗವಹಿಸಿ ತರಬೇತಿಯ ಪ್ರಯೋಜನ ಪಡೆದುಕೊಂಡು ತಮ್ಮ ಸುತ್ತಮುತ್ತಲಿರುವವರೆಗೂ ಉದ್ಯೋಗವನ್ನು ನೀಡುವಂತೆ ನೀವು ಎಂದು ತಿಳಿಸಿದ ಅವರು, ಶಿಬಿರಾರ್ಥಿಗಳು ಯಶಸ್ವಿ ಶುಭ ಸಂಸ್ಥೆಯ ಉದ್ಯಮಿಗಳಾಗುವಂತೆ ಹಾರೈಸಿದರು.
ಜಂಟಿ ನಿರ್ದೇಶಕ ಆರ್.ಪಿ. ಪಾಟೀಲ್ ಮಾತನಾಡಿ, ಸಿಡಾಕ್ ಸಂಸ್ಥೆ ಉದ್ಯಮಶೀಲತೆಯು ಹುಟ್ಟಿನಿಂದ ಮಾತ್ರ ಬರಬೇಕಾಗಿಲ್ಲ. ತರಬೇತಿಯ ಮೂಲಕ ಸಾಮಾನ್ಯ ಜನರಲ್ಲೂ ಉದ್ಯಮಶೀಲತೆಯನ್ನು ಉದ್ದೀಪನೆಗೊಳಿಸಬಹುದು ಎಂಬ ತತ್ವದೊಂದಿಗೆ ಕಾರ್ಯನಿರ್ವಹಿಸುತ್ತಿದೆ. ಭಾರತ ದೇಶದಲ್ಲಿ ನಿರುದ್ಯೋಗ ಸಮಸ್ಯೆ ನಿವಾರಣೆಗಾಗಿ (ಇಂದಿನ ಯುವಜನತೆ ಸ್ವಯಂ ಉದ್ಯಮವನ್ನು ಸ್ಥಾಪಿಸಲು) ಸ್ವಯಂ ಉದ್ಯಮ ಸ್ಥಾಪನೆ ಪರಿಹಾರವಾಗಬಹುದೆಂದು ತರಹದ ತರಬೇತಿ ಕಾರ್ಯಕ್ರಮಗಳನ್ನು ಪ್ರಾಯೋಜಿಸುತ್ತದೆ ಎಂದರು.
ಹತ್ತು ದಿನಗಳ ಉದ್ಯಮಶೀಲತಾಭಿವೃದ್ಧಿ ತರಬೇತಿ ಕಾರ್ಯಕ್ರಮದಲ್ಲಿ ಪರಿಣಿತ ಅತಿಥಿ ಭೋದಕರುಗಳಿಂದ ಶಿಬಿರಾರ್ಥಿಗಳಿಗೆ ಉದ್ಯಮಶೀಲರ ಗುಣಲಕ್ಷಣಗಳು, ಸಾಮಾನ್ಯ ವ್ಯಕ್ತಿಯಿಂದ ಉದ್ಯಮಶೀಲ ವ್ಯಕ್ತಿಯಾಗಿ ಪರಿವರ್ತನೆಯಾಗಲು ಸಾಧನಾ ಪ್ರೇರಣ ತರಬೇತಿ, ಉದ್ಯಮ ಸ್ಥಾಪಿಸಲು ಅನುಸರಿಸಬೇಕಾದ ಮಜಲುಗಳು, ಉದ್ಯಮಾವಕಾಶಗಳ ಮಾಹಿತಿ, ಉದ್ಯಮ ಆಯ್ಕೆಯ ವಿಧಾನ, ಹಣಕಾಸು ನಿರ್ವಹಣೆ, ಮಾರುಕಟ್ಟೆ ನಿರ್ವಹಣೆ, ಲೆಕ್ಕಪತ್ರ ನಿರ್ವಹಣೆ, ಸಣ್ಣ ಉದ್ಯಮ ನಿರ್ವಹಣೆ ಇರುವ ಉದ್ಯಮಾವಕಾಶಗಳ ಮಾಹಿತಿ, ಸರ್ಕಾರದ ವಿವಿಧ ಇಲಾಖೆಗಳಲ್ಲಿ ಸ್ವಯಂ ಉದ್ಯಮ ಸ್ಥಾಪಿಸಲು ಸಹಕರಿಸುವ ಯೋಜನೆಗಳ ಮಾಹಿತಿ, ಸಮರ್ಪಕ ಮಾಹಿತಿಗಾಗಿ ಸಂಪರ್ಕಿಸಬೇಕಾದ ಇಲಾಖೆಗಳ ಮಾಹಿತಿ ನೀಡಲಿದ್ದಾರೆ ಎಂದು ತಿಳಿಸಿದರು.
ಈ ತರಬೇತಿಯಲ್ಲಿ ಆಸಕ್ತಿಯಿಂದ ಭಾಗವಹಿಸಿ ಸದುಪಯೋಗ ಪಡಿಸಿಕೊಳ್ಳಿ ಎಂದು ತಿಳಿಸುತ್ತಾ ನಿಮ್ಮ ಜೀವನದಲ್ಲಿ ಕಂಡ ಕನಸುಗಳು ನನಸಾಗಲಿ, ನೀವು ಯಶಸ್ವಿ ಉದ್ಯಮಶೀಲರಾಗಿ, ಆರ್ಥಿಕವಾಗಿ ಸಬಲರಾಗಿ ರಾಷ್ಟ್ರದ ಆರ್ಥಿಕತೆಗೆ ಕೊಡುವಂತಾಗಲಿ ಎಂದು ಹಾರೈಸಿದರು.
ಮುಕುಂದಪ್ಪ ಕಾವ್ಯ ಸೌಜನ್ಯ, ಸುರೇಶ್ ಕುಮಾರ್, ಹಾವೇರಿಯ ಸಿಡಾಕ್ ತರಬೇತುದಾರ ಶಿವಾನಂದ ತಳವಾರ್, ಶಿಬಿರಾರ್ಥಿಗಳು ಭಾಗವಹಿಸಿದ್ದರು.