ಜೈನಮುನಿ ಹತ್ಯೆಗೈದ ಹಂತಕರಿಗೆ ಕಾನೂನಿನ ಚೌಕಟ್ಟಿನಲ್ಲಿ ಅತ್ಯಂತ ಕಠಿಣ ಶಿಕ್ಷೆ ವಿಧಿಸಬೇಕೆಂದು ಮಹಾವೀರ ಸಂಘದ ಕಾರ್ಯಕರ್ತರು ಮತ್ತು ಜೈನ ಸಮುದಾಯದ ಮುಖಂಡರು ಒತ್ತಾಯಿಸಿದ್ದಾರೆ. ದಾವಣಗೆರೆಯಲ್ಲಿ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು ಜಿಲ್ಲಾಧಿಕಾರಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದ್ದಾರೆ.
ಪ್ರತಿಭಟನೆಯಲ್ಲಿ ಮಾತನಾಡಿದ ಸಂಘದ ಮುಖಂಡ ಗೌತಮ್ ಜೈನ್, “ಬೆಳಗಾವಿ ಜಿಲ್ಲೆಯ ಹಿರೇಕೊಡಿ ಗ್ರಾಮದ ‘ನಂದಿ ಪರ್ವತ’ ಆಶ್ರಮದಲ್ಲಿ ದಿಗಂಬರ ಜೈನ ಮುನಿಗ ಕಾಮಕುಮಾರ ನಂದಿ ಮಹಾರಾಜರನ್ನು ಅಪಹರಿಸಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಅತ್ಯಂತ ಹಿಂಸಾತ್ಮಕ ರೀತಿಯಲ್ಲಿ ಮುನಿಗಳ ದೇಹವನ್ನು ವಿಕೃತಗೊಳಿಸಿ ಕೊಲೆ ಮಾಡಿರುವುದು ಅತ್ಯಂತ ಖಂಡನೀಯ. ಇಂತಹ ಕೃತ್ಯವನ್ನು ಸಮಾಜ ಖಂಡಿಸುತ್ತದೆ” ಎಂದು ಹೇಳಿದ್ದಾರೆ.
“ಕೃತ್ಯ ಎಸಗಿದ ಹಂತಕರನ್ನು ಬಂಧಿಸಿರುವ ಪೊಲೀಸರು, ತನಿಖೆಯನ್ನು ಮುಂದುವರಿಸಿದ್ದಾರೆ. ಮುಂದಿನ ಕ್ರಮಕ್ಕಾಗಿ ಹಲವಾರು ಜಾಗರೂಕತೆಯನ್ನು ಕಾಪಾಡಿಕೊಂಡು ತನಿಖೆಯ ಕಾರ್ಯಾಚರಣೆ ಮುಂದುವರಿಸಬೇಕು. ಹಂತಕರಿಗೆ ಕಠಿಣಶಿಕ್ಷೆ ವಿಧಿಸಬೇಕು” ಎಂದು ಆಗ್ರಹಿಸಿದ್ದಾರೆ.
“ಜೈನ ಧರ್ಮದ ಮುನಿ, ಸಾಧುಸಂತರ ಮೇಲೆ ಇಂತಹ ಅಹಿತಕರ ಘಟನೆಗಳು ನಡೆಯದಂತೆ ತಡೆಯಬೇಕು. ಸೂಕ್ತ ಮುಂಜಾಗರೂಕತಾ ಕ್ರಮಗಳನ್ನು ಕೈಗೊಂಡು ಕಾನೂನು ಸುವ್ಯವಸ್ಥೆ ಕಾಪಾಡಬೇಕು” ಎಂದು ಒತ್ತಾಯಿಸಿದ್ದಾರೆ.
ಪ್ರತಿಭಟನೆಯಲ್ಲಿ ಸಂಘದ ಅಧ್ಯಕ್ಷ ಅಜಿತ್ ಕುಮಾರ್, ಬಿ.ಎಸ್ ಸುನಿಲ್ ಕುಮಾರ್. ಸುದರ್ಶನ್ ಕುಮಾರ್, ಜಿನದತ್ತ ಎಸ್.ಟಿ ಟಾಕಪ್ಪ ಎಸ್.ಕೆ, ದೇವೆಂದ್ರಪ್ಪ, ಧನ್ಯಕುಮಾರ್, ಆದಿನಾಥ್, ಸುರೇಶ್ ಕುಮಾರ್, ನೇಮಿರಾಜ್ ಚಂದ್ರಪ್ರಭು ಸೇರಿದಂತೆ ಜೈನ ಸಮಾಜ ಬಾಂಧವರು ಉಪಸ್ಥಿತರಿದ್ದರು.