- ಆಂತರಿಕ ರಾಜಕಾರಣಕ್ಕೆ ಬೇಸತ್ತು ಬಾಲಿವುಡ್ ತೊರೆದಿದ್ದ ಪ್ರಿಯಾಂಕಾ
- ಪ್ರತಿಭೆಯ ಆಧಾರದ ಮೇಲೆ ಅವಕಾಶ ಸಿಗಬೇಕು ಎಂದ ಸ್ಟಾರ್ ನಟಿ
ಇತ್ತೀಚೆಗೆ ಸಂದರ್ಶನವೊಂದರಲ್ಲಿ ತಾವು ಬಾಲಿವುಡ್ ತೊರೆದ ಬಗ್ಗೆ ಮಾತನಾಡಿ ಸುದ್ದಿಯಾಗಿದ್ದ ಪ್ರಿಯಾಂಕಾ ಚೋಪ್ರಾ ಸದ್ಯ ʼಸಿಟಾಡೆಲ್ʼ ವೆಬ್ ಸರಣಿಯ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದು, ಇದೇ ವೇಳೆ ಬಾಲಿವುಡ್ನಲ್ಲಿ ಆಗಬೇಕಿರುವ ಸುಧಾರಣೆಗಳ ಬಗ್ಗೆ ಚರ್ಚಿಸಿದ್ದಾರೆ.
ರಾಷ್ಟ್ರೀಯ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಬಾಲಿವುಡ್ ಮಂದಿಯ ಆಂತರಿಕ ರಾಜಕಾರಣ ಬಗ್ಗೆ ಪ್ರಿಯಾಂಕಾ ಚೋಪ್ರಾ ಮುಕ್ತವಾಗಿ ಮಾತನಾಡಿದ್ದಾರೆ. “ಕಲಾವಿದರ ಪ್ರತಿಭೆ ಮತ್ತು ಬಾಲಿವುಡ್ನಲ್ಲಿ ಅವರಿಗೆ ಸಿಗುವ ಅವಕಾಶಗಳ ಕುರಿತು ಮಾತನಾಡುವ ಅಗತ್ಯವಿದೆ. ಒಟಿಟಿ ವೇದಿಕೆಗಳು ಜನಪ್ರಿಯಗೊಂಡಿರುವ ಇವತ್ತಿನ ಕಾಲಘಟ್ಟದಲ್ಲಿ ಕಲಾವಿದರಿಗೆ ಹೆಚ್ಚಿನ ಅವಕಾಶಗಳು ದೊರೆಯುತ್ತಿವೆ. ಚಿತ್ರರಂಗದ ಯಾವುದೇ ಹಿನ್ನೆಲೆ ಇರದ ಹೊರಗಿನ ಪ್ರತಿಭೆಗಳು ಕೂಡ ಹೆಚ್ಚಾಗಿ ಕಾಣ ಸಿಗುತ್ತಿರುವುದು ಖುಷಿಯ ಸಂಗತಿ. ಆದರೆ, ನಾವು ಬಾಲಿವುಡ್ ಪ್ರವೇಶಿಸಿದ ಕಾಲದಲ್ಲಿ ಹೀಗಿರಲಿಲ್ಲ. ಸಿನಿಮಾಗಳಿಗೆ ಕಲಾವಿದರನ್ನು ಆಯ್ಕೆ ಮಾಡುವ ಪ್ರಕ್ರಿಯೆಯ ಹಿಂದೆ ರಾಜಕಾರಣವೇ ನಡೆಯುತ್ತಿತ್ತು. ಕಲಾವಿದರ ಆಯ್ಕೆಯ ತೀರ್ಮಾನ ನಿರ್ದೇಶಕರದ್ದಾಗಿರಬೇಕೇ ಹೊರತು ಅದರ ಹಿಂದೆ ರಾಜಕಾರಣ ಇರಬಾರದು. ಪ್ರತಿಭೆಯ ಆಧಾರದ ಮೇಲೆ ಕಲಾವಿದರ ಆಯ್ಕೆ ಪ್ರಕ್ರಿಯೆ ನಡೆಯಬೇಕು. ಇವತ್ತಿಗೂ ಬಾಲಿವುಡ್ನಲ್ಲಿ ಆಂತರಿಕ ರಾಜಕಾರಣ ಚಾಲ್ತಿಯಲ್ಲಿದೆ. ಅದನ್ನು ಮಟ್ಟ ಹಾಕದ ಹೊರತು ಹೊಸ ಮುಖಗಳಿಗೆ ಇನ್ನಷ್ಟು ಹೆಚ್ಚು ಅವಕಾಶ ಸಿಗುವುದಿಲ್ಲ” ಎಂದಿದ್ದಾರೆ.
ಕೆಲ ದಿನಗಳ ಹಿಂದೆ ಅಮೆರಿಕದ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ್ದ ಪ್ರಿಯಾಂಕಾ, ತಾವು ಬಾಲಿವುಡ್ ತೊರೆದಿದ್ದರ ಬಗ್ಗೆ ಮಾತನಾಡಿದ್ದರು. “ಬಾಲಿವುಡ್ನಲ್ಲಿ ನನ್ನನ್ನು ತುಳಿಯುವ ಪ್ರಯತ್ನಗಳು ನಡೆದವು. ಆಂತರಿಕ ರಾಜಕಾರಣದಿಂದಾಗಿ ಹಲವು ಸಿನಿಮಾ ಅವಕಾಶಗಳು ಕೈತಪ್ಪಿದವು. ಕೆಲವರ ಜೊತೆಗೆ ಮನಸ್ತಾಪಗಳೂ ಆದವು. ಈ ರೀತಿಯ ಕೀಳುಮಟ್ಟದ ರಾಜಕಾರಣದಿಂದ ದೂರ ಉಳಿಯಲು ನಿರ್ಧರಿಸಿ ಬಾಲಿವುಡ್ನಿಂದ ಹೊರಬಂದೆ” ಎಂದಿದ್ದರು.
ಈ ಸುದ್ದಿ ಓದಿದ್ದೀರಾ? ನಟ ಚೇತನ್ ವೀಸಾ ರದ್ದು: ಸರ್ಕಾರದ ಅತಿರೇಕ ಎಂದ ಕಿಶೋರ್
ಪ್ರಿಯಾಂಕಾ ಚೋಪ್ರಾ ಪ್ರಮುಖ ಪಾತ್ರದಲ್ಲಿ ನಟಿಸಿರುವ ʼಸಿಟಾಡೆಲ್ʼ ವೆಬ್ ಸರಣಿ ಏಪ್ರಿಲ್ 28ರಂದು ʼಅಮೆಜಾನ್ ಪ್ರೈಂʼ ಒಟಿಟಿ ವೇದಿಕೆಯಲ್ಲಿ ಬಿಡುಗಡೆಯಾಗಲಿದೆ. ಹಾಲಿವುಡ್ನ ಖ್ಯಾತ ನಟ ರಿಚರ್ಡ್ ಮ್ಯಾಡನ್ ಈ ಸರಣಿಯಲ್ಲಿ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.