- ಒಬ್ಬ ರೈತನಿಂದ 20 ಕ್ವಿಂಟಲ್ ರಾಗಿ ಖರೀದಿ ಮಾಡಿದೆ
- ಎರಡು ದಿನಗಳಲ್ಲಿ ನೀಡದಿದ್ದಲ್ಲಿ ಕಚೇರಿಗೆ ಮುತ್ತಿಗೆ
ಬೆಂಬಲ ಬೆಲೆ ಯೋಜನೆಯಡಿ ಸರ್ಕಾರ ರಾಗಿ ಖರೀದಿಸಿ ತಿಂಗಳುಗಳೇ ಕಳೆದಿದ್ದರು ಇನ್ನೂ ಹಣ ಬಂದಿಲ್ಲ. ರಾಗಿ ನೀಡಿದ ನಂತರ ನೀಡುವ ವೋಚರ್ (ರಾಗಿ ಮಾರಾಟದ ಬಿಲ್ ಹಣದ ವಿವರ) ಬದಲಿಗೆ ಬಿಳಿ ಹಾಳೆಯಲ್ಲಿ ಮಾಹಿತಿ ಬರೆದಿದ್ದಾರೆ ಎಂದು ರೈತ ಸಂಘದ ಹೊಸದುರ್ಗ ತಾಲೂಕಿನ ಗೌರವಾಧ್ಯಕ್ಷ ಮಹೇಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಬಲ ಬೆಲೆಯಲ್ಲಿ ಸರ್ಕಾರ ಒಬ್ಬ ರೈತನಿಂದ 20 ಕ್ವಿಂಟಲ್ ರಾಗಿ ಖರೀದಿ ಮಾಡಿದೆ. ಖರೀದಿಯಾಗಿ ಒಂದೆರಡು ದಿನದಲ್ಲಿ ಗ್ರೆನ್ ವೋಚರ್ ನೀಡುವ ಬದಲಾಗಿ ಕೆಲ ರೈತರಿಗೆ ಖಾಲಿ ಹಾಳೆಯಲ್ಲಿ ವಿವರ ಬರೆದು ಕೊಟ್ಟಿದ್ದಾರೆ. ಗ್ರೆನ್ ವೋಚರ್ ಇಲ್ಲದಿದ್ದರೆ, ನಾವು ರಾಗಿ ಮಾರಾಟ ಮಾಡಿದ್ದಕ್ಕೆ ಖಾತ್ರಿಯೇ ಇಲ್ಲದಂತಾಗುತ್ತದೆ. ಸಾಲದ್ದಕ್ಕೆ ಒಂದು ಕ್ವಿಂಟಲ್ ರಾಗಿಗೆ 4 ಕೆ.ಜಿ ರಾಗಿಯನ್ನು ಹೆಚ್ಚುವರಿಯಾಗಿ ಪಡೆದಿದ್ದಾರೆ ಎಂದು ಆರೋಪಿಸಿದ್ದಾರೆ.
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಿಲ್ಲಾ ವ್ಯವಸ್ಥಾಪಕ ಕೆ ಆರ್ ಶಿವಕುಮಾರ ಅವರು ತುಮಕೂರಿಗೆ ವರ್ಗಾವಣೆ ಯಾಗಲಿದ್ದಾರೆ. ಹೊಸದುರ್ಗದ ರೈತರಿಗೆ ರಾಗಿ ಖರೀದಿ ಹಣ ಒದಗಿಸಿ ನಂತರ ಅವರು ವರ್ಗಾವಣೆಯಾಗಲಿ. ಮುಂಗಾರು ಸಮಯವಾದರೂ ರಾಗಿ ಹಣ ಬಂದಿಲ್ಲ. ಇದರಿಂದ ಉಳುಮೆಗೆ, ಮಕ್ಕಳ ವಿದ್ಯಾಭ್ಯಾಸ ಸೇರಿದಂತೆ ಹಲವು ಕಾರ್ಯಗಳಿಗೆ ಹಣಕಾಸಿನ ತೊಡಕು ಉಂಟಾಗಿದೆ. ಖಾಸಗಿ ದಲ್ಲಾಳಿಗಳಿಗೆ ರಾಗಿ ನೀಡಿದ್ದರೂ ಇಷ್ಟರಲ್ಲಾಗಲೇ ಹಣ ಸಿಗುತ್ತಿತ್ತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ರಾಗಿ ಖರೀದಿಯ ಅನುಸಾರ ಇನ್ನೆರಡು ದಿನಗಳಲ್ಲಿ ಗ್ರೆನ್ ವೋಚರ್ ನೀಡದಿದ್ದಲ್ಲಿ, ಜಿಲ್ಲಾ ವ್ಯವಸ್ಥಾಪಕರ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸುವುದಾಗಿ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಎಚ್ಚರಿಕೆ ನೀಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಹಾಲಿನ ದರ ಕಡಿತ ಮಾಡದಂತೆ ಕೆಎಂಎಫ್ಗೆ ಸೂಚನೆ
ಈ ಬಗ್ಗೆ ಆಹಾರ ನಾಗರಿಕ ಸರಬರಾಜು ಇಲಾಖೆ ಜಿಲ್ಲಾ ವ್ಯವಸ್ಥಾಪಕ ಕೆ ಆರ್ ಶಿವಕುಮಾರ ಪ್ರತಿಕ್ರೀಯಿಸಿದ್ದು, ಮಾರ್ಚ್ ತಿಂಗಳಲ್ಲಿ ರಾಗಿ ಮಾರಾಟ ಮಾಡಿದವರಿಗೆ ಈಗಾಗಲೇ ಹಣ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಉಳಿದ ರೈತರಿಗೂ ಹಣ ನೀಡಲಾಗುತ್ತದೆ. ಗ್ರೆನ್ ವೋಚರ್ ಅನ್ನು ಬರುವ ಗುರುವಾರ ನೀಡಲಾಗುತ್ತದೆ. ರೈತರು ಅಂದು ಗ್ಲೆನ್ ವೋಚರ್ ಪಡೆಯಬಹುದು ತಿಳಿಸಿದ್ದಾರೆ.