- ಎಲ್ಲ ಕೆಲಸಗಾರರಿಗೆ ಸಕಾಲದಲ್ಲಿ ಸರಿಯಾದ ಕೂಲಿ ಪಾವತಿಸಿ
- ಕೆಲಸ ನೀಡದಿದ್ದರೆ ನಿರುದ್ಯೋಗ ಭತ್ಯಯಾದರೂ ನೀಡಬೇಕು
ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಪರಿಣಾಮಕಾರಿ ಜಾರಿಗೆ ಆಗ್ರಹಿಸಿ ಯಲಬುರ್ಗಾ ತಾಲೂಕಿನ ಮಾಟಲದಿನ್ನಿ ಗ್ರಾಮ ಪಂಚಾಯಿತಿ ಕಾರ್ಯಾಲಯದ ಎದುರು ಕೂಲಿ ಕಾರ್ಮಿಕರು ಧರಣಿ ನಡೆಸಿದರು.
ಕೂಲಿಕಾರ್ಮಿಕ ಗಿರಿಯಪ್ಪ ಕೋರಿ ಮಾತನಾಡಿ, ಮೇ 5 ರಂದು ಕೆಲಸ ನೀಡಿ ಎಂದು ಗ್ರಾಮ ಪಂಚಾಯಿತಿಗೆ ನೂರಾರು ಮಂದಿ ಅರ್ಜಿ ಸಲ್ಲಿಸಿದ್ದೆವೆ. ಆದರೆ, ಗ್ರಾಮ ಪಂಚಾಯಿತಿಯಿಂದ ಕೆಲಸ ನೀಡಲು ಮುಂದಾಗುತ್ತಿಲ್ಲ. ಹಾಗಾಗಿ ನಿರುದ್ಯೋಗ ಭತ್ಯಯಾದರೂ ನೀಡಬೇಕು ಎಂದು ಆಗ್ರಹಿಸಿದರು.
ಗ್ರಾಮದಲ್ಲಿ ಕೆಲಸವಿಲ್ಲದೆ ಸಮಸ್ಯೆ ಎದರುರಾಗಿದ್ದರಿಂದ ರೈತಾಪಿ ವರ್ಗ ಕಂಗಲಾಗಿದ್ದಾರೆ. ಸರ್ಕಾರ ತಕ್ಷಣವೇ ಉದ್ಯೋಗ ಖಾತ್ರಿ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಗೊಳಿಸದಿದ್ದರೆ ಪ್ರತಿಯೊಬ್ಬರ ಸಂಕಷ್ಟ ಹೆಚ್ಚಾಗಲಿದೆ. ಪ್ರತಿಯೊಂದು ಕುಟುಂಬಕ್ಕೂ ಅವರು ಬಯಸುವಷ್ಟು ದಿನ ಉದ್ಯೋಗ ಖಾತರಿ ಯೋಜನೆಯಡಿ ಕೆಲಸ ಒದಗಿಸಬೇಕು ಎಂದು ಒತ್ತಾಯಿಸಿದರು.
ಎಲ್ಲ ಕೆಲಸಗಾರರಿಗೆ ಸಕಾಲದಲ್ಲಿ ಸರಿಯಾದ ಕೂಲಿ ಪಾವತಿ ಮಾಡಬೇಕು. ಸಕಾಲದಲ್ಲಿ ಉದ್ಯೋಗ ಒದಗಿಸಲಾಗದ ಸಂದರ್ಭಗಳಲ್ಲಿ ನಿರುದ್ಯೋಗ ಭತ್ಯೆಯನ್ನು ಪಡೆಯಲು ಗ್ರಾಮ ಪಂಚಾಯಿತಿಗೆ ಅಥವಾ ತಾಲೂಕು ಪಂಚಾಯಿತಿಗೆ ಸಲ್ಲಿಸುವ ಅರ್ಜಿಗಳನ್ನು ಸ್ವೀಕರಿಸಿ ಸ್ವೀಕೃತಿ ಪತ್ರ ನೀಡಬೇಕು ಎಂದರು.
ಈ ಸುದ್ದಿ ಓದಿದ್ದೀರಾ? ಜನರಿಗೆ ನ್ಯಾಯ ಒದಗಿಸಲು ಮನುಷ್ಯನ ಕಷ್ಟಕ್ಕೆ ಸ್ಪಂದಿಸುವ ಗುಣ ಮುಖ್ಯ; ಸಿಎಂ ಸಿದ್ದರಾಮಯ್ಯ
ವಾರಕ್ಕೊಮ್ಮೆ ಎನ್.ಎಂ.ಆರ್ ಗಳನ್ನು ಮುಕ್ತಾಯಗೊಳಿಸಿ ಕೆಲಸಗಾರರಿಗೆ ಕೂಲಿ ಪಾವತಿ ಮಾಡಬೇಕು. ಕೂಲಿ ಪಾವತಿ ವಿಳಂಬವಾದರೆ 936 ರ ವೇತನ ಪಾವತಿ ಕಾಯ್ದೆಯ ಪ್ರಕಾರ ವಿಳಂಬ ಕೂಲಿ ಪಾವತಿ ಪರಿಹಾರವನ್ನು ನೀಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ವಿರೇಶ ಪೋಲೀಸ್ ಪಾಟೀಲ್, ಹುಸೇನ್ ಪಾಷಾ ಶೆಕ್ಕೇರ, ಬುಡ್ನೇಸಾಬ ಮುಲ್ಲಾರ, ರಾಮಣ್ಣ ತಳಗಡೆ, ಮಾಹಲಿಂಗಪ್ಪ ಮಲ್ಲನಗೌಡ್ರ, ಶರಣಪ್ಪ ಭಜಂತ್ರಿ, ಶಂಕ್ರಪ್ಪ ವಣಗೇರಿ, ಕಾಶಿಮ್ ಸಾಬ ಮೇಲಗಡೆ, ಬಸವರಾಜ ಈಳಿಗೇರ, ಮಹಿಳೆಯರು ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.