- ಮಾದರಿ ನೀತಿಸಂಹಿತೆ ಜಾರಿಗೊಳಿಸಲು ಫ್ಲೈಯಿಂಗ್ ಸ್ಕ್ವಾಡ್ ರಚನೆ
- ನೀತಿಸಂಹಿತೆ ನಿರ್ದೇಶನ ಪಾಲಿಸುವಲ್ಲಿ ಹೆಸ್ಕಾಂ ಅಧಿಕಾರಿ ವಿಫಲ
ಚುನಾವಣಾ ಕರ್ತವ್ಯ ಲೋಪ ಆರೋಪದ ಮೇಲೆ ಹೆಸ್ಕಾಂ ಕಾರ್ಯಪಾಲಕ ಎಂಜಿನಿಯರ್ ಅವರನ್ನು ಅಮಾನತುಗೊಳಿಸಿ ಧಾರವಾಡ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಗುರುದತ್ ಹೆಗಡೆ ಆದೇಶ ಹೊರಡಿಸಿದ್ದಾರೆ.
“ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ಮುಂಬರುವ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಮಾದರಿ ನೀತಿಸಂಹಿತೆಯನ್ನು ಸಮರ್ಪಕವಾಗಿ ಜಾರಿಗೊಳಿಸಲು ಫ್ಲೈಯಿಂಗ್ ಸ್ಕ್ವಾಡ್ಗಳನ್ನು ರಚಿಸಲಾಗಿದ್ದು, ಹುಬ್ಬಳ್ಳಿಯ ಹೆಸ್ಕಾಂ ಕಾರ್ಪೊರೇಟ್ ಕಚೇರಿಯ ಕಾರ್ಯಪಾಲಕ ಎಂಜಿನಿಯರ್ ನಾಗರಾಜ್ ಕುಬಳ್ಳಿ ಅವರನ್ನು ನವಲಗುಂದ ವಿಧಾನಸಭಾ ಕ್ಷೇತ್ರದ ಫ್ಲೈಯಿಂಗ್ ಸ್ಕ್ವಾಡ್ ಆಗಿ ನಿಯೋಜಿಸಲಾಗಿತ್ತು” ಎಂದು ಹೇಳಿದ್ದಾರೆ.
“ಎಂಜಿನಿಯರ್ ಆದೇಶವನ್ನು ಪಾಲಿಸಲಿಲ್ಲವೆಂದು ಆರೋಪಿಸಿದ್ದು, ಕಾರಣ ಕೇಳಿ ನೋಟಿಸ್ ನೀಡಲಾಗಿತ್ತು. ಆದರೆ, ಎಂಜಿನಿಯರ್ ಕರ್ತವ್ಯಕ್ಕೆ ಹಾಜರಾಗಲಿಲ್ಲ. ಬದಲಿಗೆ ನಿಯಮಗಳನ್ನು ಉಲ್ಲಂಘಿಸಿ ಬೇಜವಾಬ್ದಾರಿಯುತ ರೀತಿಯಲ್ಲಿ ನೋಟಿಸ್ಗೆ ಉತ್ತರಿಸಿದ್ದಾರೆ” ಎಂದು ಆರೋಪಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮೈಸೂರು | ಹುಲಿ ಸಂರಕ್ಷಣಾ ಸಂಭ್ರಮ ದಿನ ವಿರೋಧಿಸಿ ಆದಿವಾಸಿಗಳಿಂದ ಶೋಕ ದಿನ ಆಚರಣೆ
“ಫ್ಲೈಯಿಂಗ್ ಸ್ಕ್ವಾಡ್ನ ಸದಸ್ಯರಿಗೆ ತಮ್ಮ ಮೊಬೈಲ್ ಫೋನ್ಗಳಲ್ಲಿ ಅಪ್ಲಿಕೇಶನ್ ಡೌನ್ಲೋಡ್ ಮಾಡಲು ನಿರ್ದೇಶಿಸಲಾಗಿದೆಯೆಂದು ಜಿಲ್ಲಾ ಚುನಾವಣಾ ಕಚೇರಿಯ ಪ್ರಕಟಣೆ ತಿಳಿಸಿದ್ದು, ಅಪ್ಲಿಕೇಶನ್ ಬಗ್ಗೆ ದಾಖಲಾಗುತ್ತಿರುವ ದೂರುಗಳಿಗೆ ಪ್ರತಿಕ್ರಿಯಿಸಲು ಅವರಿಗೆ ನಿರ್ದೇಶಿಸಲಾಗಿತ್ತು. ಆದರೆ, ನಾಗರಾಜ್ ನಿರ್ದೇಶನಗಳನ್ನು ಪಾಲಿಸುವಲ್ಲಿ ವಿಫಲರಾಗಿದ್ದಾರೆ” ಎಂದು ಹೇಳಿದ್ದಾರೆ.
“ಕಾರಣ ಕೇಳಿ ನೋಟಿಸ್ ಸ್ವೀಕರಿಸಿದ 24 ಗಂಟೆಗಳ ಒಳಗೆ ವೈಯಕ್ತಿಕವಾಗಿ ಉತ್ತರವನ್ನು ಸಲ್ಲಿಸುವಂತೆ ಅವರಿಗೆ ತಿಳಿಸಲಾಗಿತ್ತು. ಆದರೂ, ಅವರು ಇಮೇಲ್ ಮೂಲಕ ಉತ್ತರ ಕಳುಹಿಸಿದ್ದಾರೆ. ಅದು ಸ್ವೀಕಾರಾರ್ಹವಲ್ಲ” ಎಂದು ಆದೇಶದಲ್ಲಿ ಉಲ್ಲೇಖಿಸಿದ್ದಾರೆ.