- 50 ವರ್ಷ ಕಳೆದರೂ ಆದಿವಾಸಿಗಳಿಗೆ ಸಿಗದ ಸರಿಯಾದ ಪುರ್ವಸತಿ; ಬೇಸರ
- ನಾಗರಹೊಳೆ ಉದ್ಯಾನದಿಂದ 3,418 ಕುಟುಂಬಗಳನ್ನು ಹೊರಹಾಕಲಾಗಿತ್ತು
ಹುಲಿ ಸಂರಕ್ಷಣೆ ಹೆಸರಿನಲ್ಲಿ ಅರಣ್ಯ ಇಲಾಖೆಯು ಆದಿವಾಸಿಗಳ ಹಕ್ಕನ್ನು ಮಾನ್ಯ ಮಾಡದೆ ಅತಂತ್ರಗೊಳಿಸಿದೆ ಎಂದು ಆರೋಪಿಸಿ ಹುಲಿ ಸಂರಕ್ಷಣಾ ಸಂಭ್ರಮ ದಿನಾಚರಣೆಯನ್ನು ವಿರೋಧಿಸಿ ಹುಣಸೂರಿನಲ್ಲಿ ಆದಿವಾಸಿಗಳು ‘ಶೋಕದಿನ’ ಆಚರಿಸಿದರು.
ಹುಣಸೂರು ನಗರದ ಸಂವಿಧಾನ ವೃತ್ತದಲ್ಲಿ ಜಮಾಯಿಸಿದ ಆದಿವಾಸಿ ಮುಖಂಡರು, ವನ್ಯಜೀವಿ ಸಂರಕ್ಷಣೆ ಹೆಸರಿನಲ್ಲಿ ಕಾಡನ್ನು ಕಳೆದುಕೊಂಡು ಅದರ ನೆಪದಲ್ಲೇ ಅಸುನೀಗಿದ ಹಿರಿಯರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.
ಈ ವೇಳೆ ಬುಡಕಟ್ಟು ಕೃಷಿಕರ ಸಂಘದ ಅಧ್ಯಕ್ಷ ಪಿ ಕೆ ರಾಮು ಮಾತನಾಡಿ, “ಹುಲಿ ಯೋಜನೆಗೆ 50 ವರ್ಷ ತುಂಬಿರುವುದು ಅರಣ್ಯ ಇಲಾಖೆಗೆ ಸಂಭ್ರಮ. ಆದರೆ, 50 ವರ್ಷಗಳ ಹಿಂದೆ 1972ರ ವನ್ಯಜೀವಿ ಸಂರಕ್ಷಣಾ ಕಾಯ್ದೆ ಹೆಸರಿನಲ್ಲಿ ಸರ್ಕಾರವೇ ನಮ್ಮನ್ನು ಕಾಡಿನಿಂದ ಹೊರಗಟ್ಟಿದೆ. ಆದರೆ, ಈವರೆಗೂ ನಮಗೆ ಸರಿಯಾದ ಪುರ್ನವಸತಿ ಕಲ್ಪಿಸದಿರುವುದು ಚಾರಿತ್ರಿಕ ಅನ್ಯಾಯ. ಇದನ್ನು ಸರಿಪಡಿಸಲೆಂದೆ ಜಾರಿಗೆ ತಂದ ಅರಣ್ಯ ಹಕ್ಕುಮಾನ್ಯತಾ ಕಾಯ್ದೆ- 2006ನ್ನು ನ್ಯಾಯಬದ್ಧವಾಗಿ ಅನುಷ್ಠಾನಗೊಳಿಸದೆ ಅನ್ಯಾಯವಾಗಿದೆ” ಎಂದು ಆರೋಪಿಸಿದರು.
“ನಾಗರಹೊಳೆ ಉದ್ಯಾನದಿಂದ ಹೊರಹಾಕಲ್ಪಟ್ಟ 3,418 ಕುಟುಂಬಗಳಿಗೆ ಪ್ರೊ. ಮುಜಾಫರ್ ಅಸ್ಸಾದಿ ವರದಿಯ ಅನ್ವಯ ಪುರ್ನವಸತಿ ಕಲ್ಪಿಸದೆ ಹೈಕೋರ್ಟ್ ಆದೇಶವನ್ನೇ ಉಲ್ಲಂಘಿಸಿದ್ದಾರೆ. ಈ ಸಂಬಂಧ ಮೈಸೂರಿಗೆ ಆಗಮಿಸಿದ್ದ ಪ್ರಧಾನಿಗಳಿಗೆ ಮನವರಿಕೆ ಮಾಡಿಕೊಡಲು ಅನುಮತಿ ಸಿಗಲಿಲ್ಲ. ಹೀಗಾಗಿ ಈ ದಿನವನ್ನು ಶೋಕದ ದಿನವಾಗಿ ಆಚರಿಸಲಾಗಿದ್ದು, ಕಾಡಿನ ಚಿಂತೆಯಲ್ಲೇ ಅಸುನೀಗಿದ ಹಿರಿಯರಿಗೆ ಶ್ರದ್ದಾಂಜಲಿ ಸಲ್ಲಿಸಿ ಪ್ರತಿಭಟನೆ ನಡೆಸಲಾಗಿದೆ” ಎಂದರು.
ದಲಿತ ಚಳವಳಿಯ ನವನಿರ್ಮಾಣ ವೇದಿಕೆಯ ಹರಿಹರ ಆನಂದಸ್ವಾಮಿ ಮಾತನಾಡಿ, “ಪ್ರಧಾನ ಮಂತ್ರಿಗಳು ಎಂಟು ಬಾರಿ ರಾಜ್ಯಕ್ಕೆ ಬಂದಿದ್ದರೂ ಒಮ್ಮೆಯೂ ಆದಿವಾಸಿಗಳ ಸಮಸ್ಯೆ ಕುರಿತು ಚರ್ಚಿಸಲಿಲ್ಲ. ವನ್ಯಜೀವಿ ಸಂರಕ್ಷಣೆ ಹೆಸರಿನಲ್ಲಿ ಗಿರಿಜನರು ಸಂಕಷ್ಟಕ್ಕೊಳಗಾಗಿದ್ದಾರೆ. ಆಡಳಿತ ವ್ಯವಸ್ಥೆ ಸತ್ತುಹೋಗಿದೆ. ಇನ್ನು ಮುಂದಾದರೂ ಗಂಭೀರವಾಗಿ ಪರಿಗಣಿಸಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ ? ತುಮಕೂರು | ದೇವಾಲಯ ಪ್ರವೇಶ ಆರೋಪ; ದಲಿತ ಯುವಕನಿಗೆ ಮಾರಣಾಂತಿಕ ಹಲ್ಲೆ
ಡೀಡ್ನ ಡಾ. ಎಸ್ ಶ್ರೀಕಾಂತ್ ಮಾತನಾಡಿ, “ಆದಿವಾಸಿ ಮಹಿಳೆಯನ್ನು ರಾಷ್ಟ್ರಪತಿಯನ್ನಾಗಿಸಿದ್ದಾರೆ. ಬಿರ್ಸಾಮುಂಡಾ ಜಯಂತಿ ಆಚರಣೆಗೆ ಅವಕಾಶ ಕಲ್ಪಿಸಿದ್ದಾರೆ. ಆದರೆ, ಕಳೆದ 50 ವರ್ಷಗಳಿಂದ ಆದಿವಾಸಿಗಳು ಪುನರ್ವಸತಿಗಾಗಿ ಸಾಕಷ್ಟು ಹೋರಾಟ ನಡೆಸಿದ್ದಾರೆ. ನ್ಯಾಯಾಲಯವು ಆದಿವಾಸಿಗಳ ಪರವಾಗಿ ಆದೇಶ ನೀಡಿದೆ. ಆದರೆ, ಅರಣ್ಯ ಇಲಾಖೆ, ಸರ್ಕಾರ ಅನ್ಯಾಯ ಮಾಡುತ್ತಲೇ ಬಂದಿದ್ದು, ಇನ್ನಾದರೂ ಆದಿವಾಸಿಗಳಿಗೆ ನ್ಯಾಯ ಸಿಗುವಂತಾಗಲಿ” ಎಂದು ಒತ್ತಾಯಿಸಿದರು.
ನಂತರ ತಾಲೂಕು ಕಚೇರಿ ವರೆಗೆ ಮೆರವಣಿಗೆಯಲ್ಲಿ ತೆರಳಿ ಕಂದಾಯಾಧಿಕಾರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಆದಿವಾಸಿ ಮುಖಂಡರಾದ ಜಯಪ್ಪ, ಹರ್ಷ, ಶಿವಣ್ಣ, ಪ್ರಕಾಶ್, ವಿಠಲ್, ಅರಪೇಟಯ್ಯ, ಜ್ಯೋತಿ, ಚಂದ್ರ, ಕಲ್ಲುರಯ್ಯ, ಕೀರ್ತಿ, ಚಿತ್ರ, ನಿತ್ಯ, ಮೌನ, ದರ್ಶನ್, ಕಬ್ಬಾಳಯ್ಯ, ಈರಯ್ಯ, ರಕ್ಷಿತ ಹಾಗೂ ಇತರರು ಇದ್ದರು.