- ಬಿಡಿಎ ಅಧ್ಯಕ್ಷ ಸ್ಥಾನಕ್ಕಾಗಿ ಶಾಸಕರ ನಡುವೆ ಪೈಪೋಟಿ
- ರಾಜಕಾರಣಿಗಳ ನೇಮಕಕ್ಕೆ ಅಂತ್ಯವಾಡಿದ ಈ ಸರ್ಕಾರ
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ (ಬಿಡಿಎ) ಶಾಸಕರನ್ನು ಅಧ್ಯಕ್ಷರನ್ನಾಗಿ ನೇಮಿಸುವ ಹಳೇ ಪದ್ಧತಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ತಿಲಾಂಜಲಿ ಇಟ್ಟಿದೆ.
ಬಿಡಿಎ ಅಧ್ಯಕ್ಷ ಸ್ಥಾನಕ್ಕೆ ಶಾಸಕರ ನಡುವೆ ನಡೆದಿದ್ದ ಪೈಪೋಟಿಗೆ ರಾಜ್ಯ ಸರ್ಕಾರ ಬ್ರೇಕ್ ಹಾಕಿ, ಐಎಎಸ್ ಅಧಿಕಾರಿಯೊಬ್ಬರನ್ನು ಬಿಡಿಎ ಅಧ್ಯಕ್ಷರನ್ನಾಗಿ ನೇಮಿಸಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಆಡಳಿತಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ರಾಕೇಶ್ ಸಿಂಗ್ ಅವರನ್ನು ಸರ್ಕಾರ ಈಗ ಬಿಡಿಎ ಅಧ್ಯಕ್ಷರನ್ನಾಗಿ ನೇಮಕ ಮಾಡಿದೆ. ಈ ಹಿಂದೆ ಇವರು ಬಿಡಿಎ ಆಯುಕ್ತರಾಗಿ ಕಾರ್ಯ ನಿರ್ವಹಿಸಿದ್ದಾರೆ. ಹಾಗೆಯೇ ಬಿಎಂಆರ್ಸಿಎಲ್ ಎಂಡಿ ಆಗಿಯೂ ಇವರು ಕಾರ್ಯನಿರ್ವಹಿಸಿದ್ದಾರೆ.
ಯಲಹಂಕ ಶಾಸಕ ಎಸ್ ಆರ್ ವಿಶ್ವನಾಥ್ ಅವರು ಹಿಂದಿನ ಬಿಜೆಪಿ ಸರ್ಕಾರದಲ್ಲಿ ಬಿಡಿಎ ಅಧ್ಯಕ್ಷರಾಗಿದ್ದರು. ಈ ಬಾರಿ ಕಾಂಗ್ರೆಸ್ ಸರ್ಕಾರ ಕೂಡ ಬಿಡಿಎ ಅಧ್ಯಕ್ಷ ಸ್ಥಾನಕ್ಕಾಗಿ ಶಾಸಕರನ್ನು ಆಯ್ಕೆ ಮಾಡಲಾಗುತ್ತೆ ಎನ್ನುವ ಮಾತುಗಳು ಕೇಳಿಬಂದಿದ್ದವು. ಎನ್ ಎ ಹ್ಯಾರೀಸ್, ಎಂ ಕೃಷ್ಣಪ್ಪ, ಪ್ರಿಯಾಕೃಷ್ಣ ನಡುವೆ ತೀವ್ರ ಪೈಪೋಟಿ ನಡೆದಿತ್ತು ಎನ್ನಲಾಗಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬಿಬಿಎಂಪಿ ಚುನಾವಣೆ; ಸಿದ್ದರಾಮಯ್ಯ ಸರ್ಕಾರದ ಮುಂದಿವೆ ಹಲವು ಸವಾಲು
ಸರ್ಕಾರದಿಂದ ಹೊಸ ನಿರ್ಧಾರ
ರಾಜಧಾನಿಯ ಅಭಿವೃದ್ಧಿಗಾಗಿ 1976ರಲ್ಲಿ ಬಿಡಿಎ ಆರಂಭವಾಗಿದೆ. 23 ಸದಸ್ಯರಿರುವ ಬಿಡಿಎದಲ್ಲಿ 2 ಸ್ಥಾನಗಳು ಬಿಬಿಎಂಪಿಯ ಸದಸ್ಯರಿಂದ ಆಯ್ಕೆಯಾಗಿರುತ್ತಾರೆ. ಬಿಡಿಎಗೆ ಅಧ್ಯಕ್ಷರು ಮತ್ತು ಸದಸ್ಯರನ್ನು ರಾಜ್ಯ ಸರ್ಕಾರವೇ ನೇಮಕ ಮಾಡುತ್ತದೆ. ಇಲ್ಲಿಯವರೆಗೂ ಬಿಡಿಎ ಅಧ್ಯಕ್ಷ ಸ್ಥಾನ ಭಾಗಶಃ ಆಡಳಿತಾರೂಢ ಪಕ್ಷದ ಶಾಸಕರ ಪಾಲಾಗಿದೆ. ಈ ಬಾರಿ ಅದಕ್ಕೆ ಐಎಎಸ್ ಅಧಿಕಾರಿ ನೇಮಕವಾಗುವ ಮೂಲಕ ರಾಜಕಾರಣಿಗಳ ನೇಮಕಕ್ಕೆ ಈ ಸರ್ಕಾರ ಅಂತ್ಯವಾಡಿದೆ.