- ದಿನ್ನೆಹೊಸಳ್ಳಿ ಗ್ರಾಮದಲ್ಲಿ ಅಶಾಂತಿಯ ವಾತಾವರಣ
- ಕಿಡಿಗೇಡಿಗಳನ್ನು ಬಂಧಿಸುವಂತೆ ಆಗ್ರಹಿಸಿ ಪ್ರತಿಭಟನೆ
ಡಾ. ಬಿ.ಆರ್ ಅಂಬೇಡ್ಕರ್ ಜನ್ಮ ದಿನಾಚರಣೆ ಕಳೆದು ಮೂರು ದಿನಗಳಾಗಿವೆ. ಇದರ ಬೆನ್ನಲ್ಲೆ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಕಿಡಿಗೇಡಿಗಳು ಮಸಿ ಬಳಿದು ಅಪಮಾನ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ಕೋಲಾರ ತಾಲೂಕಿನ ನರಸಾಪುರ ಹೋಬಳಿಯ ದಿನ್ನೆಹೊಸಳ್ಳಿ ಗ್ರಾಮದಲ್ಲಿ ಅಂಬೇಡ್ಕರ್ ಚಿತ್ರವಿದ್ದ ಫಲಕಕ್ಕೆ ಕಿಡಿಗೇಡಿಗಳು ಮಸಿ ಬಳಿದು ವಿರೂಪಗೊಳಿಸಿದ್ದಾರೆ. ಘಟನೆಯ ಬಳಿಕ, ದಿನ್ನೆಹೊಸಳ್ಳಿ ಗ್ರಾಮದಲ್ಲಿ ಅಶಾಂತಿಯ ವಾತಾವರಣ ನಿರ್ಮಾಣವಾಗಿದೆ. ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನ ಮಾಡಿರುವ ಫಲಕವನ್ನು ಸದ್ಯ ಬಟ್ಟೆಯಿಂದ ಮುಚ್ಚಲಾಗಿದೆ.
ವೇಮಗಲ್ ಠಾಣೆಗೆ ಧಾವಿಸಿದ ದಲಿತ ಮತ್ತು ರೈತ ಸಂಘಟನೆಗಳ ಕಾರ್ಯಕರ್ತರು ಹಾಗೂ ಗ್ರಾಮಸ್ಥರು, ಕಿಡಿಗೇಡಿಗಳನ್ನು ಬಂಧಿಸುವಂತೆ ಆಗ್ರಹಿಸಿ ಭಾನುವಾರ ಪ್ರತಿಭಟನೆ ನಡೆಸಿದ್ದಾರೆ. ನಂತರ ದೂರು ಸಲ್ಲಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಚುನಾವಣೆ 2023 | ‘ಕಮಲ’ ಬಿಟ್ಟು ‘ತೆನೆ’ ಹೊತ್ತ ಸೂರ್ಯಕಾಂತ ನಾಗಮಾರಪಳ್ಳಿ
“ಕಿಡಿಗೇಡಿಗಳು ಯಾರೇ ಆಗಿರಲಿ ಹಳ್ಳಿಗಳಲ್ಲಿ ನೆಲೆಸಿರುವ ಶಾಂತಿ ಸುವ್ಯವಸ್ಥೆ ಹಾಳು ಮಾಡುವವರನ್ನು ಕೂಡಲೇ ಬಂಧಿಸಬೇಕು” ಎಂದು ಒತ್ತಾಯಿಸಿದ್ದಾರೆ.
ದೂರು ಸಲ್ಲಿಸುವ ವೇಳೆ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಯುವ ಘಟಕದ ಅಧ್ಯಕ್ಷ ಕಲ್ವಮಂಜಲಿ ರಾಮು ಶಿವಣ್ಣ, ದಲಿತ ಸಂಘರ್ಷ ಸಮಿತಿಯ ಮೇಡಿಯಾಳ ಮುನಿ ಆಂಜಿನಪ್ಪ ಇದ್ದರು.