- ಬೆಂಗಳೂರಿನಲ್ಲಿ ಬುಧವಾರ (ಆ.23) ಪ್ರತಿಭಟನೆ
- ‘ಸರ್ಕಾರದಲ್ಲಿ ಸರ್ವಾಧಿಕಾರ ನಡವಳಿಕೆ ಕಾಣುತ್ತಿದೆ’
ವರ್ಗಾವಣೆಯಲ್ಲಿ ಭ್ರಷ್ಟಾಚಾರ ಮತ್ತು ಗುತ್ತಿಗೆದಾರರ ಕಮಿಷನ್ ಆರೋಪಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ವಿರುದ್ಧ ಬೆಂಗಳೂರಿನಲ್ಲಿ ಬುಧವಾರ (ಆ.23) ಬಿ ಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಯಲಿದೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.
ಶನಿವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, “ಮೂರು ತಿಂಗಳಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಜನರು ಬೇಸತ್ತಿದ್ದಾರೆ. ತಮ್ಮ ಗ್ಯಾರಂಟಿ ಯೋಜನೆಗಳಿಂದ ರಾಜ್ಯವನ್ನು ಆರ್ಥಿಕವಾಗಿ ಹಿಂದಕ್ಕೆ ಕೊಂಡೊಯ್ಯುತ್ತಿದ್ದಾರೆ. ಪ್ರಮುಖವಾಗಿ ಈ ಸರ್ಕಾರದಲ್ಲಿ ಸರ್ವಾಧಿಕಾರ ನಡವಳಿಕೆ ಎದ್ದು ಕಾಣುತ್ತಿದೆ” ಎಂದು ಟೀಕಿಸಿದರು.
“ಸರ್ಕಾರ ಭ್ರಷ್ಟಾಚಾರ, ವರ್ಗಾವಣೆ ದಂಧೆಯಲ್ಲಿ ಮುಳುಗಿದೆ. ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ. ಕಾಂಗ್ರೆಸ್ನ ಪಂಚ ಯೋಜನೆಗಳು ಕೇವಲ ಹೆಸರಿಗೆ ಮಾತ್ರ. ಕೊಟ್ಟ ಭರವಸೆ ಈಡೇರಿಸಲು ಅವರಿಂದ ಸ್ಯಾಧ್ಯವಾಗಿಲ್ಲ” ಎಂದು ದೂರಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಆಪರೇಷನ್ ಹಸ್ತದ ಚರ್ಚೆ: ನಿರ್ಲಜ್ಜ ರಾಜಕೀಯ ನಡೆಗಳು
“ಪಕ್ಷದ ನಾಯಕರೆಲ್ಲರೂ ಒಗ್ಗಟ್ಟಾಗಿದ್ದೇವೆ. ಕಾಂಗ್ರೆಸ್ನ ಶಾಸಕರು ದಂಗೆ ಎದ್ದಿದ್ದಾರೆ ಎಂಬ ಸತ್ಯವನ್ನು ಮರೆಮಾಚಲು ಅವರು ಪಕ್ಷಾಂತರ ಬಗ್ಗೆ ಸುಳ್ಳು ಕಥೆಗಳನ್ನು ಕಟ್ಟುತ್ತಿದ್ದಾರೆ. ಬಿಜೆಪಿಯ ಯಾವುದೇ ಶಾಸಕರು ಪಕ್ಷ ತೊರೆಯುವುದಿಲ್ಲ. ಸ್ಥಳೀಯವಾಗಿ ಕೆಲವು ಸಮಸ್ಯೆಗಳಿವೆ. ನಾವು ಇದನ್ನು ರಾಜ್ಯಾಧ್ಯಕ್ಷರ ಗಮನಕ್ಕೆ ತಂದಿದ್ದೇವೆ” ಎಂದರು.