ಜನಸಾಮಾನ್ಯರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸದೆ ನಿರ್ಲಕ್ಷ್ಯ ವಹಿಸಿದರೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ, ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಬೀದರ್ ದಕ್ಷಿಣ ಕ್ಷೇತ್ರದ ಮಂದಕನಳ್ಳಿ ಗ್ರಾಮದಲ್ಲಿ ನಡೆದ ಅಭಿನಂದನಾ ಕಾರ್ಯಕ್ರಮದ ಬಳಿಕ ಗ್ರಾಮಸ್ಥರಿಂದ ಅಹವಾಲು ಸ್ವೀಕರಿಸಿ ಅವರು ಮಾತನಾಡಿದರು.
“ಹಿಂದೆ ಯಾವ ರೀತಿ ನೀವು ಕೆಲಸ ಮಾಡಿದ್ದೀರೊ ಗೊತ್ತಿಲ್ಲ, ಈಗ ನಾನು ಜನರ ಸೇವೆ ಮಾಡಲು ಶಾಸಕನಾಗಿದ್ದೇನೆ ನನಗೆ ನನ್ನ ಕ್ಷೇತ್ರದ ಜನರ ಹಿತ ಮುಖ್ಯ. ಯಾವುದೇ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ, ಸ್ವಚ್ಛತೆ ಮೂಲ ಸೌಕರ್ಯ ಕೊರತೆ ಕಂಡು ಬಂದರೆ ತಕ್ಷಣ ಪರಿಹರಿಸಬೇಕು” ಎಂದು ಸೂಚಿಸಿದರು.
ಮಂದಕನಳ್ಳಿ ಗ್ರಾಮದಲಲ್ಲಿನ ಹನುಮಾನ ದೇವಸ್ಥಾನದ ಪಕ್ಕದಲ್ಲಿ ಹಲವು ದಿನಗಳಿಂದ ಚರಂಡಿ ನೀರು ಸರಾಗವಾಗಿ ಹರಿಯದೆ ಹಾಗೆ ನಿಂತಿರುವ ಕುರಿತು ಗ್ರಾಮಸ್ಥರು ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ತಿಳಿಸಿದರು ಸ್ಪಂದನೆ ನೀಡಿಲ್ಲ. ಹೀಗಾಗಿ ಗ್ರಾಮಸ್ಥರು ಶಾಸಕರಿಗೆ ದೂರು ನೀಡಿರುವ ಕಾರಣ ಈ ಕುರಿತು ಸ್ವತಃ ಶಾಸಕರೆ ಪರಿಶೀಲನೆ ನಡೆಸಿ ಅಧಿಕಾರಿಗಳಿಗೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು. ಗ್ರಾಮಸ್ಥರು ಸಹ ಸಹಕರಿಸಬೇಕು ಎಂದು ಮನವಿ ಮಾಡಿದರು.
ಬಳಿಕ ಗ್ರಾಮದ ಸ್ವಚ್ಛತೆ, ಕುಡಿಯುವ ನೀರು ಮೂಲ ಸೌಕರ್ಯ ಕುರಿತು ಪರಿಶೀಲನೆ ನಡೆಸಿ ಗ್ರಾಮಸ್ಥರ ಸಮಸ್ಯೆ ಕುರಿತು ಅಹವಾಲು ಸ್ವೀಕರಿಸಿದರು.
ಸಣ್ಣ ಪುಟ್ಟ ಸಮಸ್ಯೆಗಳನ್ನು ತಕ್ಷಣ ಬಗೆಹರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಮಂದಕನಳ್ಳಿ ಗ್ರಾಮದಲ್ಲಿರುವ ಸರ್ಕಾರಿ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ವಿಧ್ಯಾರ್ಥಿಗಳ ಫಲಿತಾಂಶ ಕುರಿತು ಚರ್ಚೆ ನಡೆಸಿದರು. ಮಕ್ಕಳ ಪೋಷಕರೊಂದಿಗೆ ಸಲಹೆಗಳನ್ನು ಪಡೆದರು. ಶಿಕ್ಷಕರರು ಉತ್ತಮ ಶಿಕ್ಷಣ ನೀಡಲು ಶ್ರಮ ವಹಿಸುತ್ತಿಲ್ಲ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಶಾಸಕರಿಗೆ ಪಾಲಕರು ಮನವಿ ಮಾಡಿದರು.
ವಿಧ್ಯಾರ್ಥಿಗಳ ಫಲಿತಾಂಶ ಉತ್ತಮವಾಗಿಸಲು ಶಿಕ್ಷಕರು ಇನ್ನೂ ಶ್ರಮ ಪಡಬೇಕು. ಈ ನಿಟ್ಟಿನಲ್ಲಿ ಶಿಕ್ಷಕರಿಗೆ ಖಡಕ್ ಸೂಚನೆ ನೀಡುವಂತೆ ಶಿಕ್ಷಣ ಅಧಿಕಾರಿಗಳಿಗೆ ತಿಳಿಸಿದರು.
ಈ ಸುದ್ದಿಓದಿದ್ದೀರಾ? ಬಳ್ಳಾರಿ | ಮನರೇಗಾ ಸಮಸ್ಯೆ ಪರಿಹಾರಕ್ಕೆ ಕಾರ್ಮಿಕರ ಆಗ್ರಹ
ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಾಣಿಕರಾವ ಪಾಟೀಲ್, ತಾ.ಪಂ ಸಹಾಯಕ ನಿರ್ದೇಶಕ ಸಂಜುಕುಮಾರ ಕಾಡವಾದ, ತಾ.ಪಂ ಸಹಾಯಕ ನಿರ್ದೇಶಕಿ ಲಕ್ಷ್ಮಿ, ಕ್ಷೇತ್ರ ಶಿಕ್ಷಣ ಅಧಿಕಾರಿ ಅಖೀಲಾಡೇಶ್ವರಿ, ಶಿಕ್ಷಣ ಸಂಯೋಜಕ ಸಚಿದಾನಂದ, ಶಿಕ್ಷಣ ಅಧಿಕಾರಿ ಗೋಪಾಲರಾವ, ಮುಖಂಡರಾದ ಕುಶಲರಾವ ಯಾಬಾ, ಗ್ರಾಮದ ಮುಖಂಡರಾದ ದತ್ತಾತ್ರಿ ಲಕ್ಕಾ, ಚಂದ್ರಕಾಂತ ಪಿಲ್ಲಿ, ಕಾಶಿನಾಥ ಚನ್ನಪ್ಪ ಗೌರಶೆಟ್ಟಿ, ಧರ್ಮಣ್ಣ ಲಕ್ಕಾ, ಮಲ್ಲಿಕಾರ್ಜುನ್ ಹಲಬುರ್ಗೆ, ರಾಜು ಮಹಾರಾಜ, ಅನೀಲ ಕೋಳಿ, ಅನೀನ ಶೇರಿಕಾರ, ಗಂಗಾಧರ ಗೌರಶೆಟ್ಟಿ, ಸಂತೋಷ ಗೌರಶೆಟ್ಟಿ, ನರ್ಸಿಂಗ್ ಪಾಂಚಳಾ, ಗಂಗಾಧರ ದಾಲಗುಂಡಿ, ವೈಜನಾಥ ಪಿಲ್ಲಿ, ಅನೀಲ್ ಮೇತ್ರೆ, ಅವೀನಾಶ, ಕರಬಸಪ್ಪ ಮತ್ತಿತರರು ಉಪಸ್ಥಿತರಿದ್ದರು.