ಶಿವಮೊಗ್ಗ | ಪಾಲಿಕೆ ನಿರ್ಲಕ್ಷ್ಯ: ಮೂಲ ಸೌಕರ್ಯದಿಂದ ವಂಚಿತರಾಗಿರುವ ಮಿಳಘಟ್ಟ ನಿವಾಸಿಗಳು

Date:

ಶಿವಮೊಗ್ಗ ಮಹಾನಗರ ಪಾಲಿಕೆಗೆ ಒಳಪಟ್ಟಿರುವ ನಗರದ ಮುಖ್ಯ ಬಸ್ ನಿಲ್ದಾಣದ ಹಿಂಭಾಗದಲ್ಲಿರುವ ಮಿಳಘಟ್ಟ ಮಹಾನಗರ ಪಾಲಿಕೆ ವಾರ್ಡ್ ನಂಬರ್ 27ರ ಲಕ್ಷ್ಮಿ ಕ್ಯಾಂಟೀನ್ ಸುತ್ತಲಿನ ಪ್ರದೇಶದಲ್ಲಿ ವಾಸಿಸುವ ನಿವಾಸಿಗಳು ಮೂಲ ಸೌಕರ್ಯಗಳಿಂದ ವಂಚಿತರಾಗಿದ್ದಾರೆ.

ವಾರ್ಡಿನಲ್ಲಿ ಮೂಲ ಸೌಕರ್ಯದ ಕೊರತೆ ಇದ್ದು, ಸುಮಾರ್ 30 ವರ್ಷಕ್ಕಿಂತಲೂ ಹೆಚ್ಚುಕಾಲದಿಂದ ವಾಸವಿರುವ ಬಡವರು, ಅಸಹಾಯಕ ಕೂಲಿ ಕಾರ್ಮಿಕರು ಮತ್ತು ಶ್ರಮಿಕ ವರ್ಗ, ಅಲ್ಪಸಂಖ್ಯಾತ ವರ್ಗ ಸೇರಿದಂತೆ ಸುಮಾರ್ 150ಕ್ಕೂ ಅಧಿಕ ಕುಟುಂಬಗಳು ಇಲ್ಲಿ ವಾಸಿಸುತ್ತಿವೆ. ಆದರೆ ಈವರೆಗೆ ಸಮರ್ಪಕ ಮೂಲಸೌಕರ್ಯಗಳಿಲ್ಲ. ಹಕ್ಕು ಪತ್ರ ನೀಡುತ್ತಿಲ್ಲವೆಂದು  ಸ್ಥಳೀಯರು ಆರೋಪಿಸಿದ್ದಾರೆ.

ಸರಿಯಾದ ಚರಂಡಿ ವ್ಯವಸ್ಥೆ ಇಲ್ಲ ಮತ್ತು ಕುಡಿಯುವ ನೀರಿಗಾಗಿ ‘ನಳ’ ಹಾಕಿದ್ದಾರೆ. ಆದರೆ, ಅದರಲ್ಲಿ ಚರಂಡಿ ನೀರು, ಶೌಚಾಲಯದ ತ್ಯಾಜ್ಯ ಬಂದು ಸೇರುತ್ತಿದೆ. ಆ ನೀರನ್ನೇ ನಾವು ಕುಡಿಯಲು, ಮನೆಯ ಪಾತ್ರೆ ತೊಳೆಯಲು, ಅಡುಗೆಗೆ ಅನಿವಾರ್ಯವಾಗಿ ಬಳಸಬೇಕಾದ ಪರಿಸ್ಥಿತಿ ಎದುರಾಗಿದೆ ಎಂದು ಸ್ಥಳೀಯರು ಅಲವತ್ತುಕೊಂಡಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಚರಂಡಿ ಅವ್ಯವಸ್ಥೆ

“ಚರಂಡಿಗೆ ಯುಜಿಡಿ ವ್ಯವಸ್ಥೆ ಕಲ್ಪಿಸದೆ ರಸ್ತೆ ಮಾಡಿದ್ದಾರೆ. ಈ ಕಾರಣದಿಂದ ಸೊಳ್ಳೆ ಸೇರಿದಂತೆ ಇತರ ಕ್ರಿಮಿಕೀಟಗಳ ಕಾಟ ಹೆಚ್ಚಾಗಿದ್ದು, ಸಾಂಕ್ರಾಮಿಕ ರೋಗ ಹರಡುವ ಆತಂಕ ಎದುರಾಗಿದ್ದು, ಕೆಲವರು ಈಗಾಗಲೇ ಅನಾರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ” ಎಂದು ಸ್ಥಳೀಯ ನಿವಾಸಿಗಳು ಈ ದಿನ.ಕಾಮ್‌ಗೆ ತಿಳಿಸಿದರು.

“ತಗ್ಗು ಪ್ರದೇಶವಾಗಿರುವ ಕಾರಣ ಮಳೆ ಬಂದಾಗ ಮಳೆ ನೀರು ಮನೆಯೊಳಗೆ ಬರುತ್ತದೆ. ಮಳೆಗಾಲದಲ್ಲಿ ಬಹಳಷ್ಟು ಸಮಸ್ಯೆಗಳು ಎದುರಾಗುತ್ತವೆ. ಈ ಕುರಿತು ಹಲವು ಬಾರಿ ಮಹಾನಗರ ಪಾಲಿಕೆ ಬಿಜೆಪಿ ಸದಸ್ಯ ವಿಶ್ವನಾಥ್ ಅವರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಪಾಲಿಕೆ ಸದಸ್ಯರು ಅವರ ಕೆಲಸ ಇದ್ದಾಗ ಬರುತ್ತಾರೆ, ಹೋಗುತ್ತಾರೆ. ನಮ್ಮ ಧ್ವನಿ ಕೇಳಿಸಿಕೊಳ್ಳುವುದೇ ಇಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೆಸರಿನಿಂದ ತುಂಬಿರುವ ಚರಂಡಿ

ಮಹಾನಗರ ಪಾಲಿಕೆ ಸದಸ್ಯ ವಿಶ್ವನಾಥ್ ಅವರನ್ನು ಈ ದಿನ.ಕಾಮ್‌ ಸಂಪರ್ಕಿಸಲು ಪ್ರಯತ್ನಿಸಲಾಯಿತಾದರೂ ಅವರು ಸಂಪರ್ಕಕ್ಕೆ ಲಭ್ಯವಾಗಿಲ್ಲ.

ಮಹಾನಗರ ಪಾಲಿಕೆ ಮಾಜಿ ಸದಸ್ಯ ಹಾಗೂ ಹಾಲಿ ಜೆಡಿಎಸ್‌ ನಗರಾಧ್ಯಕ್ಷ ದೀಪಕ್‌ ಸಿಂಗ್‌ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಶಿವಮೊಗ್ಗ ನಗರದ ಕೆಲವು ಭಾಗಗಳು ಸರ್ಕಾರಿ ಒತ್ತುವರಿ ಜಾಗಗಳಾಗಿವೆ. ಅದರಲ್ಲಿ ದಿನ ಕಳೆದಂತೆ ನಗರ ಬೆಳೆದಂತೆ ಸುಮಾರು 30 ವರ್ಷಗಳಿಂದ ಜನರು ವಾಸಿಸುತ್ತಿದ್ದಾರೆ. ಹಾಗಾಗಿ ಅಲ್ಲಿ ವಾಸಿಸುತ್ತಿರುವವರಿಗೆ ಹಕ್ಕು ಪತ್ರ ಕೊಡಿಸಲು ಕಾನೂನಿನಲ್ಲಿ ಅವಕಾಶವಿದೆ” ಎಂದು ತಿಳಿಸಿದರು.

“ಕರ್ನಾಟಕ ಭೂ ಕಂದಾಯ ಕಾಯ್ದೆ ಸೆಕ್ಷನ್ 94ಸಿಸಿ ಅಡಿ ಕಂದಾಯ ಇಲಾಖೆಗೆ ಸೇರಿದ ಸರ್ಕಾರಿ ಭೂಮಿಯನ್ನು ತಹಶೀಲ್ದಾರ್ ಮುಖಾಂತರ ಇವರು ಮೂಲ ನಿವಾಸಿಗಳೆಂದು ಪರಿಗಣಿಸಿ ಹಕ್ಕು ಪತ್ರ ನೀಡಲು ಅವಕಾಶವಿದೆ. ಅಲ್ಲದೆ ಸದರಿ ಪ್ರದೇಶಗಳಲ್ಲಿನ ಮನೆಗಳಿಗೆ ಆಶ್ರಯ ಸಮಿತಿ ಅಥವಾ ಸ್ಲಂ ಬೋರ್ಡ್ ಮುಖಾಂತರವೂ ಹಕ್ಕುಪತ್ರ ನೀಡಲು ಕಾನೂನಿನಡಿ ಅವಕಾಶವಿದೆ. ಈ ಹಿಂದೆ ಕೆ ಬಿ ಪ್ರಸನ್ನ ಕುಮಾರ್ ಅವರು ಶಾಸಕರಾಗಿದ್ದ ಸಂದರ್ಭದಲ್ಲಿ ಮಿಳಘಟ್ಟ ಮುಖ್ಯರಸ್ತೆ ಅಗಲೀಕರಣಕ್ಕೆ ಸರ್ಕಾರದಿಂದ ಅಗತ್ಯ ಅನುದಾನವನ್ನು ಬಿಡುಗಡೆ ಮಾಡಿಸಿದ್ದರು. ಸಾಗರ ರಸ್ತೆಯಿಂದ ಗೋಮಾಳ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ಈ ಮುಖ್ಯ ರಸ್ತೆ ಈವರೆಗೂ ಅಭಿವೃದ್ಧಿ ಕಾಣದಿರುವುದು ಒಂದು ದುರಂತವೇ ಸರಿ. ಇದಕ್ಕೆ ಜನಪ್ರತಿನಿದಿಗಳ ದಿವ್ಯ ನಿರ್ಲಕ್ಷ್ಯವೇ ಕಾರಣ. ಸಂಬಂಧಪಟ್ಟ ಅಧಿಕಾರಿಗಳು, ನಗರದ ಶಾಸಕರು ಈ ಕುರಿತು ಗಮನಹರಿಸಬೇಕು” ಎಂದರು.

ಈ ಸುದ್ದಿ ಓದಿದ್ದೀರಾ? ರಾಯಚೂರು | ಮೋದಿ ಸರ್ಕಾರದ ಫ್ಯಾಸಿಸಂ ಸೋಲಿಸಲು ಎಡಪಕ್ಷಗಳು ಒಗ್ಗೂಡಬೇಕು : ದೀಪಂಕರ್ ಭಟ್ಟಾಚಾರ್ಯ

“ಬಿಜೆಪಿ ಆಡಳಿತವಿರುವ ಶಿವಮೊಗ್ಗ ಮಹಾನಗರ ಪಾಲಿಕೆಗೆ ರಾಜಕೀಯ ಇಚ್ಛಾಶಕ್ತಿ ಕೊರತೆ ಎದ್ದು ಕಾಣಿಸುತ್ತಿದೆ. ಇಂತಹ ಬಡ ಜನರ ಬಗ್ಗೆ ಆಸಕ್ತಿ ವಹಿಸದೆ ನಿರ್ಲಕ್ಷ್ಯ ವಹಿಸಿರುವುದು ವಿಷಾದವಾಗಿದೆ. ಇನ್ನಾದರು ಜನಪ್ರತಿನಿಧಿಗಳು ಸಮಸ್ಯೆಗಳನ್ನು ಮನಗಂಡು ಬಗೆಹರಿಸಬೇಕು” ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಭಾರಧ್ವಾಜ್ ಶಿವಮೊಗ್ಗ
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಂಗಳೂರು | ಅಬ್ಬರದ ಜನಜಾಗೃತಿ ನಡುವೆಯೂ ಕರ್ತವ್ಯ ಮರೆತ ನಗರದ ಮಂದಿ: ಅದೇ ಹಳೆ ಕಥೆ

ಕರ್ನಾಟಕದ 14 ಕ್ಷೇತ್ರಗಳಿಗೆ ಏಪ್ರಿಲ್ 26ರಂದು ಮೊದಲ ಹಂತದ ಮತದಾನ ನಡೆದಿದೆ....

ತುಮಕೂರು | ಕೇಂದ್ರದಲ್ಲಿ ಇಂಡಿಯಾ ಒಕ್ಕೂಟಕ್ಕೆ ಅಧಿಕಾರ: ಗೃಹ ಸಚಿವ ಪರಮೇಶ್ವರ್

ದೇಶದ ಭವಿಷ್ಯವನ್ನು ನಿರ್ಧರಿಸುವ ಚುನಾವಣೆ ಇದಾಗಿದ್ದು, ರಾಜ್ಯದಲ್ಲಿ ಅತಿ ಹೆಚ್ಚು ಲೋಕಸಭಾ...

ಚೊಂಬು, ಗ್ಯಾಸ್ ಹೊರತುಪಡಿಸಿ ಶಾಂತಿಯುತ ಮತದಾನಕ್ಕೆ ಸಾಕ್ಷಿಯಾದ ಬೆಂಗಳೂರು

ಲೋಕಸಭಾ ಚುನಾವಣೆ ಹಿನ್ನೆಲೆ, ರಾಜ್ಯದ 14 ಕ್ಷೇತ್ರಗಳಿಗೆ ಏಪ್ರಿಲ್ 26ರಂದು ಮೊದಲ...