- ಬೀಗ ಮುರಿಯಲೆತ್ನಿಸಿದ ಕಾರ್ಯಕರ್ತರು
- ಜೆಡಿಎಸ್ ಕಚೇರಿ ಆವರಣದಲ್ಲಿ ನಡೆಯುತ್ತಿದ್ದ ಸಭೆ
ತುಮಕೂರು ನಗರದ ಜಿಲ್ಲಾ ಜೆಡಿಎಸ್ ಕಚೇರಿ ಆವರಣದಲ್ಲಿ ಬುಧವಾರ ಬಿಜೆಪಿ ಮತ್ತು ಜೆಡಿಎಸ್ ಮೖತ್ರಿಪಕ್ಷಗಳ ಸಮನ್ವಯ ಸಭೆಯನ್ನು ಆಯೋಜಿಸಲಾಗಿತ್ತು. ಈ ವೇಳೆ ಸಭೆಗೆ ಬಂದಿದ್ದ ಎರಡೂ ಪಕ್ಷಗಳ ಕಾರ್ಯಕರ್ತರು ಎದ್ದು ಹೋಗುವುದನ್ನು ತಡೆಯಲು, ಸಭೆಯ ಮುಖ್ಯ ದ್ವಾರಕ್ಕೆ ಬೀಗ ಹಾಕಿ, ಕೂಡಿಟ್ಟ ಘಟನೆ ನಡೆದಿದೆ.
ಗೇಟ್ಗೆ ಬೀಗ ಹಾಕಿದ್ದರಿಂದ ಕಾರ್ಯಕರ್ತರು ಹೊರಗಡೆ ಹೋಗಲು, ಒಳಗಡೆ ಬರಲು ಪರದಾಡಿದರು. ಮಹಿಳೆಯೊಬ್ಬರು ಬ್ಯಾಂಕ್ಗೆ ತೆರಳಬೇಕು, ಸಮಯ ಆಗುತ್ತಿದೆ. ಗೇಟ್ ಬೀಗ ತೆಗೆಯುವಂತೆ ಜೋರಾದ ಧ್ವನಿಯಲ್ಲಿ ಪ್ರವೇಶದ್ವಾರದ ಬಳಿ ಕಾಯುತ್ತಿದ್ದ ಮುಖಂಡರ ಬಳಿ ಹೇಳುತ್ತಿರುವುದು ಕೂಡ ಕಂಡುಬಂತು. ಮಹಿಳೆಯ ಜೊತೆಗೆ ಹಲವು ಕಾರ್ಯಕರ್ತರು ಕೂಡ ಹೊರ ಹೋಗಲು ಕಾಯುತ್ತಿದ್ದರು. ಆದರೆ ‘ಗೇಟ್ ಪಾಲಕ’ ಅವಕಾಶ ನೀಡಲಿಲ್ಲ. ಅಲ್ಲೇ ಇದ್ದ ಕೆಲ ಮಾಧ್ಯಮದ ಮಂದಿ, ಬೀಗ ಯಾಕೆ ಹಾಕುತ್ತಿದ್ದೀರಿ ಎಂದು ”ಗೇಟ್ ಪಾಲಕ’ರ ಬಳಿ ಕೇಳಿದಾಗ, “ಬೀಗ ಹಾಕಿಲ್ಲ. ಗೇಟಿಗೆ ಯಡಿಯೂರಪ್ಪನವರ ಫ್ಲೆಕ್ಸ್ ಅಂಟಿಸಿದ್ದು ಕಾಣಲಿ ಎಂದು ಬಂದ್ ಮಾಡಿದ್ದಷ್ಟೇ” ಎಂದು ಸಮಜಾಯಿಷಿ ನೀಡಿದರು.
ತುಮಕೂರು ನಗರದ ಜಿಲ್ಲಾ ಜೆಡಿಎಸ್ ಕಚೇರಿ ಆವರಣದಲ್ಲಿ ಬುಧವಾರ ಬಿಜೆಪಿ ಮತ್ತು ಜೆಡಿಎಸ್ ಮೖತ್ರಿಪಕ್ಷಗಳ ಸಮನ್ವಯ ಸಭೆಯನ್ನು ಆಯೋಜಿಸಲಾಗಿತ್ತು. ಈ ವೇಳೆ ಸಭೆಗೆ ಬಂದಿದ್ದ ಎರಡೂ ಪಕ್ಷಗಳ ಕಾರ್ಯಕರ್ತರು ಎದ್ದು ಹೋಗುವುದನ್ನು ತಡೆಯಲು, ಸಭೆಯ ಮುಖ್ಯ ದ್ವಾರಕ್ಕೆ ಬೀಗ ಹಾಕಿ, ಕೂಡಿಟ್ಟ ಘಟನೆ ನಡೆದಿದೆ.@JanataDal_S @VSOMANNA_BJP pic.twitter.com/QiZgIRim4p
— eedina.com (@eedinanews) March 27, 2024
ಹೊರಗಡೆ ಹೋಗದಂತೆ ತಡೆಯಲು ಬೀಗ ಹಾಕಿಕೊಂಡು ಹೋಗಿದ್ದರಿಂದ ತುರುವೇಕೆರೆ ಬಿಜೆಪಿ ಮಾಜಿ ಶಾಸಕ ಮಸಾಲೆ ಜಯರಾಮ್ ಮತ್ತು ಗುಬ್ಬಿ ಜೆಡಿಎಸ್ ಪಕ್ಷದ ಮುಖಂಡ ಬಿ. ಎಸ್. ನಾಗರಾಜು ಅವರು ಅಲ್ಪ ಹೊತ್ತು ಕಾದರು. ನಂತರ ತುರುವೇಕೆರೆ ಮಾಜಿ ಶಾಸಕ ಮಸಾಲೆ ಜಯರಾಮ್ ಬೀಗ ಒಡೆಯುವಂತೆ ಕಾರ್ಯಕರ್ತರಿಗೆ ಹೇಳಿದರು. ಅಷ್ಟೊತ್ತಿಗೆ ಜೆಡಿಎಸ್ ಮುಖಂಡರೊಬ್ಬರು ಬಂದು ಬೀಗ ತೆಗೆದರು. ಆ ಬಳಿಕ ಮುಖಂಡರೊಬ್ಬರು ಗೇಟ್ ಬಳಿಯೇ ನಿಂತು ಸಭೆಯಿಂದ ಹೊರಗಡೆ ಹೋಗುತ್ತಿದ್ದವರನ್ನು ತಡೆದು, ಮತ್ತೆ ಒಳಗೆ ಕಳಿಸುತ್ತಿದ್ದ ದೃಶ್ಯ ಕಂಡು ಬಂತು.
ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಮಾಡಿಕೊಂಡಿದೆ. ಜೆಡಿಎಸ್ ಮತ್ತು ಬಿಜೆಪಿ ಮೈತ್ರಿಯಿಂದಾಗಿ ಕೆಲ ನಾಯಕರಲ್ಲಿ ಅಸಮಾಧಾನವಿತ್ತು. ರಾಜ್ಯದ ಹಲವೆಡೆ ನಡೆಯುತ್ತಿರುವ ಮೈತ್ರಿ ಸಭೆಯಲ್ಲಿ ಜೆಡಿಎಸ್, ಬಿಜೆಪಿ ಕಾರ್ಯಕರ್ತರ ನಡುವೆ ವಾಗ್ವಾದ ಉಂಟಾಗುತ್ತಿರುವ ಸುದ್ದಿಗಳು ವರದಿಯಾಗುತ್ತಿದೆ. ತುಮಕೂರು ಜಿಲ್ಲೆಯ ತುರುವೇಕೆರೆಯಲ್ಲಿ ಕಳೆದ ಸೋಮವಾರ ನಡೆದ ಸಭೆಯಲ್ಲಿ ಮಾತಿನ ಚಕಮಕಿ ಉಂಟಾದ ಘಟನೆ ಕೂಡ ನಡೆದಿದ್ದು. ಬಿಜೆಪಿ ಅಭ್ಯರ್ಥಿ ವಿ ಸೋಮಣ್ಣ ಇದ್ದ ಸಭೆಯಲ್ಲೇ ಈ ಮಾತಿನ ಚಕಮಕಿ ಉಂಟಾಗಿ, ಇದೇ ವೇಳೆ ತಳ್ಳಾಟ-ನೂಕಾಟ ಕೂಡ ನಡೆದಿತ್ತು.
ವರದಿ: ಚಂದನ್, ತುಮಕೂರು