ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ. ಈ ಬೆನ್ನಲ್ಲೇ, ಜಿಲ್ಲೆಯಲ್ಲಿ ಬಿಜೆಪಿಗರನ್ನು ವಿಶ್ವಾಸಕ್ಕೆ ಪಡೆಯುಲು ಮುಂದಾಗಿದ್ದಾರೆ. ಮಾಜಿ ಸಚಿವ, ಬಿಜೆಪಿ ಮುಖಂಡ ಕೆ.ಸಿ ನಾರಾಯಣಗೌಡರ ಮನೆಗೆ ದೌಡಾಯಿಸಿದ್ದು, ಬೆಂಬಲ ಕೇಳಿದ್ದಾರೆ.
2019ರಲ್ಲಿ ಮೈತ್ರಿ ಸರ್ಕಾರವನ್ನು ಕೆಡವಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಸಮಯದಲ್ಲಿ ಜೆಡಿಎಸ್ ಶಾಸಕರಾಗಿದ್ದ ನಾರಾಯಣಗೌಡ, ಜೆಡಿಎಸ್ ತೊರೆದು, ಬಿಜೆಪಿ ಸೇರಿದ್ದರು. ಬಳಿಕ, ಉಪಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ, ಗೆದ್ದು, ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದರು. ಆದರೆ, 2023ರ ವಿಧಾನಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋಲುಂಡಿದ್ದರು.
2024ರ ಲೋಕಸಭಾ ಚುನಾವಣೆಯಲ್ಲಿ ಮಂಡ್ಯದಲ್ಲಿ ಬಿಜೆಪಿ ಟಿಕೆಟ್ ಕೇಳಬೇಕೆಂದು ನಾರಾಯಣಗೌಡ ಇಚ್ಚಿಸಿದ್ದರು. ಆದರೆ, ಸಂಸದೆ ಸುಮಲತಾ ಅವರು ಬಿಜೆಪಿಯಿಂದ ಸ್ಪರ್ಧಿಸುತ್ತಾರೆ ಎಂಬ ಮಾತುಗಳ ಬಂದ ಬಳಿಕ, ಟಿಕೆಟ್ ಕೇಳದೆ ಹಿಂದೆ ಸರಿದಿದ್ದರು. ಸುಮಲತಾ ಪರವಾಗಿ ಕೆಲಸ ಮಾಡಲು ಒಲವು ತೋರಿದ್ದರು. ಆದರೆ, ಮಂಡ್ಯವನ್ನು ಜೆಡಿಎಸ್ಗೆ ಬಿಜೆಪಿ ಬಿಟ್ಟುಕೊಟ್ಟಿದೆ. ಹೀಗಾಗಿ, ಬಿಜೆಪಿಯಲ್ಲಿ ಅಪಸ್ವರಗಳು ಹೆಚ್ಚಾಗಿದ್ದವು.
ಅದರಲ್ಲೂ, ಜೆಡಿಎಸ್ನಿಂದ ಕುಮಾರಸ್ವಾಮಿಯೇ ಕಣಕ್ಕಿಳಿದಿರುವುದು ಜೆಡಿಎಸ್ ತೊರೆದು ಬಿಜೆಪಿಗೆ ಬಂದಿದ್ದ ನಾರಾಯಣಗೌಡ, ಶಿವರಾಮೇಗೌಡಗೆ ನುಂಗಲಾರದ ತುತ್ತಾಗಿ ಪರಿಗಣಿಸಿದೆ. ಹೀಗಾಗಿ, ಸುಮಲತಾರನ್ನು ಸ್ವತಂತ್ರ್ಯ ಅಭ್ಯರ್ಥಿಯಾಗಿ ಕಣಕ್ಕಿಳಿಸುವ ತಂತ್ರ ಎಣೆಯುತ್ತಿದ್ದಾರೆ.
ಇದೆಲ್ಲವನ್ನೂ ಅರಿತಿರುವ ಕುಮಾರಸ್ವಾಮಿ, ಬುಧವಾರ (ಮಾರ್ಚ್ 27) ಬೆಂಗಳೂರಿನಲ್ಲಿರುವ ನಾರಾಯಣಗೌಡರ ನಿವಾಸಕ್ಕೆ ತೆರಳಿ, ತಮಗೆ ಬೆಂಬಲ ನೀಡುವಂತೆ ಮನವಿ ಮಾಡಿದ್ದಾರೆ. ಆದರೆ, 2019ರಲ್ಲಿ ಕುಮಾರಸ್ವಾಮಿ ವಿರುದ್ಧ ಸಾಲು-ಸಾಲು ಆರೋಪಗಳನ್ನು ಮಾಡಿದ್ದ ನಾರಾಯಣಗೌಡ ಜೆಡಿಎಸ್ ನಾಯಕರ ಮೇಲೆ ಭಾರೀ ಅಸಮಾಧಾನಗೊಂಡಿದ್ದಾರೆ. ಹೀಗಾಗಿ, ಅವರು ಕುಮಾರಸ್ವಾಮಿ ತಂತ್ರಕ್ಕೆ ಮಣಿಯುವರೇ ಎಂಬುದು ಕುತುಹಲಕಾರಿ ವಿಚಾರ.
ಈ ನಡುವೆ, ಸಚಿವ ಚಲುವರಾಯಸ್ವಾಮಿಯೊಂದಿಗೆ ಉತ್ತಮ ಒಡನಾಟವನ್ನೂ ಹೊಂದಿರುವ ನಾರಾಯಣಗೌಡ ಕಾಂಗ್ರೆಸ್ ಸೇರಬಹುದು ಎಂಬ ಮಾತುಗಳೂ ಇವೆ. ಆದರೆ, ಕಾಂಗ್ರೆಸ್ಗೆ ಹೋಗುವ ಇರಾದೆ ಇಲ್ಲವೆಂದು ಅವರು ಹೇಳಿದ್ದಾರೆ.
ಇದೀಗ, ಕುಮಾರಸ್ವಾಮಿಗೆ ಬೆಂಬಲ ನೀಡುವರೇ? ಅಥವಾ ಸುಮಲತಾರನ್ನು ಅಕಾಡಕ್ಕಿಳಿಸಿ, ಕುಮಾರಸ್ವಾಮಿ ಅವರನ್ನು ಕಟ್ಟಿಹಾಕುವರೇ? ಎಂಬುದು ಎಲ್ಲರ ಚಿತ್ತ ಸೆಳೆಯುತ್ತಿದೆ.